Thursday, December 27, 2018

2019 - ಯಾರಾಗ್ತಾರೆ ಪ್ರಧಾನಿ - ಭಾಗ 1




ಇನ್ನೇನು ಕೆಲವೇ ತಿಂಗಳುಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆಮುಂದೆ ಯಾರು ಪ್ರಧಾನಿ ಆಗುತ್ತಾರೆಮೋದಿ ಮತ್ತೊಮ್ಮೆ ಬರಬಹುದಾಕಾಂಗ್ರೆಸ್ನ ರಾಹುಲ್ ಆಗಬಹುದೇಅಥವಾ ಅದರ ಮಿತ್ರ ಪಕ್ಷಗಳಿಗೆ ಅವಕಾಶ ಸಿಗಬಹುದೇ ಅನ್ನುವುದು ಈ ಕ್ಷಣದ ಒಳ್ಳೆಯ ಚರ್ಚೆಯ ವಿಷಯ.

ವಯಕ್ತಿಕವಾಗಿ ಅನ್ನಿಸುವುದೇನೆಂದರೆ ನಮ್ಮ ಪ್ರಾದೇಶಿಕ ಪಕ್ಷಕ್ಕೆ ಬಹುಮತ ಸಿಗಬೇಕು. ಕನಿಷ್ಠ.. ಬಹುಮತದ ಸಮೀಪ ಆದರೂ ಬರಬೇಕು. ಆಮೇಲೆ ದೇಶದ ಹಿತದೃಷ್ಠಿಯಿಂದ ನಮ್ಮ ದೊಡ್ಡ ಗೌಡ್ರೆ ಪ್ರಧಾನಿ ಆಗಬೇಕು. ಕಾರಣಗಳು ಕೆಳಗಿನಂತಿವೆ.


1. ಭ್ರಷ್ಟಾಚಾರ ಕಮ್ಮಿ ಆಗುತ್ತೆ.
ಹೌದು. ದೊಡ್ಡ ಗೌಡ್ರು ಕುರ್ಚಿಲಿ ಕುಂತ್ರೆಒಬ್ಬ ಮಗ ಹೋಮುಮತ್ತೊಬ್ಬ ಹಣಕಾಸುಸೊಸೆ ವಿದೇಶಾಂಗಸಿನೆಮಾ ನಟ ಮೊಮ್ಮಗನಿಗೆ  ರಕ್ಷಣೆ ಇತ್ಯಾದಿಯಾಗಿ ಖಾತೆ ಹಂಚಬಹುದು. ಖಾಲಿ ಇರೋ ಮತ್ತೊಬ್ಬ ಮೊಮ್ಮಗನನ್ನ ಕರ್ನಾಟಕದ ಮುಮ ಮಾಡಬಹುದು.
ಸರಿಯಾಗಿ ಯೋಚಿಸಿ. ಇದರಿಂದ ದೇಶಕ್ಕೆ ಆಗೋ ಲಾಭ ಅಷ್ಟಿಟ್ಟಲ್ಲ. ಉದಾಹರಣೆ ಸಮೇತ ವಿವರಿಸಬೇಕು ಎಂದರೆ.. ಹಿಂದಿನ ಸರಕಾರದಲ್ಲಿ ನಡೆದ 2ಜಿ ತರಂಗಾಂತರ ಹಗರಣ ನೆನಪು ಮಾಡಿಕೊಳ್ಳಿ. ದೂರಸಂಪರ್ಕ ಮಂತ್ರಿಗೆ ಇಷ್ಟುಆಮೇಲೆ ಹಣಕಾಸು ಮಂತ್ರಿಗೆ ಇಷ್ಟುಆಮೇಲೆ ಆ ಪಕ್ಷದ ಹೆಡ್ಡಿಗೆ ಇಂತಿಷ್ಟು ಎಂದೆಲ್ಲಾ ಹಂಚಿಕೆ ಆಗಿತ್ತು. ಆದ್ರೆನಮ್ಮ ಪ್ರಾದೇಶಿಕ ಪಕ್ಷ ಬಂದ್ರೆ ಈ ರೀತಿ ನಡೆಯೋಕೆ ಸಾಧ್ಯವೇ ಇಲ್ಲ. ಎಲ್ಲರೂ ಒಂದೇ ಕುಟುಂಬದಿಂದ ಬಂದಿರುವುದರಿಂದನಾಕಾರು ಜನಕ್ಕೆ ನಾಕಾರು ಭಾಗ ಹಂಚುವ ಅಗತ್ಯ ಇರುವುದಿಲ್ಲ. ಈ ಕುಟುಂಬಕ್ಕೆ ಇಷ್ಟು ಅಂತ ಕೊಟ್ಟರೆ ಸಾಕು. ಹಿಂದೆ ದೊಡ್ಡ ಮೇಡಂ ಪಕ್ಷಕ್ಕೆ ಕೊಡ್ತಾ ಇದ್ರಲ್ಲ ಹಾಗೆ. ನೋಡಿಎಷ್ಟು ದುಡ್ಡು ಉಳಿತು ಆಲ್ವಾಅಷ್ಟರ ಮಟ್ಟಿಗೆ ಬ್ರಷ್ಟಾಚಾರ ಕಡಿಮೆ ಆಗುತ್ತೆ.


2. ಅರ್ಥಿಕ ಪರಿಸ್ಥಿತಿ ಸುಧಾರಿಸುತ್ತೆ.
ಹೌದು. ದೇಶದ ಅರ್ಥಿಕ ಪರಿಸ್ಥಿತಿ ಖಂಡಿತಾ ಸುಧಾರಿಸುತ್ತೆ. ಯಾಕೆಂದರೆಇವರಾರಿಗೂ ಇಟಲಿ ದೇಶದಲ್ಲಿ ನೆಂಟರಿಲ್ಲಅವರ ಜೀವನ ಸುಧಾರಿಸಬೇಕು ಎಂಬ ತಲೆಬಿಸಿ ಇಲ್ಲ. ಬಂದ ಅಷ್ಟೂ ಹಣ ಬಹುಪಾಲು ದೇಶದ ಒಳಗೇ ಉಳಿಯುತ್ತೆ. ಅದರಿಂದ ರುಪಾಯಿಗೆ ಬಲ ಬರುತ್ತೆ. ಹಾಗಾದಾಗಪೆಟ್ರೋಲ್ ರೇಟು ಇನ್ನೂ ಕಮ್ಮಿ ಆಗುತ್ತೆ. ಪೆಟ್ರೋಲ್ ರೇಟು ಕಮ್ಮಿ ಆದ್ರೆದೇಶ ಏಕ್ದಂ ಉದ್ದಾರ ಆಗುತ್ತೆ. ಇವರೆನಾದ್ರು 4-5 ವರುಷ ಅದೇ ಸ್ಥಾನದಲ್ಲಿ ಇದ್ದರೆಅಮೇರಿಕಾದ ಆರ್ಥಿಕತೆ ಸಿ ಮೈನಸ್ ಗೆ ಹೋದರೂ ಹೋಗಬಹುದು. ಪಾಪ ಟ್ರಾ0ಪು.


3. ಜನರ ಅರೋಗ್ಯ ಸುಧಾರಿಸುತ್ತೆ.
ಇತ್ತೀಚಿಗೆ ನಮ್ಮ ಮಹಾನಗರಗಳ ಜನರಿಗೆ ಆರೋಗ್ಯದ ಬಗ್ಗೆ ವಿಪರೀತ ಕಾಳಜಿ ಬಂದಿದೆ. (ಇದಕ್ಕೆ ಪರೋಕ್ಷ ಕಾರಣ, ಹೆಚ್ಚಿರುವ ಆಸ್ಪತ್ರೆಅಲ್ಲಿನ ಡಾಕ್ಟರುಗಳ ಮೇಲಿರುವ ಟಾರ್ಗೆಟ್ ಭೂತಸುಖಾ ಸುಮ್ಮನೆ ಮಾಡುವ ಚೆಕಪ್ ಗಳು ಇರಬಹುದು. ಬಿಡಿ ಅದು ಸದ್ಯದ ವಿಷಯ ಅಲ್ಲ) ಕಿರುಧಾನ್ಯಗಳನ್ನು ಕೊಂಡು ತಿನ್ನುವ ಚಟ ಆವರಿಸಿ ಬಿಟ್ಟಿದೆ. ಅದರ ಅಡುಗೆ ಮಾಡುವ ವಿಧಾನ ತಿಳಿಸಿ ಕೊಡಲು ಸಾಕಷ್ಟು ಟೀವಿ ಕಾರ್ಯಕ್ರಮ ಬರುತ್ತಲೇ ಇರುತ್ತೆ. ಅಷ್ಟೇಕೆ ಫೇಸ್ಬುಕ್ಯು ಟ್ಯೂಬ್ ನಲ್ಲಿ ಸಾಕಷ್ಟು ಮಾಹಿತಿ ಸಿಗುತ್ತೆ ಕೂಡ. ನಮ್ಮ ಗೌಡರಿಗೆ ಮುದ್ದೆ ಇಷ್ಟ. ಅಂದ್ರೆ ರಾಗಿಗೆ ಬಹಳ ಜನಪ್ರೀಯತೆ ಸಿಗುತ್ತೆ. ಜನ ಅದನ್ನು ಕೊಳ್ಳಲು ಶುರು ಮಾಡುತ್ತಾರೆ. ಅರೋಗ್ಯ ಹೆಚ್ಚಿಸಿ ಕೊಳ್ಳುತ್ತಾರೆ.


4.ಜನ ಜೀವನ ಸುಧಾರಿಸುತ್ತೆ.
ಮಾಜಿ ಪ್ರಧಾನಿಗಳು ನಿದ್ದೆ ಪ್ರಿಯರು. ಒಹ್ ಸಾರಿ ಹಗಲೊತ್ತು ಅಂತರ್ಮುಖಿಯಾಗಿ ದೇಶದ ಬಗ್ಗೆ ಚಿಂತೆ ಮಾಡುವವರು. ಆದ್ರೆ ಜನ ಇದನ್ನು ನಿದ್ದೆ ಎಂದು ತಿಳಿಯುವರು. ಸಾಕಷ್ಟು ಜನ ರಾತ್ರೆ ಪಾಳಿಯಲ್ಲಿ ದುಡಿಯುವವರು ಕೆಲಸ ಬದಲಿಸಬಹುದು. ಅಥವಾ ಕಂಪನಿಗಳೇ ಬೇರೆ ಕಡೆ ಹೋಗಬಹುದು. ಒಟ್ಟಾರೆ ಕಿರು ಧಾನ್ಯ ತಿಂದು, ರಾತ್ರೆ ಒಳ್ಳೆ ನಿದ್ರೆ ಮಾಡಬಹುದು. ಇದರಿಂದ ಜನ ಜೀವನ ಸುಧಾರಿಸಿ, ಭಾರತ ಖಂಡಿತಾ ವಿಶ್ವಗುರು ಆಗಬಹುದು.


ಈಗ ಒಂದು ಪ್ರಶ್ನೆ. ಅಕಸ್ಮಾತ್ ನಮ್ಮ ಈಗಿನ ಮುಮ ಮುಂದಿನ ಪ್ರಧಾನಿ ಆದ್ರೆ? ಒಬ್ಬ ಕಾರ್ಯಕರ್ತನ ಸಾವಿಗೆ ಶೂಟ್ ಮಾಡಿ ಎಂದವರು, ಪಾಕಿಸ್ತಾನ ನಮ್ಮ ಸೈನಿಕರಿಗೆ ಗುರಿ ಇಟ್ಟರೆ ಬಿಡುತ್ತಾರಾ? ದಿನಕ್ಕೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿ... ಅದನ್ನು ನಾಶ ಮಾಡುವುದಿಲ್ಲವೇ?


ಇರಲಿ. ಈಗ ಇಷ್ಟು ಸಾಕು.
ನಮ್ಮ ಮುಂದಿನ ಸಂಚಿಕೆಯಲ್ಲಿ ಶ್ರೀ ಜೂನಿಯರ್ ಗಾಂಧೀ ಅವರು ಪ್ರಧಾನಿ ಆದರೆ ಆಗುವ ಲಾಭಗಳನ್ನು ವಿವರಿಸುತ್ತೇನೆ.
ಅಲ್ಲಿಯ ತನಕ ನಿಮ್ಮ ಮತಗಳನ್ನು ಪ್ರಾದೇಶಿಕ ಪಕ್ಷಕ್ಕೇ ಮೀಸಲಿಡುವಂತೆ ಕೇಳಿಕೊಳ್ಳುತ್ತೇನೆ.

Tuesday, November 14, 2017

ಧಾರಾವಾಹಿ ಪ್ರಪಂಚ



ಇತ್ತೀಚಿಗೆ ನನಗೆ ಕೆಲವು ದಿನಗಳ ಮಟ್ಟಿಗೆ ಟೀವಿ ಧಾರವಾಹಿ ನೋಡುವ ಅವಕಾಶ ಒದಗಿ ಬಂದಿತ್ತು. (ಅನಿವಾರ್ಯ ಕಾರಣಗಳಿಂದಾಗಿ ಎಂದು ಹೇಳಬೇಕಾಗಿಲ್ಲವಷ್ಟೇ ) ಅದನ್ನು ಗಮನಿಸಿದ ನಂತರ ಪ್ರಪಂಚವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಯಿತು. ನನ್ನಂತ ಸಾಕಷ್ಟು ಜನ ಪುರುಷಪುಂಗವರು, ಮಹಿಳೆಯರು ಟೀವಿ ನೋಡೋ ಸಮಯದಲ್ಲಿ ಸ್ನೇಹಿತರೊಡನೆ ಶರಬತ್ತು ಕುಡಿಯುತ್ತಾ ಕಾಲ ಕಳೆಯುವರು ಅಥವಾ ರಂಗಣ್ಣ - ರಾಧಮ್ಮನ ಶಬ್ದ ಮಾಲಿನ್ಯವನ್ನು ಸಹಿಸುವರು ಎಂದು ತಿಳಿದಿದೆ. ಅವರನ್ನು ಜ್ಞಾನ ಮಾರ್ಗಕ್ಕೆ ಕರೆದು ತರುವುದೇ ಜನ್ಮ ಸಾರ್ಥಕ್ಯವೆಂದು ನನಗೆ ತೋರುತ್ತಿದೆ.


ಆದರೆ ಇದಕ್ಕಾಗಿ ನೀವು ನನಗೆ ವಿಶೇಷ ಅಭಿನಂದನೆ ತಿಳಿಸಬೇಕಾದ ಅಗತ್ಯ ಇರುವುದಿಲ್ಲ. ಯಾಕೆಂದರೆ ..
ವೀರನಾರಾಯಣನೆ ಕವಿ ನಾನು ಕೇವಲ ಲಿಪಿಕಾರ ಎಂದು ಕುಮಾರ ವ್ಯಾಸ ಬರೆದುಕೊಳ್ಳುತ್ತಾನೆ. ಅದೂ ಅಲ್ಲದೆ, ಜ್ಞಾನವು ಅಪೌರುಷೇಯ ಎನ್ನುತ್ತದೆ ಪರಂಪರೆ. ಹಾಗಾಗಿ ನಿಮ್ಮ ಮೆದುಳಿನ ಸೂಕ್ಷ ತರಂಗಗಳನ್ನು ಬಡಿದೆಬ್ಬಿಸಿ, ಮಂಡೆಯನ್ನು ಹೆಚ್ಚು ಚುರುಕು ಮಾಡುವುದಷ್ಟೇ ನನ್ನ ಕೆಲಸ.
ಹಾಗಾಗಿ ತಡ ಮಾಡದೇ ಕೆಳಗಿನ ಧಾರವಾಹಿ ಜಗತ್ತಿನಲ್ಲಿ ನಾನು ಕಂಡುಕೊಂಡ ಸತ್ಯ ತಿಳಿದು ಜೀವನವನ್ನು ಸಂತೋಷ, ಎಚ್ಚರದಿಂದ ಕಳೆಯಿರಿ.

1.       ಮನೆಗೆ ಯಾರೇ ಸುಂದರ ಹುಡುಗಿ ಬಂದರೂ.. ಅದು ಹಾವು ಆಗಿರಬಹುದು. ನಿಮ್ಮ ಮನೆಗೆ ಅಕಸ್ಮಾತ್ ಆಗಿ ನಾಗಮಣಿ ಬಂದಿರಬಹುದು. ಅಥವಾ ನೀವು ಕೂತ ಕಾರು – ಬಸ್ಸು.. ಎತ್ತಿನ ಗಾಡಿ ಹಾವಿನ ಬಾಲವನ್ನು ಮೆಟ್ಟಿರಬಹುದು. ಆ ಸೇಡಿಗೆ ನಾಗಿಣಿ ಬಂದಿರಬಹುದು. ಹಾಗಾಗಿ ಯಾವುದಕ್ಕೂ ಒಂದು ಪುಂಗಿ ಇಟ್ಟುಕೊಂಡು ಓಡಾಡೋದು ಒಳಿತು!

2.       ಗಹನವಾದ ಚರ್ಚೆ ಅಥವಾ ಮನೆಯಲ್ಲಿ ಶುಭ ಕಾರ್ಯ ನಡೆಯುತ್ತಿರುವಾಗ, ಗಂಡನಿಗೆ ಆಫೀಸ್ ನಿಂದ ಕರೆ ಬಂದರೆ... ಅದು ದೇವರಾಣೆ ಕಚೇರಿಯಿಂದ ಆಗಿರುವುದಿಲ್ಲ. ಆತನ ಹಳೇ ಗೆಳತಿ ಆಗಿರಬಹುದು. ಕಣ್ಣಿಡುವುದು ಒಳಿತು.

3.       ಯಾರದ್ರು ಮೆಡಿಕಲ್ ಶಾಪ್ ಗೆ ಹೋದರೆ, ಅವರು ವಿಷವನ್ನು ಕೊಳ್ಳಲು ಹೋಗುತ್ತಾ ಇದ್ದಾರೆ ಎಂದೇ ಭಾವಿಸಬೇಕು! ಈ ಜನಗಳಿಗೆ ಅದು ಹೇಗೋ, ಎಷ್ಟು ಬೇಕಾದ್ರೂ ನಿದ್ರೆ ಮಾತ್ರೆಗಳು ಸಿಗುತ್ತವೆ. ಕಾರ್ಕೋಟ ವಿಷದ ಪುಡಿಗಳು ಕೈ ತುದಿಯಲ್ಲೇ ಇರುತ್ತದೆ. ಪ್ರೀತಿಯಿಂದ ಮನೆಯಲ್ಲಿ ಹಾಲು ಕೊಟ್ಟರೆ ಅದು.. ಪ್ರಾಣವನ್ನೇ ತೆಗೆಯಬಹುದು.

4.       ನಿಮ್ಮ ವೈರಿಗಳನ್ನು ಏನೇ ಮಾಡಿದರೂ ಸಾಯಿಸಲು ಸಾಧ್ಯವಿಲ್ಲ. ಸುಪಾರಿ ಕೊಟ್ಟರೂ, ಬಾಂಬು ಸಿಡಿಸಿದರೂ, ಕೊನೆಗೆ ಹುಲಿ ಬಾಯಿಗೆ ತಳ್ಳಿದರೂ ... ಉಹುಂ. ಸಾವೇ ಇಲ್ಲ. ಎಲ್ಲಾ ಶಾಶ್ವತ. (ಧಾರಾವಾಹಿ ನೋಡೋರನ್ನು ಬಿಟ್ಟು )

5.       ನಾನು ಮೊದಲೆಲ್ಲಾ ದೇವರು ಸ್ವರ್ಗದಲ್ಲೋ, ಹಿಮಾಲಯದಲ್ಲೋ ... ಇರುವನೆಂದು ಭಾವಿಸಿದ್ದೆ. ಈಗ ಆತ ಪ್ಲಾಸ್ಟಿಕ್ ಸೆಟ್ ನಲ್ಲಿ ವಾಸಮಾಡುತ್ತಾನೆ ಎಂದು ತಿಳಿದು ಬಹಳ ಖೇದವಾಗುತ್ತಿದೆ! L

6.       ಕನ್ನಡದಲ್ಲಿ ಕನಿಷ್ಠ 6 ಮನೋರಂಜನಾ ಚಾನೆಲ್ ಇದೆ. ಒಂದೊಂದರಲ್ಲಿ ಕನಿಷ್ಠ 8 ಮೆಗಾ ಧಾರವಾಹಿ ಬರುತ್ತಲಿದೆ ಎಂದರೆ, ದಿನಕ್ಕೆ 45 -50 ಧಾರಾವಾಹಿಗಳು! ಪ್ರತೀ ಮನೆಯಲ್ಲಿಯೂ ಒಂದು ಅತ್ತೆ, ಸೊಸೆ, ಮಗ, ಮಗಳು, ಅಡುಗೆಯವರು, ನಾದಿನಿ.. ಇತ್ಯಾದಿ. ಆಮೇಲೆ ಸೊಸೆಯ ಕುಟುಂಬ, ಸೊಸೆಯನ್ನು / ಅತ್ತೆಯನ್ನು ಕೊಲ್ಲಲು ಅಂತಲೇ ಇರುವ ಸುಪಾರಿ ಕೊಲೆಗಾರರು.. ಹೀಗೆ ಸಾಕಷ್ಟು ಮನೆಗಳು ಬರುತ್ತವೆ. ಅವರಿಗೆ ಸಾಕಷ್ಟು ಸಮಯವೂ ಇದ್ದಂತೆ ತೋರುತ್ತದೆ. ಆದರೆ, ಯಾರೂ ಧಾರವಾಹಿ ನೋಡುವುದಿಲ್ಲ. ಅವರೇ ನೋಡುವುದಿಲ್ಲ ಎಂದಮೇಲೆ ನಾವು ನೋಡಬೇಕೆ? ಪುಟ್ಟಗೌರಿ ಅಜ್ಜಿ,.. ಯಾವ ಧಾರವಾಹಿ ನೋಡುತ್ತಾಳೆ ?

7.       ಕೊನೆಯ ಮತ್ತು ಅತ್ಯಂತ ಹೆಚ್ಚಿನ ದುರಂತ ಏನು ಅಂದರೆ... ಸಾಮಾನ್ಯವಾಗಿ ಧಾರಾವಾಹಿಯ ಎಲ್ಲಾ ಗಂಡು ಜೀವಿಗಳಿಗೆ ಒಂದೊಂದು ಎಕ್ಸ್ಟ್ರಾ ಸಂಬಂಧ ಇರುತ್ತದೆ. ಬಡ್ಡಿ ಮಗಂದು ನಿಜ ಜೀವನದಲ್ಲಿ ಒಂದೂ ಇರಲ್ಲ. ಆದರೂ ಹೆಂಡ್ತಿ ಅನುಮಾನ ಪಡ್ತಾಳೆ! L



ಸದ್ಯಕ್ ಸಮಾಪ್ತಿ!


Friday, September 22, 2017

ಜನ್ನತ್ ಭಾಗ್ಯ




ನೀವು ನನ್ನ ಮಾತನ್ನು ಒಪ್ಪದೇ ಹೋಗಬಹುದು.
ಸಿದ್ದರಾಮನ ಭಕ್ತ ಎಂದು ಜರಿಯಬಹುದು.
ನನ್ನ ಮೇಲೆ ನೀವು ಕಾಮೆಂಟ್ / ಬೆದರಿಕೆ ಅಸ್ತ್ರ ಜಡಿಯಬಹುದು.
ಇರಲಿ. ಒಳ್ಳೆಯದನ್ನು ಗುರುತಿಸುವುದಕ್ಕೆ, ಹೊಗಳುವುದಕ್ಕೆ ಯಾವ ಅಂಜಿಕೆಯೂ ನನಗಿಲ್ಲ.

ಸದ್ಯಕ್ಕೆ ಕರುನಾಡು ಅತ್ಯಂತ ಪ್ರಗತಿ ಹೊಂದಿದ ರಾಜ್ಯ ಎಂದೇ ನನ್ನ ಭಾವನೆ.
ಕಾರಣ ಇಷ್ಟೇ,
ಇಲ್ಲಿನ ಪೋಲಿಸರೋಬ್ಬರನ್ನು ಬಿಟ್ಟು, ಮಿಕ್ಕ ಎಲ್ಲಾ ಜನರು ವಿಪರೀತ ಬುದ್ದಿವಂತರಾಗಿದ್ದಾರೆ.!

ಬೇಕಿದ್ರೆ ಗಮನಿಸಿ.
ಡಿ.ಕೆ ರವಿ ಹಾಗೂ ಡಿವೈಎಸ್ಪಿ ಗಣಪತಿ ಅನುಮಾನಾಸ್ಪದ ಸಾವಿಗೆ ಈಡಾದಾಗ, ನಮ್ಮ ಪೋಲಿಸರಿಗಿಂತಲೂ ಪತ್ರಿಕೆಗಳು – ಟೀವಿ ನ್ಯೂಸ್ ಗಳು ತರಹೇವಾರಿ ತನಿಖೆ ಮಾಡಿದವು. ಒಂದು ಟ್ಯಾಬ್ಲಾಯ್ಡ್ ಅಂತೂ... ರವಿ ಅವರು, ಯಾವುದೋ ಮಹಿಳೆಗೆ 40 – 50 ಕಾಲ್ ಮಾಡಿದ್ದರು ಎಂದೆಲ್ಲ ವರದಿ ಮಾಡಿದ್ದರು. ಗಣಪತಿಯವರ ಆರೋಗ್ಯದ ಬಗ್ಗೆ ಏನೆಲ್ಲಾ ಹೇಳಿಕೆ ಕೊಟ್ಟರು. ಆದರೆ ನಮ್ಮ ಪೊಲೀಸರು ಮಾತ್ರ, ಯಾವ್ದೋ ಹಳೇ ಸಿ ಸಿ ಟೀವಿ ಫೂಟೆಜ್ ಇಟ್ಕೊಂಡು ಕೂತಿದ್ರು! ಈ ಪತ್ರಿಕೆಯವರನ್ನ, ಮಂತ್ರಿಗಳನ್ನ ಹಿಡಿದು ಕೇಳಿದ್ರೆ, ಸತ್ಯ ಗೊತ್ತಾಗಿರೋದು. ಪಾಪ.. ನಮ್ಮ ಪೊಲೀಸರು ದಿನಾ ಬೆಳಿಗ್ಗೆ ನೆನೆಸಿದ ಬಾದಾಮಿ ತಿನ್ನೋಲ್ಲ ಅನ್ಸುತ್ತೆ. ಬುದ್ದಿನೇ ಇಲ್ಲ.

ಆದುದರಿಂದ ನಾವು ಕೆಲವೊಂದು ಸಣ್ಣ ಪುಟ್ಟ ಸಲಹೆಗಳನ್ನು ನಮ್ಮ ದೊರೆಗೆ ಕೊಡುತ್ತಿರುವೆ. (ಸಲಹೆ ಕೊಡೋಕೆ ಅಂತಲೇ, ಸುಮಾರು ಜನರನ್ನು ಅವರು ಸಂಬಳ ಕೊಟ್ಟು ಇಟ್ಟುಕೊಂಡಿರಬಹುದು. ಆದರೆ ಈ ಕೆಳಕಂಡ ಸಲಹೆಗಳು ಪೂರ್ಣ ಉಚಿತ.)

೧. ಜನ ಬುದ್ದಿವಂತರು ಆದರೆ ಸಾಲದು. ಪೋಲಿಗಳೂ ..ಓಹ್ ಸಾರಿ. ಪೋಲಿಸರೂ ಬುದ್ದಿವಂತರು ಆಗಬೇಕು. ಹಾಗಾಗಿ ನಮ್ಮ ಶ್ರೀಧರ್ ನೇತೃತ್ವದಲ್ಲಿ ಪೊಲೀಸರಿಗೆ ತರಬೇತಿ ಕೊಡಿಸಬೇಕು. ಹೆಂಗೂ ಅಗ್ನಿಗೆ ಪೋಲಿಸ್
ಠಾಣೆ ಹೊಸದಲ್ಲ. ಸೆಲ್ ಒಳಗೆ ಕುಂತೇ ಅವರು ಟ್ರೈನಿಂಗ್ ಕೊಡಬಲ್ಲರು.

೨. ಮೂಢನಂಬಿಕೆ ವಿರುದ್ದ ಹೋರಾಡುತ್ತಿರುವ ಕಾವಿಧಾರಿ  ಶ್ರೀ ಶ್ರೀ ಶ್ರೀ ನಿಡುಕಾಮಿಡಿ ಸ್ವಾಮೀಜಿ (!) ಅವರಿಗೆ ಯಾರ ಕೊಲೆ ಯಾರು ಮಾಡಿದರು , ಮುಂದೆ ಯಾರ ಕೊಲೆ ಆಗಲಿದೆ ಎಂದೆಲ್ಲಾ ತಿಳಿದಿದೆ. ಅವರನ್ನು ಇಲಾಖೆಗೆ ಪತ್ತೆದಾರಿಕೆ ವಿಭಾಗಕ್ಕೆ ಸಲಹೆ ಕೊಡಲು ನೇಮಕ ಮಾಡಿಕೊಳ್ಳಬೇಕು. ಅವಾಗ ಎರಡೇ ನಿಮಿಷದಲ್ಲಿ ಎಲ್ಲಾ ಕೇಸುಗಳು ಕ್ಲೊಜು ಆಗುವುದು.

೩. ನಮ್ಮ ಬರಗೆಟ್ಟ ಸಾಹಿತಿ .. ತೋಪು ಸಿನೆಮ ನಿರ್ದೇಶಕ (ತೋ ಯಾವ್ದೋ ಒಂದು ಹೆಸರು. ಮಕ್ಕಳ ಪುಸ್ತಕದಲ್ಲಿ ತಪ್ಪಾದಂತೆ ಇಲ್ಲೂ ಅವರಹೆಸರು ಬಿಟ್ಟು ಹೋಗಿದೆ ಬಿಡಿ) .. ಹಾಗು ಪ್ರಶಸ್ತಿ ವಿಜೇತ ಭಗವಾನರ್ ಗೆ ಇತಿಹಾಸ / ಪುರಾಣದಲ್ಲಿ ಯಾರು – ಯಾರನ್ನ ಸಾಯಿಸಿದರು, ಯಾಕೆ ಸಾಯಿಸಿದರು ಎಂದೆಲ್ಲಾ ತಿಳಿದಿದೆ. ಹಾಗಾಗಿ, ಇವರುಗಳ ಕೈಲಿ, ಹೊಸದಾಗಿ ಕಾವ್ಯ – ಪುರಾಣ ಎಲ್ಲವನ್ನೂ  ಅರಾಬಿಕ್, ಲ್ಯಾಟಿನ್ ಭಾಷೆಯಲ್ಲಿ ಬರೆಸಬೇಕು. (ಪಾಳಿ ಭಾಷೆ ಎಂದಿರ? ಸನ್ಮಾನ್ಯರು ಬುದ್ದನನ್ನು ಓದಿಲ್ಲ ಬಿಡಿ. ಹಂಗಾಗಿ ಪಾಳಿಯ ಹೆಸರಿಲ್ಲ)

೪. ಇಷ್ಟು ಮಾಡಿದರೆ ಸಾಲದು. ಸರಕಾರ ಕೆಲವು ಹೊಸ ಕಾನೂನು ಕೂಡ ಜಾರಿಗೆ ತರಬೇಕಾಗುತ್ತದೆ. ಉದಾ: ಅರ್ ಎಸ್ ಎಸ್ / ಬಿಜೇಪಿ ಯವರು ಯಾರೇ ಕೊಲೆಯಾದರೂ .. ಅದನ್ನು ಆತ್ಮಹತ್ಯೆ ಎಂದು ಘೋಷಿಸಬೇಕು. ಹಾಗು ಮಿಕ್ಕ ಯಾರೇ ಸತ್ತರೂ.. ಅದಕ್ಕೆ, ಅರ್ ಎಸ್ ಎಸ್ ಕಾರಣ ಎಂದು ತಿಳಿಸಿ, ಸಿಕ್ಕವರನ್ನು ಹಿಡಿದು ಬಡಿಯಬೇಕು. (ಅನಂತ ಮೂರ್ತಿಯವರು ತೀರಿಕೊಂಡಾಗ .. ಹಿಡಿದು ಬಡಿದರಲ್ಲ ಹಂಗೆ ) ಬೇಕಿದ್ರೆ ಈ ಕಾಯಿದೆಗೆ ಜನ್ನತ್ ಭಾಗ್ಯ ಎಂದು ಹೆಸರಿಡಲಿ. ನನ್ನ ಪೂರ್ಣ ಬೆಂಬಲ ಇದೆ.


ಇಷ್ಟು ಮಾಡಿದರೆ ಸಾಕು.
ಕರ್ನಾಟಕ ಪೋಲಿಸ್ ಹೆಸರು ಉಚ್ಛ್ರಾಯ ಸ್ಥಿತಿಗೆ ಹೋಗುತ್ತದೆ. ಸಾಯಿಕುಮಾರ್ ನಟಿಸಿ – ಕನ್ನಡಿಗರನ್ನು ರಂಜಿಸಿದಕ್ಕೂ ಒಂದು ಅರ್ಥ ಸಿಗುತ್ತದೆ.

ಮತ್ತೆ ಮಿಕ್ಕಂತೆ ಎಲ್ಲಾ ಸೌಖ್ಯ.
ಸರಕಾರದ ದಯೆಯಿಂದ ನಾನು ಇನ್ನೂ ಜೀವಂತ ಇದ್ದೇನೆ. ಇಷ್ಟೆಲ್ಲಾ ಮಳೆ ಬಂದು ಅನಾಹುತ ಆದರೂ, ಸ್ವಲ್ಪ ಲೆಟ್ ಆದರೂ ಮನೆಗೆ ಜೀವಂತ ತಲುಪಿದ್ದೇನೆ. ಇದಕ್ಕೆಲ್ಲ ನಿಮ್ಮ ದಕ್ಷ ಆಡಳಿತವೇ ಕಾರಣ.

ನಿಮ್ಮನ್ನು ಜೀಸಸ್ ಸುಖವಾಗಿ ಇಟ್ಟಿರಲಿ ಎಂದು ಎರಡು ಬಾಳೆಹಣ್ಣು ನೈವೇದ್ಯ ಮಾಡಿ ಬೇಡಿಕೊಳ್ಳುವೆ.

Sunday, January 1, 2017

ಸುಲಭದಲ್ಲಿ ಕೇಕ್ ಮಾಡುವುದು ಹೇಗೆ? (ಮೊಟ್ಟೆ ಮತ್ತೆ ಆವೇನ್ ಇಲ್ಲದೆ!)

(ಎಂದಿನಂತೆ ಈ ಪೋಸ್ಟು ಸಿಹಿ ಇಷ್ಟ ಪಡುವ ಗಂಡು ಜೀವಿಗಳಿಗೆ ಮಾತ್ರ)

ನಿಮಗೆ ಕೇಕ್ ಇಷ್ಟವೇ? ಆದರೆ ಅದನ್ನು ಪಾರ್ಟಿಗಳಲ್ಲಿ, ಬೇಕರಿ ಗಳಲ್ಲಿ ಮಾತ್ರ ತಿಂದಿರುವಿರೆ? ಮನೆಯಲ್ಲಿ ಮಾಡಿಲ್ಲವೇ?
ಚಿಂತೆ ಬೇಡ. ನಿಮಗೆ ಸುಲಭಕ್ಕೆ ಕೇಕ್ ಮಾಡುವ ವಿಧಾನ ಹೇಳಿ ಕೊಡಲಿದ್ದೇನೆ.
ಅಯ್ಯೋ.. ನಾವು ಮೊಟ್ಟೆ ತಿನ್ನೋಲ್ಲ, ಮನೇಲಿ ಆವೇನ್ ಇಲ್ಲ ಎಂದು ಕೊಸರಿಸಬೇಡಿ. ಈಗ ನಾನು ಹೇಳಿ ಕೊಡುವ ವಿಧಾನಕ್ಕೆ ಅವೆರಡೂ ಅಗತ್ಯ ಇಲ್ಲ.

ಮೊದಲಿಗೆ ಬೇಕಾಗುವ ಪದಾರ್ಥಗಳ ಪಟ್ಟಿ ಮಾಡೋಣ.

1. ಒಂದು ಲೋಟ ಮೈದಾ ಹಿಟ್ಟು. (ಅಡುಗೆ ಮನೆಯ ಯಾವುದಾದರೂ ಒಂದು ಅರೆಯಲ್ಲಿ ಇರುತ್ತೆ ನೋಡಿ.)
2. ಅರ್ದ ಲೋಟ ಮೊಸರು. (ಇದು ಫ್ರಿಜ್ ನಲ್ಲಿ ಇರುತ್ತೆ. )
3. ಕಾಲು ಲೋಟ ಅಡುಗೆ ಎಣ್ಣೆ. (ಅಲ್ಲೇ ಯಾವುದಾದರೂ ಕ್ಯಾನ್ ನಲ್ಲಿ ಇರುತ್ತೆ, ಸ್ವಲ್ಪ ಗಮನಿಸಿ)
4. ಅರ್ದ ಲೋಟ ಸಕ್ಕರೆ ಪುಡಿ. (ಪುಡಿ ಇಲ್ಲಾ ಅಂದ್ರೆ, ಸಕ್ಕರೆ ನ ಮಿಕ್ಸಿ ಲಿ ಹಾಕಿ ಪುಡಿ ಮಾಡಿಕೊಳ್ಳಿ. – ಹಾಗೆ ಪುಡಿ ಮಾಡಿಕೊಳ್ಳಲು, ಚಿಕ್ಕ ಜಾರ್ ಉಪಯೋಗಿಸಿ. ಆಮೇಲೆ ಜಾರ್ ತೊಳೆದು.. ಅದನ್ನ ಇಟ್ಟ ಜಾಗದಲ್ಲೇ ಇಡಿ ಮರ್ರೆ. ಯಾರಿಗೆ ಬೇಕು, ಆಮೇಲೆ ಉಗಿಸಿಕೊಳ್ಳೋ ಗ್ರಹಚಾರ )
5. ಒಂದು ಚಿಟಿಕೆ ಅಡುಗೆ ಸೋಡಾ. (ಇದು ಸಾಮಾನ್ಯಕ್ಕೆ ಮನೇಲಿ ಇರುತ್ತೆ. ಅಡುಗೆ ಉಪ್ಪಿನ ರೀತಿಯೇ ಇರುತ್ತೆ. ಚೂರು ಪತ್ತೆದಾರಿಕೆ ಮಾಡಿ, ಹುಡುಕಬೇಕು)
6. ಅರ್ದ ಟೀ ಚಮಚೆ ಬೇಕಿಂಗ್ ಪೌಡರ್. (ಇದು ಇಲ್ಲದೆ ಇದ್ದಲ್ಲಿ, ಹೊರಗಡೆ ಇಂದ ತರಬೇಕಾದೀತು. 35 ರುಪಾಯಿಗೆಲ್ಲ ಪುಟ್ಟ ಪ್ಯಾಕೆಟ್ ಸಿಗುತ್ತೆ.)
7. ವೆನಿಲ್ಲಾ ಅಥವಾ ಪೈನ್ ಆಪಲ್ ಎಸೆನ್ಸ್. (ಇದು ಕೂಡ ಮನೇಲಿ ಇಲ್ಲ ಅಂದ್ರೆ ತರಬೇಕಾದೀತು. 10-೧೫ ರುಪಾಯಿಗೆಲ್ಲ ಪುಟ್ಟ ಡಬ್ಬಿ ಸಿಗುತ್ತೆ.)
8. ಕೊನೆಗೆ ಒಂದು ಚಿಟಿಕೆ ಅಡುಗೆ ಉಪ್ಪು.


ಈಗ ಅಗತ್ಯ ವಸ್ತುಗಳ ಪಟ್ಟಿ.
1. ಒಂದು ಕುಕ್ಕರ್. ದಿನಾ ಅನ್ನ ಮಾಡುತ್ತಲ್ಲ ಅದೇನೇ.
2. 10 ಚಮಚೆ ಅಡುಗೆ ಉಪ್ಪು.
3. ಒಂದು ಅಲುಮಿನಿಯಂ ಅಥವಾ ಸ್ಟೀಲ್ ಬಟ್ಟಲು. ತಳ ಚಪ್ಪಟೆ ಇರಬೇಕು.


ಈಗ ಕೇಕ್ ತಯಾರಿಸುವ ವಿಧಾನ ನೋಡೋಣ.
1. ಮೊದಲಿಗೆ ಕುಕರ್ ಗೆ (ಒಣಗಿದ ಕುಕರ್ ) 10 ಚಮಚೆ ಉಪ್ಪು ಹಾಕಿ. ಅಥ್ (10 ಅಥವಾ ತಳ ಮುಚ್ಚುವಷ್ಟು ಉಪ್ಪು ಹಾಕಿ) ಆಮೇಲೆ ರಿಂಗ್ ಇಡಿ. ಅದರ ಮೇಲೆ ಕುಕರ್ ಪ್ಲೇಟ್ (ತೂತ ತೂತ ಇರುತ್ತಲ್ಲ.. ಅದು) ಇಡಿ. ನಂತರ ಓಲೆ ಹಚ್ಚಿ, ಅದರ ಮೇಲೆ ಕುಕ್ಕರಿಸಿ. (ನೀವು ಓಲೆ ಹತ್ತಬೇಡಿ. ಕುಕರ್ ಇಡಿ ಅಂದೆ ಅಷ್ಟೇ..)



2. ಮುಚ್ಚುಳದ ವಿಷಲ್ ಹಾಗು ಗ್ಯಾಸ್ಕೆಟ್ ತೆಗೆದು ಮುಚ್ಚಿ..
3. ನಂತರ ಒಂದು ಬಟ್ಟಲಿಗೆ ಮೊಸರು ಹಾಕಿ.
4. ಅದಕ್ಕೆ ಸಕ್ಕರೆ ಪುಡಿ ಸೇರಿಸಿ.
5. ಈಗ ಎಣ್ಣೆ ಸೇರಿಸಿ. (ಹೊಟ್ಟೆ ಗೆ ಹಾಕುವ ಎಣ್ಣೆ ಅಲ್ಲ! )
6. ಕೊನೆದಾಗಿ ಮೈದಾ, ಸೋಡಾ, ಬೇಕಿಂಗ್ ಪೌಡರ್, ಉಪ್ಪು ಎಲ್ಲಾ ಹಾಕಿ.
7. ಒಂದು ಪುಟ್ಟ ಚಮಚೆತಗೊಂಡು ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲೂ ಗಂಟು ಕಟ್ಟಿರಬಾರದು. J


ಇಲ್ಲಿಗೆ ನಿಮ್ಮ ಕೇಕ್ ಮಿಕ್ಸ್ ತಯಾರು.
ನೀವು ಮೊದಲೇ ತೆಗೆದಿಟ್ಟು ಕೊಂಡ ಚಪ್ಪಟೆ ತಳದ ಬಟ್ಟಲು ತೆಗೆದುಕೊಂಡು ಅದಕ್ಕೆ ಒಳಗೆ ಚೆನ್ನಾಗಿ ಎಣ್ಣೆ ಸವರಿ. ಆಮೇಲೆ ಅರ್ದ ಚಮಚೆ ಮೈದಾ ಹಿಟ್ಟು ಸಿಂಪಡಿಸಿ. ಆಮೇಲೆ ತಯಾರಿಸಿಟ್ಟುಕೊಂಡ ಹಿಟ್ಟು ಅದಕ್ಕೆ ಸುರುವಿ.


ಇಷ್ಟು ಆಗುವಷ್ಟರಲ್ಲಿ ಸರಿ ಸುಮಾರು 10 ನಿಮಿಷ ಆಗಿರಬಹುದು. ಅಲ್ಲಿಗೆ ನಿಮ್ಮ ಕುಕರ್ ಸಾಕಷ್ಟು ಬಿಸಿ ಆಗಿರುತ್ತೆ.
ಮೆಲ್ಲನೆ ಮುಚ್ಚುಳ ತೆಗೆದು, ಅದರ ಒಳಗೆ ಹಿಟ್ಟು ಸುರುವಿದ ಬಟ್ಟಲು ಮೆಲ್ಲನೆ ಜೋಪಾನವಾಗಿ ಇಡಿ. ಆ ಕಡೆ ಈ ಕಡೆ ಕೈ ತಾಗಿದರೆ, ಸುಟ್ಟು ಹೋದೀತು. ಮುಚ್ಚುಳ ಹಾಕಿ, 30-40 ನಿಮಿಷ ಅಡುಗೆ ಮನೆಯಿಂದ ಹೊರ ನಡೆಯಿರಿ. (ಸ್ಟವ್ ಸಿಮ್ - ಸಣ್ಣನೆಯ ಉರಿಯಲ್ಲಿ ಇರಲಿ)


40 ನಿಮಿಷದ ನಂತರ ಮುಚ್ಚುಳ ತೆಗೆದು ನೋಡಿ. ಕೇಕ್ ಆಗಿರುತ್ತೆ. ಬೇಕಿದ್ದಲ್ಲಿ ಚಿಕ್ಕ ಚಾಕು ತೆಗೆದು ಅದಕ್ಕೆ ಚುಚ್ಚಿ ನೋಡಬಹುದು. ಚಾಕು ಆರಂ ಆಗಿ ವಾಪಾಸ್ ಬಂದ್ರೆ, ಹಸಿ ಹಿಟ್ಟು ಹಿಡಿಯದಿದ್ದರೆ.. ಕೇಕ್ ಬೆಂದಿದೆ ಎಂದು ಅರ್ಥ.
ಸ್ಟವ್ ಆಫ್ ಮಾಡಿ.
ಬಟ್ಟಲು ಹೊರಗಿಡಿ. ಸ್ವಲ್ಪ ತಣ್ಣಗೆ ಆಗಲಿ.

ಈಗ ಕೇಕ್ ನ ಪ್ಲೇಟ್ ಗೆ ವರ್ಗಾಯಿಸಿ.


ಎಚ್ಚರಿಕೆ:
1. ಖಾಲಿ ಕುಕರ್ ಓಲೆ ಮೇಲೆ ಇಡಲು ನಿಮ್ಮ ಹೆಂಡತಿ ಹೆದರಬಹುದು. ಮದ್ಯೆ ಮದ್ಯೆ ಬಾಯಿ ಹಾಕಿ, ನಿಮ್ಮ ಏಕಾಗ್ರತೆ ಕೆಡಿಸಬಹುದು. ಏನಾದ್ರೂ ನೆಪ ಹೇಳಿ, ಉದಾಹರಣೆಗೆ, ಇಂದು ನೀವು ಆಕೆಗೆ ಪ್ರೋಪೋಸ್ ಮಾಡಿದ ದಿನ, ಮೊದಲು ನೋಡಿದ ದಿನ.. ಇತ್ಯಾದಿ.. ಹೇಳಿ, 50 ನಿಮಿಷದ ನಂತರ ಸರ್ಪ್ರೈಸ್ ಕೊಡುವುದಾಗಿ ಹೇಳಿ.. ಹೆಂಡತಿಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ.!
2. ಕೇಕಿನ ಮೊದಲ ಪೀಸನ್ನು, ಆಕೆಗೇ ಮೊದಲು ತಿನ್ನಿಸಿ.



3. ಆರೋಗ್ಯವಾಗಿ ಇದ್ದಲ್ಲಿ, ಅರ್ದ ಗಂಟೆಯ ನಂತರ ನೀವು ಕೂಡ ತಿನ್ನಿರಿ.
4. ನಿಮಗೆ ಜಯವಾಗಲಿ.