Thursday, October 29, 2009

ದಿನ ಭವಿಷ್ಯವೂ, ಪ್ರಳಯವೂ

ಅದ್ಯಾವುದೋ ಕಾಲದವರು ಬರೆದಿರೋ ಅದೇನೋ ಕ್ಯಾಲೆಂಡರ್ ಪ್ರಕಾರ ಸದ್ಯದಲ್ಲೇ ಜಗತ್ತು ನಾಶ ಆಗುತ್ತೆ ಅಂತೆ. ಅದಕ್ಕೆ ಪೂರಕವಾಗಿ ವಿಶ್ವ ಪ್ರಸಿದ್ದಿ ಜ್ಯೋತಿಷಿ "ಚಂದ್ರಶೇಖರ ಸ್ವಾಮೀಜಿ" ಅವರು ಗಾಳಿಯಿಂದ ರೋಗ ಹರಡಿ ಮನುಷ್ಯನ ಮುಖ ಮಂಗನ ತರ ಆಗುತ್ತೆ ಅಂತ ಸಂಡೆ ಟೈಮ್ಸ್ ಗೆ ಹೇಳಿದ್ದಾರೆ. (ಕಳೆದ ಭಾನುವಾರದ ಟೈಮ್ಸ್ ಆಫ್ ಇಂಡಿಯಾ - ಕನ್ನಡ) ಇದರ ಜೊತೆಗೆ ನಮ್ಮ ಕೊಡಿ ಹಳ್ಳಿ ಸ್ವಾಮಿಜಿ ಭವಿಷ್ಯ ಇನ್ನೂ ಪ್ರಕಟವಾಗಬೇಕಿದೆ. ಇರಲಿ ನನಗಂತೂ ಈ ಭವಿಷ್ಯದಲ್ಲಿ ನಂಬಿಕೇನು ಇಲ್ಲ, ಆಸಕ್ತಿನು ಇಲ್ಲ ಆದ್ರೆ ನಂಬಿಕೆ ಇಲ್ಲದ ಸ್ವಲ್ಪ ಹೆದರಿಕೆ ಮಾತ್ರ ಇದೆ!!

ಕೆಲವು ವರುಷಗಳ ಹಿಂದೆ ನಾನು ಒಂದು ಚಿಕ್ಕ ಸಂಜೆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಾ ಇದ್ದೆ. ದಿನ ಇಡಿ ಆವತ್ತಿನ ಘಟನಾವಳಿಗಳನ್ನು ನೋಡಿ, ಗುಡ್ಡೆ ಹಾಕಿಕೊಂಡು, ಅದಕ್ಕೆ ಅಕ್ಷರದ ರೂಪ ಕೊಡೋದು ಮುಖ್ಯ ಕೆಲಸ. ಈ ಕೆಲ್ಸಕ್ಕೆ ಇದ್ದವರು ೩ ಜನ. ನಾನು, ಒಬ್ಬ ಹುಡುಗಿ (ಸುನೀತಾ ಅನ್ಸುತ್ತೆ ಅವಳ ಹೆಸರು) ಮತ್ತೆ ನಮ್ಮ ಎಡಿಟರಮ್ಮ.

ರಾಜಕೀಯ, ಮತ್ತೆ ನಗರದಲ್ಲಿ ನಡೆಯುವ ಸಭೆ, ಸಮಾರ೦ಭದ ವರದಿ ಮಾಡುವುದು ನನ್ನ ಕೆಲಸ. ಅದರ ಜೊತೆಗೆ ವಾರದಲೊಮ್ಮೆ ಸಿನಿಮಾ, ರಾಜಕೀಯದ ಬಗ್ಗೆ ಹಾಸ್ಯ ಲೇಖನ, ಪದ ಬಂದ ಅಡಿಷನಲ್ ಕೆಲಸ. ಮತ್ತೆ ಹಿಂದಿನ ದಿನ ಸಂಜೆ ಮತ್ತೆ ರಾತ್ರೆಯ ಎಲ್ಲಾ ಸುದ್ದಿಗಳು ಎಲ್ಲಾ ದಿನಪತ್ರಿಕೆಗಳಲ್ಲಿ ಬಂದಿರುತ್ತದೆ. ಅದನ್ನು ಓದಿ ಶೀರ್ಷಿಕೆ ಬದಲಿಸಿ, ಸ್ವಲ್ಪ ಉಪ್ಪು ಕಾರ ಹಚ್ಚಿ ಹಿಂದೆ ಮುಂದೆ ಮಾಡಿ ಬರೆಯೋದು ಹಿಡನ್ ಜವಾಬ್ದಾರಿ.

ನಮ್ಮ ಕೆಲಸ ಚೆನ್ನಾಗೇ ನಡೀತಾ ಇತ್ತು. ಆ ಊರಲ್ಲಿ ರಾಜಕೀಯ ಚಟುವಟಿಕೆಗಳಿಗೆ ಏನೂ ಕೊರತೆ ಇರಲಿಲ್ಲ. ದಿನಾಲೂ ಕನಿಷ್ಠ ಒಂದಾದರು ಚಿಕ್ಕ ಗಲಭೆ, ಅವಾಗ ಅವಾಗ ಹೊಳೆಯಲ್ಲಿ ಗುರುತು ಸಿಗದ ಹೆಣಗಳೂ ಸಿಗುತ್ತಾ ಇದ್ದವು. ನಾವುಗಳು ಕೂಡ ತಪ್ಪದೆ ವಿಷಯ ಸಿಕ್ಕಿದ ಕುಶಿಯಲ್ಲಿ ಬರೀತಾ ಇದ್ದೆವು. ಅಕಸ್ಮಾತ್ ಬರೀಲಿಕ್ಕೆ ಏನೂ ಸಿಗಲಿಲ್ಲ ಅಂದ್ರೆ "ನಗರದಲ್ಲಿ ಹದ ಗೆಟ್ಟ ರಸ್ತೆ", "ಹಂದಿ ಕಾಟ" ಜಾಸ್ತಿ ಅಂತೆಲ್ಲ ಸಂಪಾದಕೀಯ ಬರೆದು ಹಾಕ್ತಾ ಇದ್ದೆವು.

ಇಂತಿಪ್ಪ ನಮ್ಮ ಪತ್ರಿಕೆಯಲ್ಲಿ ವಾರ ಭವಿಷ್ಯವು ಪ್ರಕಟವಾಗ್ತಾ ಇತ್ತು. ನಮ್ಮ ಎಡಿಟರ್ ಅದ್ಯಾರೋ ಜ್ಯೋತಿಷಿ ಹತ್ತಿರ ಬರೆಸ್ತಾ ಇದ್ರು.

ಹೀಗಿರುವಾಗ ಒಮ್ಮೆ ನಮ್ಮ ಎಡಿಟರ್ 2 ದಿನಗಳ ಮಟ್ಟಿಗೆ ಕಚೇರಿ ಕೆಲಸ ನಮ್ಮ ಹೆಗಲಿಗೆ ಹಾಕಿ ಬೆಂಗಳೊರಿಗೆ ಒಂದು ಮದುವೆಗೆ ಹೊರಟರು. ಗುರುವಾರ ಮತ್ತೆ ಶುಕ್ರವಾರದ ಜವಾಬ್ದಾರಿ ನಮ್ಮದಾಗಿತ್ತು. ನಾವು ಕೂಡ ಪೇಜ್ ತುಂಬಿಸೋ ಕೆಲಸ ನಿಷ್ಠೆಯಿಂದ ಮಾಡುವ ಅಲೂಚನೆಯಲ್ಲಿ ಇದ್ದೆವು. ಮೊದಲ ದಿನ ಒಬ್ಬ ಗೃಹಿಣಿ ಆತ್ಮ ಹತ್ಯೆ ಮಾಡಿಕೊಂಡಿದ್ದಳು. ಅದು ವರದಕ್ಷಿಣೆ ಕೊಲೆ ಎಂದು ಅವಳ ತಂದೆ ತಾಯಿ ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಾ ಇದ್ದರು, ಗಂಡನ ಮನೆಯವರು ಅವಳು ಬಂಜೆ, ಆದ್ದರಿಂದ ಬೇಸತ್ತು ಸತ್ತಿದ್ದಾಳೆ ಎಂದು ದೂರುತ್ತಿದ್ದರು. (ಯಾರಾದರು ಸತ್ತರೆ ಕುಶಿ ಪಡುತ್ತಾ ಇದ್ದಿದ್ದು ನನ್ನಂತ ಸೊ ಕಾಲ್ಡ್ ಪತ್ರ ಕರ್ತರು ಮಾತ್ರ ಅನ್ಸುತ್ತೆ) ನಾವು ಇದನ್ನು ಸುಂದರವಾಗಿ ರಕ್ತ ಸಿಕ್ತವಾಗಿ ಬರೆದುದು ಆಯಿತು.

ಆದರೆ ಮಾರನೆ ದಿನ ಶುಕ್ರವಾರ, ಡಿ ಟಿ ಪಿ ಶ್ರೀನಿವಾಸ್ ಬಂದು "ಸಾರ್ ಇನ್ನು ಭವಿಷ್ಯ ಬಂದಿಲ್ಲ, ಅ ಭಟ್ಟರ ಮನೆ ಫೋನ್ ನ ಯಾರು ಅಟೆಂಡ್ ಮಾಡ್ತಾ ಇಲ್ಲ" ಅಂದಾಗ ಯಾಕೋ ನನಗೆ ಸಮಸ್ಯೆಯ ಅರಿವು ಆಗಿದ್ದು. ವಾರ ಭವಿಷ್ಯ ಇಲ್ಲದೆ ಪತ್ರಿಕೆ ಹೊರ ತರುವುದು ಹೇಗೆ? ಏನು ಮಾಡುವುದು ಅಂತ ತಲೆಕೆಡಿಸಿಕೊಂಡು ಕುಳಿತೆ. ಬೆಳ ಬೆಳಗ್ಗೆ ಯಾವ ಜ್ಯೋತಿಷಿಗಳನ್ನ ಹುಡುಕುತ್ತಾ ಕೂರುವುದು? ಅದು ಅರ್ಜೆಂಟ್ ಅಂದ್ರೆ ಯಾರು ಬರೆದು ಕೊಟ್ಟಾರು ಎಂಬ ಚಿಂತೆ. ಅಷ್ಟರಲ್ಲಿ ಶ್ರೀನಿವಾಸ್ ಅದೆಲ್ಲಿಂದನೋ ಒಂದು "ಒಂಟಿ ಕೊಪ್ಪಲ್" ಪಂಚಾಗ ತಂದು ಕೊಟ್ಟು "ಸಾರ್ ನೀವೇ ಬರದು ಬಿಡಿ ಅಂದ್ರು" ಹೆಸರಲ್ಲಿ ಶಾಸ್ತ್ರಿ ಅಂತ ಇರೋದ್ರಿಂದ ಆತ ಏನೇನೋ ಕಲ್ಪಿಸಿ ಕೊಂಡಿದ್ದ ಅನ್ಸುತ್ತೆ. ಏನು ಅರ್ಜೆಂಟ್ ಇಲ್ಲ, ಅರ್ದ ಘಂಟೆ ಟೈಮ್ ತಗೊಂಡು ಬರೀರಿ, ನಾನು ಕಾಲಂ ಖಾಲಿ ಬಿಟ್ಟಿರ್ತೀನಿ ಅಂತ ಹೇಳಿ ನಾಪತ್ತೆ ಆದ!!

ಈ ವಿಷಯನ ಸುನೀತಾಗು ಹೇಳಿದರೂ ಏನು ಪ್ರಯೋಜನ ಆಗಲಿಲ್ಲ. ನೀವೇ ಬರೀರಿ ಅಂದ್ಲು, ಇದೊಳ್ಳೆ ಕಥೆ ಆಯಿತಲ್ಲ, ನನಗೆ ಎಷ್ಟು ರಾಶಿ, ನಕ್ಷತ್ರ ಇದೆ ಅಂತಾನೆ ಗೊತ್ತಿಲ್ಲ. ಪಂಚಾಂಗ ನೋಡಿ ಅಂತೂ - ಇಂತೂ ಬರೆದು ಮುಗಿಸಿದೆ, ಕನ್ಯಾ ರಾಶಿಯವರಿಗೆ ತೀವ್ರ ಆರೋಗ್ಯ ಹಾನಿ, ಮಕರ ದವರಿಗೆ ಪ್ರವಾಸ ಅಂತ ಏನೇನೋ ಬರೆದಿದ್ದೆ. ಅಂದಿನ ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದಾಗ ರಾತ್ರೆ ಆಗ್ತಾ ಇತ್ತು.

ನಾನು ಆವಾಗ ಚಿಕ್ಕಪ್ಪನ ಮನೇಲಿ ಇದ್ದೆ. ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿ ಚಿಕ್ಕಪ್ಪನು ಬಂದ್ರು. ಅಂದು ಅವರಿಗೆ ತೀವ್ರವಾದ ಕ್ಯಾನ್ಸರ್ ಇರುವುದು ಪತ್ತೆ ಆಗಿತ್ತು, ಹಾಗು ಅವರು ಕನ್ಯಾ ರಾಶಿ ಯವರು ಆಗಿದ್ದರು. ಇ ಘಟನೆ ನಂತರ ನಾನು ಮತ್ತೆ ಭವಿಷ್ಯ ಬರೆಯುವ ಸಾಹಸ ಮಾಡಲಿಲ್ಲ. ಸ್ವಲ್ಪ ದಿನಗಳ ನಂತರ ಅ ಕೆಲ್ಸನೂ ಬಿಟ್ಟೆ.

ಇದಾಗಿ ಹಲವು ವರುಷಗಳೇ ಕಳೆದಿದ್ದರೂ ನನಗೆ ನೆನಪು ಮಾಸಿಲ್ಲ.

ನಾನು ಜ್ಯೋತಿಷ್ಯ ಸುಳ್ಳು, ಅದನ್ನು ನ೦ಬಬೇಡಿ ಅ೦ತ ಪ್ರಚಾರ ಮಾಡಲು ಹೊರಟಿಲ್ಲ. ಜ್ಯೋತಿಷ್ಯ ವಿಜ್ಞಾನವೂ, ಆಗಿರಬಹುದು. ಅದು ವಿಜ್ಞಾನವೇ ಆಗಿದ್ದರೂ ಮೂಢನ೦ಬಿಕೆಯನ್ನು ಅದರೊ೦ದಿಗೆ ತಳಕು ಹಾಕುವ ಮ೦ದಿಯಿ೦ದ ಅದರ ವೈಜ್ಞಾನಿಕ ತಳಹದಿ ಹದಗೆಟ್ಟಿದೆ ಎನ್ನಬಹುದು . ಹಾಗಂತ ಹಾದಿ ಬೀದಿಯಲ್ಲಿ ಕುಳಿತು ಮುಂದಾಗಲಿರುವ ವಿದ್ಯಮಾನಗಳ ಬಗ್ಗೆ ತಮಗೆ ತೋಚಿದ೦ತೆ ಬೊಗಳುವ ಮತ್ತು ಅದರಿ೦ದ ಜನರನ್ನು ತಪ್ಪುದಾರಿಗೆಳಸುವ ಕ್ರಮ ನೋಡಿದಾಗ ಬೇಸರ ವೆನಿಸುತ್ತದೆ ಮತ್ತು ಜ್ಯೋತಿಷಿಗಳನ್ನು ಕ೦ಡಾಗ ಸಿಟ್ಟು ಬರುತ್ತದೆ.

Superstition is to religion what astrology is to astronomy; the mad daughter of a wise mother. (ಯಾವುದೇ ಒ೦ದು ಧರ್ಮಕ್ಕೆ ಅ೦ಟಿಕೊ೦ಡಿರುವ ಕುರುಡುನ೦ಬಿಕೆಗಳ೦ತೆ, ಖಗೋಳವಿಜ್ನಾನಕ್ಕೆ ಅ೦ಟಿಕೊ೦ಡಿರುವ ಈ ಜ್ಯೋತಿಷ್ಯವೆ೦ಬುದು ಕೂಡ ಹಾಗೆ - ಜಾಣ ತಾಯಿಯ ಹುಚ್ಚು ಮಗಳು ) - ಹೀಗ೦ತ ಒಬ್ಬ ತತ್ವಜ್ಞಾನಿ ಹೇಳಿದ್ದಾರೆ. ಇದು ಸರಿಯೋ, ತಪ್ಪೋ ವಾದಿಸುವ ಇಚ್ಚೆ ನನಗಿಲ್ಲ. ಇಲ್ಲಿ ನನ್ನ ಮುಂದಿರುವ ಪ್ರಶ್ನೆ ಜ್ಯೋತಿಷ್ಯ ಶಾಸ್ತ್ರವೆ೦ಬ ಅಸ್ತ್ರವನ್ನು ಇಟ್ಟುಕೊ೦ಡು ತಮ್ಮ ಮನಸ್ಸಿಗೆ ತೋಚಿದ೦ತೆ ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ಜನರನ್ನು ತಪ್ಪುದಾರಿಗೆಳೆಯುವ ಜನರನ್ನು ಕ೦ಡಾಗ ಮೈಯೆಲ್ಲಾ ಉರಿಯುತ್ತದೆ. ಇ೦ಥವರಿ೦ದ ಜ್ಯೋತಿಷ್ಯಕ್ಕೆ ಇದ್ದಿರಬಹುದಾದ ಅಲ್ಪ ಮೌಲ್ಯ ಕುಸಿಯುತ್ತಿದೆ, ಅದನ್ನು ಬುದ್ಧಿಜೀವಿಗಳು ಮತ್ತು ಪ್ರಗತಿಪರ ಚಿಂತಕರು ಹೀಗಳೆಯುವ ಪರಿಸ್ಥಿತಿ ಬಂದಿದೆ.

Nature may be as selfishly studied as trade. Astronomy to the selfish becomes astrology; and anatomy and physiology become phrenology and palmistry - ಹೀಗ೦ತ ರಾಲ್ಪ್ ಎಮರ್ಸನ್ ಹೇಳಿದ ಮಾತುಗಳು ಇ೦ದು ಸಕಾಲಿಕವೆನಿಸುತ್ತಿವೆ.

ಮೊನ್ನೆ ಸಂಡೆ ಟೈಮ್ಸ್ - ಕನ್ನಡ ಓದುತ್ತಾ ಇದ್ದಾಗ ಇದೆಲ್ಲ ನೆನಪಿಗೆ ಬಂತು, ಹಾಗು ನಿಮಗೆ ಹೇಳಬೇಕೆನಿಸಿತು.


15 comments:

ಶಿವಪ್ರಕಾಶ್ said...

Well Written Baalu

Unknown said...

hmm
maja ittu

Me, Myself & I said...

ಆತ್ಮೀಯ

ಬರಹ ತುಂಬಾ ಮೆಚ್ಚುಗೆಯಾಯ್ತು. ಪ್ರಕಟಿಸಿದ್ದಕ್ಕೆ ಧನ್ಯವಾದಗಳು.

PARAANJAPE K.N. said...

ಬಾಲೂ, ನಿಮ್ಮ ಲೇಖನವೂ , ನನ್ನ ಬ್ಲಾಗಿನ ಕವನವೂ ಒ೦ದೇ ವಿಚಾರಕ್ಕೆ ಸ೦ಬ೦ಧಪಟ್ಟಿದ್ದು ಕತಾಳೀಯವೇನೋ. ನಿಮ್ಮ ದಿನಭವಿಷ್ಯ ಬರೆದ ಅನುಭವ, ಪ್ರಳಯದ ಬಗ್ಗೆ so called ಜ್ಯೋತಿಷಿಗಳು ಉ೦ಟು ಮಾಡಿರುವ hype, ಎಲ್ಲವನ್ನೂ ಗಮನಿಸುತ್ತಿದ್ದೇನೆ. ಹೆದರಬೇಕಿಲ್ಲ, ಅ೦ತಹದ್ದೇನೂ ಆಗದು, ನೀವು ಸೈಟು ಕೊಳ್ಳಬೇಕೆ೦ದು ಇದ್ದೀರಲ್ಲ, ಅವಸರ ಮಾಡಬೇಡಿ, ಮುಂದಿನ ಎರಡು ವರ್ಷಗಳಲ್ಲಿ ಇದೆ ಕಾರಣಕ್ಕೆ ರಿಯಲ್ ಎಸ್ಟೇಟ್ ಬೆಲೆಗಳು ಪಾತಾಳಕ್ಕೆ ಇಳಿಯಬಹುದು, ಆವಾಗ ಕೈಹಾಕಿ. ಜೈ ಹೋ.

ಸಾಗರದಾಚೆಯ ಇಂಚರ said...

wonderfully written baalu, good one

ಸವಿಗನಸು said...

Good Writing Baalu...

Unknown said...

ಬಹುಶ ಜ್ಯೋತಿಷ್ಯ ಅನ್ನುವುದು ಪೂರ್ಣವಾಗಿ ಸುಳ್ಳಲ್ಲ... ಆದರೆ ಮಂಗನ ಕೈಗೆ ಮಾಣಿಕ್ಯದಂತೆ ಇದು ಕೆಲವರ ದುಡ್ಡು ಮಾಡುವ ದಂಧೆಯಾಗಿ ತನ್ನ ಭವಿಷ್ಯವನ್ನೇ( !!! )ಕಳೆದುಕೊಳ್ಳುವ ಭೀತಿಯಲ್ಲಿದೆ... ಉತ್ತಮ ಬರಹ...
ಅಂದ ಹಾಗೆ ರಾಶಿ ಭವಿಷ್ಯ ಬರೆಯಲು ಅಷ್ಟೊಂದು ಕಷ್ಟ ಯಾಕೆ ತಗೊಂಡ್ರಿ... ಮೀನ ರಾಶಿದ್ದು ಮಿಥುನಕ್ಕೆ, ಮೇಷದ್ದು ಮಕರಕ್ಕೆ ಹಾಕಿದ್ದಿದ್ರೆ ಆಗ್ತಿತ್ತು :-)

ರಾಜೀವ said...

ನೀವು ಹೇಳಿದ್ದಕ್ಕೆಲ್ಲಾ ನನ್ನ ಸಮ್ಮತ ಇದೆ, ಆಂಗ್ಲದಲ್ಲಿ ಬರೆದಿರುವುದು ಬಿಟ್ಟು. ಜ್ಯೋತಿಷ್ಯ ಒಂದು ವೇದಾಂಗ ಎಂದು ಹೇಳುತ್ತಾರೆ. ಸೂಪೆರ್ಟಿಶನ್ ಅಲ್ಲ ಅಂತ ನನ್ನ ನಂಬಿಕೆ.

ಚುಣಾವಣೆಯ ಸಮಯದಲ್ಲಿ ಒಬ್ಬ ಜನಪ್ರಿಯ ಜ್ಯೋತಿಷಿ ಎಡೆಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ, ಅವರಿಗೆ ರಾಜಯೋಗ ಇಲ್ಲ ಅಂತ ಹೇಳಿಕೆ ಕೊಟ್ಟಿದ್ದರು. ಈಗ ಅವರೇ, ಎಡೆಯೂರಪ್ಪನವರು ಸಮಸ್ಯೆಯಿಂದ ಹೊರಗೆ ಬರುತ್ತರೆ, ಬೆಳ್ಳಾರಿ ಸಹೋದರರು ಸೋಲು ಕಾಣುತ್ತಾರೆ ಅಂತ ಹೇಳುತ್ತಿದ್ದಾರೆ ;-)

Admin said...

ಜನ ಮರುಳೋ,ಜಾತ್ರೆ ಮರುಳೋ ಅನ್ನೋ ಹಾಗೆ ಕೆಲವರು ಜ್ಯೋತಿಷ್ಯವನ್ನು ೧೦೦% ನಂಬಿ ಆತ್ಮ ಹತ್ಯೆ ಮಾಡಿಕೊಂಡವರಿದ್ದಾರೆ. ಭವಿಷ್ಯವನ್ನು ನಂಬುವುದು ಬಿಡುವುದು ಅವರವರ ನಿಲುಕಿಗೆ ಬಿಟ್ಟಿದ್ದು. ಆದರೆ ಭವಿಷ್ಯವನ್ನು ನೆನೆದು ವೃಥಾ ಭಯ ಪಡುವುದರಲ್ಲಿ ಅಥವಾ ಭಯ ಪಡಿಸುವುದರಲ್ಲಿ ಅರ್ಥವಿಲ್ಲ..
ಆಂಗ್ಲದ ಒಂದು ಮಾತು ಹೇಳುವಂತೆ "What’s the point in astrology if you can’t change your destiny?"..

Ramya said...

Hmmm very well written...

and the 2012 hype! I will be most disappointed if world dint end!

shivu.k said...

ಬಾಲು ಸರ್,

ನೀವು ಪತ್ರಿಕೋದ್ಯಮದ ಮಣ್ಣು ಹೊತ್ತಿದ್ದೀರಿ ಅಂದಂಗೆ ಆಯ್ತು.
ರಾಶಿ ಭವಿಷ್ಯವನ್ನು ಹೇಗೆ ಬರೆಯುತ್ತಾರೆ ಎನ್ನುವುದು ಈಗ ಗೊತ್ತಾಯ್ತು. ಈಗ ಅದು ಪೂರ್ಣ ಹಣ ಮಾಡುವ ದಂದೆಯಾಗಿದೆ....
ನಿಮ್ಮ ವಿಚಾರ ತುಂಬಾ ಅರ್ಥವಂತಿಕೆಯಿಂದ ಕೂಡಿದೆ..

ಚುಕ್ಕಿಚಿತ್ತಾರ said...

ನಮ್ಮ ಜವಾಬ್ದಾರಿ ಅರಿಯದೇ ಜ್ಯೋತಿಷವೊ೦ದನ್ನೆ ಅನುಸರಿಸುವುದು ಮೂರ್ಖತನವಲ್ಲದೇ ಮತ್ತೆನು....? ಬರಹ ಅರ್ಥಪೂರ್ಣವಾಗಿದೆ. ಧನ್ಯವಾದಗಳು.

ಬಾಲು said...

ಶಿವ ಪ್ರಕಾಶ್, ಶ್ರೀ ಶರ್ಮರು, ಲೋದ್ಯಾಶಿ, ಸವಿ ಗನಸು, ಗುರುಮೂರ್ತಿ ಅವರೇ
ಪ್ರತಿಕ್ರಿಯೆಗೆ ಧನ್ಯವಾದ.

ಬಾಲು said...

ಪರಂಜಾಪೆ: ಇಬ್ಬರ ವಿಷಯ ಒಂದೇ ಆಗಿರುತ್ತದೆ ಎಂದು ಯಾರಾದ್ರೂ ಜ್ಯೋತಿಷಿ ಗಳು ಭವಿಷ್ಯ ಹೇಳಿದ್ರ?

ಆಮೇಲೆ ಸೈಟ್ ನ ಆಲೋಚನೆ ಮುಂದೆ ಹಾಕಿದ್ದೇನೆ.

ರವಿಕಾಂತ ಗೋರೆ: ನಿಮ್ಮ ಅಭಿಪ್ರಾಯ ಸರಿ ಇದೆ. ನನ್ನದು ಸಹಮತವೂ ಇದೆ.
ಮೀನಾ ರಾಶಿದು ಹಾಕಿದ್ರೆ ಆಗ್ತಾ ಇತ್ತೇನೋ.. ಆದ್ರೆ ನಂಗೆ ಅ ಟೈಮ್ ನಲ್ಲಿ ಅಷ್ಟು ತಲೆ ಓದಲಿಲ್ಲ ನೋಡಿ. ಹಾಗೆ ಮಾಡಿದ್ರೆ ಕೆಲಸ ಬಹಳ ಸುಲಭ ಆಗ್ತಾ ಇತ್ತು.

ರಾಜೆವ ಅವರೆ: ಹೌದು ಸ್ವಾಮೀ ಹೌದು. ಇ ಭವಿಷ್ಯ ಹೇಳೋರು, ರಾಜಕಾರಣಿಗಳ ತರ ಮಾತು ಬದಲಿಸಲಿಕ್ಕೆ ಶುರು ಮಾಡಿದ್ದರೆ. ಏನು ಕರ್ಮನೋ..

ಅರುಣ: ನಿನ್ನ ಮಾತು ಅತ್ಯಂತ ಸರಿ ಇದೆ.

ರಮ್ಯ: ಹಹಹ ನಿಮ್ಮ ಹಾಗೆ ನಂಗೆ ಕೂಡ ಬೇಜಾರ್ ಆಗಲಿದೆ. ಪ್ರಳಯ ಆದ್ರೆ ನನ್ನ ಮ್ಯಾನೇಜರ್ ಕೂಡ ನೆಗೆದು ಬೀಳುತ್ತೆ ಅಂತ ಆಸೆ ನಂಗೆ ಇದೆ. :) :)

ಶಿವೂ ಅವರೇ: ಪತ್ರಿಕೆಯವರು ಸಾಮನ್ಯ ವಾಗಿ ರಾಶಿ ಭವಿಷ್ಯ ಬರೆಯಲು ಜ್ಯೋತಿಷಿ ಗಳನ್ನ ಅವಲಂಬಿಸಿರುತ್ತಾರೆ. ಅವರು ಏನಾದರು ತೊಂದರೆ ಆಗಿ ಲಬ್ಯಾರಿಲ್ಲದೆ ಹೋದಲ್ಲಿ... ಇ ಥರದ ಪ್ರಕರಣ ನಡೆಯುತ್ತೆ.

ಚುಕ್ಕಿ ಚಿತ್ತಾರ: ಹೌದು, ಕೆಲವರು ಜ್ಯೋತಿಷಿ ಗಳ ಮಾತನ್ನೇ ನಂಬಿ ಕೂರುವುದನ್ನು ಕಂಡಾಗ ಮನಸ್ಸಿಗೆ ಪಿಚ್ಚೆನಿಸುತ್ತದೆ.

girija M.S said...

I am very very happy and immersed while reading the Viveka choodamani
Thanks a lot
with regards
Girija