Sunday, June 5, 2011

ಕಾಂಗ್ರೆಸ್ ಗೆ ಜೈ

ನಂಗೆ ಈ ಕಾಂಗ್ರೆಸ್ ಕಂಡ್ರೆ ಅಬ್ಬಾ ಅನ್ಸುತ್ತೆ. ಅಧ್ಬುತ ರಾಜಕೀಯ ನ ಅವರಿಂದ ಕಲಿಬೇಕು ಕಣ್ರೀ. ಒಂದು ಗೊಂಬೆ ನ ತಂದು ಇದು ದೇಶದ ಪ್ರಧಾನಿ ಅಂತ ಹೇಳುತ್ತೆ. ಅಕ್ಕಿ, ಬೇಳೆ, ಪೆಟ್ರೋಲ್ ಮುಂತಾದವು ಗಗನಕ್ಕೆ ಹೋಗಿದ್ದರೂ (ಇಲ್ಲ ಬಿಡಿ, ಗಗನ ಅಲ್ಲ. ಪೆಟ್ರೋಲ್ ಚಂದ್ರ ಲೋಕ ಸೇರಿದೆ ) ಪಾಕೆಟ್ ನಲ್ಲಿ ಹಣ ಸೇರ್ಸೋದ್ರಲ್ಲಿ ನಿರತವಾಗಿ ಬಿಡುತ್ತದೆ. ಇನ್ನೇನಾದ್ರು ಹೋರಾಟ ಮಾಡ್ತಿವಿ ಅಂದ್ರೆ ಸಂದಾನ ದ ನಾಟಕ ಆಡಿ, ಆಮೇಲೆ ನನಗೂ ಅದಕ್ಕೂ ಏನೂ ಸಂಬಂದ ಇಲ್ಲ ಅಂತ ನಿಧಾನ ಮಾಡುತ್ತೆ. ಇದೆ ಸಮಯಕ್ಕೆ ಸಿಬಲ್, ದಿಗ್ವಿಜಯ್, ಮೊಯ್ಲಿ ಮುಂತಾದ ಕೊಳಕುಗಳ ಮೂಲಕ ಹೋರಾಟಗಾರ ಚಾರಿತ್ರವಧೆಗೆ ಮುಂದಾಗಿ ಬಿಡುತ್ತದೆ. ಇಷ್ಟರಲ್ಲಾಗಲೇ ಜನಕ್ಕೆ ಹೋರಾಟದ ನೆನಪೇ ಹೋಗಿರುತ್ತೆ.

ಆದರೆ ಹೋರಾಟಗಾರರು ದೈರ್ಯ ಕಳೆದು ಕೊಳ್ಳಬೇಕಾದ ಅಗತ್ಯ ಇಲ್ಲ. ಈ ಹೋರಾಟದ ಬಗ್ಗೆ ನಾನು ಅಮೂಲಾಗ್ರ ವಾಗಿ ಚಿಂತಿಸಿ, ಚರ್ಚಿಸಿ ಹಾಗು ಯೋಚಿಸಿ ಕೆಳಕಂಡ ವಿಚಾರ ಮಂಡಿಸಿದ್ದೇನೆ. ಜನರು ಇದನ್ನು ಓದಿ, ಅರ್ಥೈಸಿ, ಮುಂದಿನ ನಡೆಯನ್ನು ಇಟ್ಟರೆ ದೇಶದ ನಾಯಕಿ ಸೋನಿಯಾ, ಭಾವಿ ಪ್ರಧಾನಿ ರಾಹುಲ ಮುಂತಾದವರ ಗಮನ ಸೆಳೆದು ಜಯಗಳಿಸಬಹುದಾಗಿದೆ.

೧. ಸುಖಾ ಸುಮ್ಮನೆ ಉಪವಾಸ ಕೂತುಕೊಂಡು ಸರ್ಕಾರಕ್ಕೆ "ಪ್ರಾಮಾಣಿಕವಾಗಿ" ಕೆಲಸ ಮಾಡಿ ಅಂದ್ರೆ ಹೆಂಗೆ ಸ್ವಾಮೀ? ಸತ್ಯಾಗ್ರಹಿಗಳು ಯಾರೂ ಇತಿಹಾಸ ದಿಂದ ಪಾಠ ಕಲಿತಿಲ್ಲ ಅಂತ ತೋರುತ್ತಿದೆ. ೨ ಜಿ ಹಗರಣ ದಲ್ಲಿ ಮುಖ್ಯ ಪಾತ್ರಧಾರಿ ಯಾಗಿದ್ದ "ನೀರಾ ರಾಡಿಯ " ತರದ ಲಾಬಿ ಮಾಡುವವರು ಬೇಕು. ಅದರಲ್ಲೂ ಒಬ್ಬ ಸುಂದರ ಮಹಿಳೆ ಮಧ್ಯವರ್ತಿ ಆದ್ರೆ ಫಲ ನಿಶ್ಚಿತ!

೨. ಬಾಬಗಿರಿ, ಗಾಂಧಿಗಿರಿ ಇಂದ ಏನೂ ಆಗೋಲ್ಲ. ಸದ್ಯಕ್ಕೆ ಸತ್ಯಾಗ್ರಹಿಗಳಿಗೆ "ಟೇಪ್ ಗಿರಿ " ಮಾಡಬೇಕಿದೆ. ಕಾಂಗ್ರೆಸ್ ಮಂತ್ರಿ ಗಳ ಮಾತುಕತೆ ಯನ್ನ ರೆಕಾರ್ಡ್ ಮಾಡಿ ಅವರನ್ನ ಬ್ಲಾಕ್ ಮೇಲ್ ಮಾಡಬೇಕು. ಅ ಟೇಪ್ ನಲ್ಲಿ ಒಂದಿಷ್ಟು ಸಿನೆಮಾ ನಟಿಯರ ಸ್ವರ ಸೇರಿಸಿದರೆ ಬಹಳ ಒಳ್ಳೇದು.

೩. ಮುಖ್ಯವಾಗಿ ಈ ಹೋರಾಟಗಾರರ ಬೇಡಿಕೆ ನೆ ಸರಿ ಇಲ್ಲ. ಬ್ರಷ್ಟಾಚಾರ ಬೇಡಂತೆ, ಕಪ್ಪು ಹಣ ವಾಪಾಸ್ ತರಬೇಕಂತೆ, ಲೋಕಪಾಲ ಮಸೂದೆ ಜಾರಿಗೆ ತರಬೇಕಂತೆ. ಒಂದಾ? ಎರಡ? ನಂಗೆ ಅನ್ಸುತ್ತೆ ಈ ಬೇಡಿಕೆಗಳನ್ನ ಸ್ವಲ್ಪ ಬದಲಿಸ ಬೇಕಾದ ಅಗತ್ಯ ಇದೆ. ಮೊದಲು
೧. ಬ್ರಷ್ಟಾಚಾರವನ್ನ ರಾಷ್ಟ್ರೀಕರಣ ಮಾಡಬೇಕು.
೨. ವಿದೇಶಿ ಬ್ಯಾಂಕ್ ಗಳಲ್ಲಿ ಹಣ ಇಟ್ಟರೆ ಅಲ್ಲಿ ಅದಕ್ಕೆ ಬಡ್ಡಿ ದೊರಕುವುದಿಲ್ಲ ವಾದ್ದರಿಂದ ಸರ್ಕಾರ ಅವರಿಗೆ ವಾರ್ಷಿಕ ೪೦ ಶೇಕಡಾ ಬಡ್ಡಿ ಕೊಡಬೇಕು.
೩. ಲೋಕಪಾಲ ಬದಲು ಶಿಶುಪಾಲ ಕಾಯಿದೆ ಜಾರಿಗೆ ತರಬಹುದು. ಇದರಿಂದ ಹೊಲಸು ಬಾಯಿಯ ದಿಗ್ವಿಜಯ್ ಸಿಂಗ್ ಮುಂತಾದವರಿಗೆ ಬಹಳ ಸಹಾಯ ಆಗುತ್ತದೆ.

ಈಥರ ಏನಾದ್ರೂ ಮಾಡಿದ್ರೆ ಸ್ವಲ್ಪ ಫಲವನ್ನ ಕಾಣಬಹುದಾಗಿದೆ. ಇಲ್ಲ ಅಂದ್ರೆ ಕಾಂಗ್ರೆಸ್ "ಉಪವಾಸದಿಂದ ಒಳ್ಳೇದು" ಕನಿಷ್ಠ ಹಣದುಬ್ಬರ ನಾದ್ರೂ ಇಳಿಯುತ್ತೆ ಅಂತ ಹೇಳಿದ್ರು ಹೇಳಬಹುದು. ಇಲ್ಲಾ, ರಾತ್ರೆ ಕಾರ್ಯಾಚರಣೆ ಮುಂದುವರೆಸುತ್ತೆ.