Wednesday, December 7, 2011

ದೆವ್ವ - ಒಂದು ಪತ್ತೆ ದಾರಿ ಕಥೆ



ನಿವೆಂದಾದರೂ ಬೆಂಗಳೂರಿನ ಕಾರ್ಪೋರೇಶನ್ ಸಮೀಪದ ಸಂಪಂಗಿರಾಮ್ ನಗರಕ್ಕೆ ಬಂದಿದ್ದೇ ಆದಲ್ಲಿ, ನಿಮ್ಮ ವಾಸನೆಯನ್ನು ನನ್ನ ಪತ್ತೆಧಾರ ಮಿತ್ರ ಗುರುತಿಸಿಯೇ ಇರುತ್ತಾನೆ. ಪತ್ತೆದಾರ ಪುರುಷೋತ್ತಮ, ಅಜಿತ ಮುಂತಾದವರ ಹಾಗೆ ಇವನು ಕೂಡ ಒಂದು ಮಟ್ಟಿಗೆ ಫೇಮಸ್ ಕೂಡ ಹೌದು. ತನ್ನ ಜನ್ಮ ಕಾರಣವೇ ಪತ್ತೆದಾರಿಕೆ! ಜನರಿಗೆ ಸಹಾಯ ಮಾಡುವುದೇ ಗುರಿ ಎಂದು ಕೊಂಡವನು ನಮ್ಮ ವರುಣ.ಇರಲಿ ಸದ್ಯಕ್ಕೆ ಈ ದೆವ್ವದ ಕೇಸಿಗೆ ಬರೋಣ. ಇಲ್ಲಿ ದೆವ್ವ, ದೆವ್ವಗಳನ್ನು ಏಕವಚನದಲ್ಲಿ ಸಂಭೋದಿಸಲಾಗಿದೆ , ದಯಮಾಡಿ ದೆವ್ವಾಭಿಮಾನಿಗಳು ಬೇಸರಿಸಿ ಕೊಳ್ಳದಿರಿ.

ಮೊನ್ನೆ ರಾತ್ರೆ ಕರೆಂಟು ಇಲ್ಲವಾದ್ದರಿಂದ ಹುರಿದ ನೆಲಗಡಲೆ ತಿನ್ನುತ್ತಾ ಕೂತಿದ್ದೆವು, ಅಷ್ಟರಲ್ಲಿ ವರುಣ ನ ಮೊಬೈಲ್ ರಿಂಗುಣಿಸಿತು. ಮಾತನಾಡುವಾಗ ವರುಣ ನ ಅರಳಿದ ಮುಖ ನೋಡಿ, ಆ ಕಡೆ ಇರೋದು ಒಂದು ಹುಡುಗಿ ಎಂದು ಗ್ಯಾರಂಟಿ ಆಯಿತು. (ನಂಗೂ ಕೂಡ ಸ್ವಲ್ಪ ಪತ್ತೆ ದಾರಿಕೆ ಬರುತ್ತೆ ) ಆಮೇಲೆ ಅವನು 5 ನಿಮಿಷ ನಾಪತ್ತೆ ಕೂಡ ಆದ. ವಾಪಸ್ ಬರೋ ಹೊತ್ತಿಗೆ ಕರೆಂಟು ಬಂದಿತ್ತು. ಟೀವಿ ಲಿ ಸದಾನಂದ ಗೌಡರ ನಗು ನೂ ಕಾಣಿಸ್ತಾ ಇತ್ತು. ಆಮೇಲೆ ಕಾಲ್ ಬಗ್ಗೆ ಹೇಳಿದ್ದು ಇಷ್ಟು. ಫೋನ್ ಬಂದಿದ್ದು ದೂರದ ಅಮೆರಿಕೆ ಇಂದ, ಮೂಲತಃ ಬೆಂಗಳೂರು ಮೂಲದ ನಯನ ಅಂತೆ. ಇಲ್ಲೇ ಕೋಣನಕುಂಟೆ ಲಿ ಅವರ ಬಂಗಲೆ ಕೂಡ ಇದೆ. ಆದರೆ ಆ ಬಂಗಲೆಲಿ ದೆವ್ವ ಇದೆಯಂತೆ. ಯಾರು ಹೊಗೊಕು ಬಿಡ್ತಾ ಇಲ್ವಂತೆ. ಹೋದೋರಿಗೆ ಗಲಾಟೆ ಮಾಡಿ, ಹೆದರಿಸಿ ಕಳ್ಸುತ್ತೆ ಅಂತೆ. ಅವರಪ್ಪ ಹೋದ ತಿಂಗಳು ಬಂದಾಗ ಸಿಕ್ಕಾಪಟ್ಟೆ ಕಾಟ ಕೊಡ್ತಂತೆ. ಅವರು ಯಾರೋ ಕಿಡಿಗೇಡಿ ಗಳು ಅಂದುಕೊಂಡು ಬ್ಯಾಟರಿ ಹಾಕಿಕೊಂಡು ಹುಡುಕೋಕೆ ಹೋದ್ರೆ ಅವರ ಮೇಲೆ ಪಾತ್ರೆಗಳನ್ನ ಎಸೆದು ಹೆದರಿಸಿ ಕಳ್ಸಿತು ಅಂತೆ. ಕೊನೆಗವರು ದಾರಿ ಕಾಣದ ಪರಿಚಯಸ್ತರನ್ನ ಕೇಳಿದ್ರೆ ನೀವು ಕೊಪ್ಪಕ್ಕೆ, ಕೊಳ್ಳೇಗಾಲಕ್ಕೆ ಹೋಗಿ ಮಾಂತ್ರಿಕರನ್ನು ಕರೀರಿ ಅಂದರಂತೆ. ಇವರು ಆಪ್ತ ಮಿತ್ರ ದ ರಾಮಚಂದ್ರ ಆಚಾರ್ಯ ರನ್ನೇ ಕರೆಸಿದರಂತೆ. ಆದ್ರೆ ದೆವ್ವ ಅವರ ಮೇಲೆ ನೆ ಹಲ್ಲೆ ಮಾಡ್ತಂತೆ. ಆದುದರಿಂದ ಈ ದೆವ್ವದ ರಹಸ್ಯ ಭೇದಿಸುವ ಅಸೈನ್ಮೆಂಟ್ ನನಗೆ ಸಿಕ್ಕಿದೆ ಅಂದು ಮಾತು ಮುಗಿಸಿದ. ಪಾಪ ಅವರು ನಮ್ಮನ್ನ ದೆವ್ವ ಹಿಡಿಯೋರು ಅಂತ ಭಾವಿಸಿದ್ರೋ ಏನೋ? ಅಥವಾ ಇವ್ನು ಹುಡುಗೀರು ಫೋನ್ ಮಾಡಿದ್ರೆ ಯಾವ ಕೇಸ್ ಬೇಕಾದ್ರೂ ತಗೋತಾನ ಅಂತ ಗುಮಾನಿ ನೂ ಬಂತು.

ಊಟ ಆದ ಕೂಡಲೇ ಎರಡು ಬ್ಯಾಟರಿ ಹಿಡ್ಕೊಂಡು ಹೋಗೋಣ ಅಂತ ಅವನು ರೆಡಿ ಆದ್ರೆ ನಂಗೆ ಯಾಕೋ ಜ್ವರ ಬಂದಿದೆ ಅಂತ ಅನ್ನಿಸ್ತು. (ಭಾಗಷ್ಯ ಅಲ್ಲಿ ಇದ್ದಿದ್ದು ಬ್ರಹ್ಮ ರಾಕ್ಷಸ ಇರಬೇಕು )ಅವನು ಬೈಕೊಂಡು ಒಬ್ನೇ ಹೋದ, ನಾನು ಮತ್ತೆ ಕಳ್ಳೆ ಕಾಯಿ ಮೆಲ್ಲುತ್ತಾ ನಿದ್ದೆ ಹೋದೆ. ಬೆಳಿಗ್ಗೆ ಪಕ್ಕದ ಮನೆ ನೀಲು ಆಂಟಿ ಮನೆ ಇಂದ ಒಂದು ೨೦ ನೀರು ದೋಸೆ ಬಂತು. ವರುಣ ಬರೋ ಸೂಚನೆ ಇರಲಿಲ್ಲ ವಾದ್ದರಿಂದ (ಅಥವಾ ಹಾಗೆ ಅಂದುಕೊಂಡು) ನಾನೊಬ್ಬನೇ ತಿಂದೆ. ಸಂಜೆ ಕೂಡ ಬರಲಿಲ್ಲವಾದ್ದರಿಂದ ನಾನೊಬ್ನೇ ಹೋಗಿ ಮೊಸರು ವಡೆ, ಮಸಾಲೆ ದೋಸೆ ತಿಂದು ಬಂದೆ. ಸ್ವಲ್ಪ ಹೊತ್ತಲ್ಲಿ "ನಾಡಿದ್ದು ಬರ್ತೀನಿ" ಅಂತ ಮೆಸೇಜ್ ಬಂತು. ಸರಿ ಅಲ್ಲಿ ತನಕ ಒಬ್ನೇ ಕೂತು ಟೀವಿ ನೈನ್ ನೋಡಬಹುದು ಅಂತ ಕುಶಿಯಾದೆ.

ಎರಡು ದಿನ ಆದ ಮೇಲೆ ಬಂದ. ಕೆಲಸ ಎಲ್ಲಾ ಮುಗೀತು, ಸಂಜೆ ಅವರು ಬರ್ತಾರೆ ರೆಡಿ ಆಗಿರು ಅಂದ. ದೆವ್ವ ಹೋಯ್ತಾ ಅಂತ ಕೇಳಬೇಕು ಅಂತ ಅನ್ನಿಸಿದ್ರೂ, ಸಂಜೆ ಹೇಳ್ತಾನಲ್ಲ ಅವಾಗ್ಲೇ ಕೇಳೋಣ ಅಂತ ಸುಮ್ಮನಾದೆ. 5 ಗಂಟೆ ಹೊತ್ತಿಗೆ ಅವರು ಬಂದ್ರು, ನಯನ ನಿಜಕ್ಕೂ ನಯನ ಮನೋಹರ ವಾಗೆ ಇದ್ಲು. ಬಂದವಳೇ ತುಂಬಾ ಥ್ಯಾಂಕ್ ಯು ವರುಣ್ ಎಂದವಳೇ ತಬ್ಬಿಕೊಂಡಳು. (ನಂಗೆ ಇಂತಹ ಸನ್ನಿವೇಶಗಳಲ್ಲಿ ಅವನ ಮೇಲೆ ವಿಪರೀತ ಅಸೂಯೆ ಆಗುತ್ತೆ )

ಸೋಫಾ ದಲ್ಲಿ ಕೂರುತಿದ್ದ ಹಾಗೆ ಮಿಸ್ಟರ್ ವರುಣ್ ದೆವ್ವ ಹೊಯ್ತ? ಏನು ಮಾಡಿದ್ರಿ? ಯಾರ ದೆವ್ವ ಅದು? ಅಂತೆಲ್ಲ ಕೇಳಿದಳು.

ತನ್ನ ಸಾಹಸ ಕಾರ್ಯದ ಬಗ್ಗೆ ಹೇಳೋದ್ರಲ್ಲಿ ವರುಣ ಗೆ ಯಾವಾಗಲು ಆಸಕ್ತಿ ಜಾಸ್ತಿ. ಶುರು ಮಾಡಿಕೊಂಡ.

ಅ ಮನೆಯ ದೆವ್ವ ಬಗ್ಗೆ ಇವನು ಕೇಳಿದ್ನಂತೆ. (ನಾನು ಹೈ ಕೋರ್ಟ್ ದೆವ್ವದ ಬಗ್ಗೆ ಮಾತ್ರ ಕೇಳಿದ್ದೆ. ) ರಾತ್ರೆಯೇ "ಭೂತ ಬಂಗಲೆ" ಪಕ್ಕದ ಮನೆಗೆ ಹೋಗಿ ವಿಚಾರಿಸಿದ್ನಂತೆ. ಅ ಮನೇಲಿ ಮೊದಲು ಇದ್ದವರು ದಂಪತಿಗಳು. ನಯನಗೆ ದೂರದ ಸಂಬಂದಿಗಳು ಕೂಡ ಹೌದು. ಆದ್ರೆ ಆ ದಂಪತಿಗಳು ಯಾವಾಗಲು ಕಿತ್ತಾಡೋರಂತೆ. ಹಿಂಗಿರ ಬೇಕಾದ್ರೆ ರಸ್ತೆ ಅಪಘಾತದಲ್ಲಿ ಅವರು ತೀರಿಕೊಂಡರಂತೆ. ಇವನಿಗೆ ಅವಾಗ್ಲೇ ಡೌಟ್ ಬಂತಂತೆ. ದೆವ್ವ ಇರೋದೇ ಆದ್ರೆ ಅದು ಅ ದಂಪತಿ ಗಳು ಅಂತ. ರಾತ್ರೆ ಅ ಕಾಂಪೌಂಡ್ ಗೆ ಕಿವಿ ಕೊಟ್ಟು ನಿಂತ್ರೆ ಬರೇ ಒಂದು ಹೆಣ್ಣು ದ್ವನಿ ಕೇಳ್ತಾ ಇತ್ತಂತೆ. ಅದು ನೆಲ ಕುಟ್ಟೋದು, ಅಳೋದು, ಕಿರಿಚೋದು ಮಾಡ್ತಾ ಇತ್ತಂತೆ. ಕೆಲವೊಮ್ಮೆ ಪಾತ್ರೆ ಗಳನ್ನೂ ಬಿಸುಟು ಶಬ್ದ ಮಾಡ್ತಾ ಇತ್ತಂತೆ. ಆದರು ಇವ್ನು ದೈರ್ಯ ಮಾಡಿ ಒಳಗೆ ಹೋಗಿ ಯಾರು ನೀನು? ಯಾಕೆ ಅಳುತ್ತಾ ಇದ್ದಿ? ನಾನೇನಾದ್ರು ಸಹಾಯ ಮಾಡಬಹುದೇ? ಅಂತ ಕೇಳೆ ಬಿಟ್ಟನಂತೆ.

ದೆವ್ವ ಏನು ಕಣ್ಣಿಗೆ ಕಾಣುತ್ತ? ಆದರೂ ಸ್ವಲ್ಪ ಸ್ಥೈರ್ಯ ತಗೊಂಡು, ನೋಡು ನಾನೊಬ್ಬ ಮಾನವ ಆದರೇನಂತೆ, ಮುಂದೆ ನಿನ್ ತರಾನೆ ದೆವ್ವ ಆಗೋನು, ಹೇಳು ಯಾಕೆ ಈ ತರ ಅಳುತ್ತಾ ಇದ್ದೀಯ? ಇದ್ದಕಿದ್ದಂತೆ ಮನುಷ್ರನ್ನ ಕಂಡು ದೆವ್ವ ಹೆದ್ರಿತೋ, ಅಥವಾ ಮಾತಡ್ಸಿದ್ದಕ್ಕೆ ಕುಶಿಯ್ತೋ ಗೊತ್ತಿಲ್ಲ, ಒಟ್ಟಾರೆ ಕಥೆ ಹೇಳ್ತಂತೆ. ಅ ಮನೇಲಿ ಮೊದ್ಲು ಇದ್ದರಲ್ಲ ದಂಪತಿಗಳು, ಹೆಂಡತಿನೇ ಅ ದೆವ್ವ ಅಂತೆ. ಅವರು ಅಪಘಾತದಲ್ಲಿ ಸತ್ತ ಮೇಲೆ ಯಮ ಕಿಂಕರರು ಬಂದು ಇವರನ್ನ ಕರ್ಕೊಂಡು ಹೋಗ್ತಾ ಇರ್ಬೇಕಾದ್ರೆ,(somewhere in Vaitarnika river) ನಿಮ್ಮಿಂದಲೇ ಆಕ್ಸಿಡೆಂಟ್ ಆಗಿದ್ದು ಅಂತ ಗಂಡಗೆ ಬೈದ್ಲಂತೆ. ಅಷ್ಟಕ್ಕೇ ಹೆದರಿದ ಗಂಡ ಕ್ಷಣ ಮಾತ್ರದಲ್ಲಿ ಕುಣಿಕೆ ಇಂದ ತಪ್ಪಿಸ್ಕೊಂಡು ಹಾರಿ ಹೋದನಂತೆ. ಈ ಹೆಂಗಸಿನ ಬಾಯಿ ಗಿಂತ ಯಮ ನ ಶಿಕ್ಷೆ ನೆ ಮೇಲು ಎಂದು ಬಾವಿಸಿದ ಕಿಂಕರರು "ನಿನ್ ಗಂಡ ಸಿಕ್ಕ ಮೇಲೆ ನಮಗೆ ಮಿಸ್ ಕಾಲ್ ಕೊಡು ಅಂತ ಹೇಳಿ ಅವರು ಹೋದರಂತೆ" ಅತ್ಲಾಗೆ ಬಯ್ಯೋಕೆ ಗಂಡ ನೂ ಇಲ್ಲದೆ, ಸ್ವರ್ಗ ನೂ ಇಲ್ಲದೆ ಈಕೆ ಬೇಜಾರಾಗಿ ಆ ಮನೆಗೆ ಬಂದು ಕೂತ್ಲಂತೆ. ಇಲ್ಲಿಗೆ ಮೊದಲ ಭಾಗ ಮುಗೀತು ಅಂತ ಹೇಳಿ ಒಂದು ಸಿಪ್ಪು ಟೀ ಕುಡಿದು ಮತ್ತೆ ಮುಂದುವರಿಸಿದ.

ಅ ಗಂಡನಿಗೆ ಸಿನೆಮ ಹುಚ್ಚು, ಮೂರು ಹೊತ್ತು ಕಾಮಾಕ್ಯ ಥೇಟರ್ ನಲ್ಲಿ ಇರ್ತಿದ್ದ ಅಂತ ಪಕ್ಕದ ಮನೆಯವರು ಹೇಳಿದ್ರಿಂದ ಅವನು ಅಲ್ಲೇ ಎಲ್ಲಾದರು ಹುಣಸೆ ಮರಕ್ಕೆ ನೇತು ಹಾಕ್ಕೊಂಡು ಇರಬಹುದು ಅಂತ ಅನ್ನಿಸ್ತು. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಹುಣಸೆ ಮರ ಇದ್ದಿದ್ದು ಗೊತ್ತಿತ್ತು. ನಿನ್ನೆ ರಾತ್ರೆ ಅಲ್ಲಿಗೆ ಹುಡುಕೊಂಡು ಹೋದೆ. ಸೆಕೆಂಡ್ ಶೋ ಆದ ನಂತರ ಮರದಿಂದ ಗಂಡು ದ್ವನಿ ಕೇಳಿಸ್ತು. ದೈರ್ಯ ಮಾಡ್ಕೊಂಡು ಮೊನ್ನೆ ರಾತ್ರೆ ಮಾಡಿದ್ದ ತರ ಆ ದೆವ್ವನು ಮತಾಡಿಸ್ದೆ. ನನ್ನ ಊಹೆ ನಿಜ ಆಗಿತ್ತು. ಅದು ಆ ಗಂಡನೇ! ಆಮೇಲೆ ತಡ ಮಾಡದೆ ಹೋಗಿ ಅ ಹೆಣ್ಣು ದೆವ್ವಕ್ಕೆ ವಿಷ್ಯ ಹೇಳಿದೆ. ಆಮೇಲೆ ಕಿಂಕರರಿಗೆ ಕಾಲ್ ಮಾಡು ಅಂತ ನಂ ಮೊಬೈಲ್ ಕೂಡ ಕೊಟ್ಟೆ. ಕ್ಷಣ ಮಾತ್ರದಲ್ಲಿ ಕಿಂಕರರು ಹೋಗಿ ಹಿಡ್ಕೊಂಡು ಬಂದ್ರು ಅನ್ಸುತ್ತೆ, ಅ ಗಂಡು ದೆವ್ವ ನಂಗೆ ಶಾಪ ಹಾಕ್ತ ಇರೋದು ಕೇಳಿಸ್ತು. ಸ್ವಲ್ಪ ಹೊತ್ತಲ್ಲಿ ಅಲ್ಲಿ ಶಬ್ದ ಎಲ್ಲ ಕಡಿಮೆ ಆಯಿತು. ಎಲ್ಲಾ ಯಮಪುರಿಗೆ ಹೋದರು. ಆಮೇಲೆ ನಾನು ದೆವ್ವ ದ ಶಾಪ ಪರಿಹಾರಕ್ಕೆ ಕೊಳ್ಳೇಗಾಲಕ್ಕೆ ಹೋಗಿ ತಾಯ್ತ ಕಟ್ಟಿಸ್ಕೊಂದು ಬೆಳಿಗ್ಗೆ ಬಂದೆ ಅಂತ ಹೇಳಿ ವರುಣ ಮಾತು ಮುಗಿಸಿದ. ಯಮಪುರಿಯ ಕಾಂಟಾಕ್ಟ್ ನಂಬರ್ ನಮ್ಮ ಯಾರಿಗೂ ಬೇಕಾಗಿಲ್ಲ ವಾದ್ದರಿಂದ ನಾವು ಕೇಳಲಿಲ್ಲ.

ಮಾತು ಕಥೆ ಎಲ್ಲಾ ಮುಗಿಸಿ ಅವರನ್ನು ಬೀಳ್ಕೊಡ್ತಾ ಇರಬೇಕಾದ್ರೆ ಒಂದು ಕಾಲ್ ಬಂತು. ಅದ್ಯಾವ್ದೋ ಭವಿಷ್ಯ ಹೇಳೋ ಸ್ವಾಮಿಜಿದು ತಾಳೆ ಗರಿಗಳು ನಾಪತ್ತೆ ಆಗಿದೆಯಂತೆ. ಸ್ವತಃ ಮಾಜಿ ಮುಖ್ಯ ಮಂತ್ರಿಗಳು ಸಹಾಯ ಕೇಳಿದ್ದಾರೆ. ಈಗ ನಾವು ಅಲ್ಲಿಗೆ ಹೊರಡಬೇಕಿದೆ.

ಇರಲಿ, ಈ ಪತ್ತೆದಾರನ ಜೊತೆ ಇರೋದು ನಾನು ಡಾಕ್ಟರ್ ಅಂತ ಅಂದು ಕೊಂಡರ? ಹಂಗೇನಿಲ್ಲ. ನಾನು ಮೂಲತಃ ಕೌನ್ಸೆಲ್ಲಿಂಗ್ ಮಾಡೋನು. ವರುಣ್ ಕೈಯಲ್ಲಿ ಕೇಸ್ ಆಗಿಲ್ಲ ಅಂದ್ರೆ ಅದು ನಂಗೆ ಬರುತ್ತೆ. "ನಿಮ್ಮ ಮನೇಲಿ ಕಳ್ಳತನ ಆಗೇ ಇಲ್ಲ, ನಿಮ್ಮ ಹತ್ತಿರ ಮುತ್ತಿನ ಹಾರ ಇರಲೇ ಇಲ್ಲ" ಅಂತೆಲ್ಲ ನಂಬಿಸಿ ನ್ಯಾಯ ಮಾರ್ಗವಾಗಿ ಫೀಸ್ ಪಡೆಯೋದು ನನ್ನ ಕೆಲಸ :)

ಅಂದ ಹಾಗೆ ನಿಮ್ಮ ಬಳಿ ಕೂಡ ಏನಾದ್ರು ಸಮಸ್ಯೆ ಇದ್ರೆ ನಮ್ಮನ್ನು ಸಂಪರ್ಕಿಸಬಹುದು. ದೆವ್ವ ಹಿಡಿತೀವಿ ಅಂತ ನಮಗೆ ಬಾಡಿ ಬ್ರಹ್ಮಾಂಡ ನ ಹಿಡಿಯೋ ಕೇಸ್ ಕೊಡಬೇಡಿ ಅಷ್ಟೇ. :)

ಶೀರ್ಷಿಕೆ ಕೊಡುಗೆ: ಫ್ಯೂಚರ್ ದೆವ್ವ ಚಂದ್ರು. :)

Thursday, July 14, 2011

ಕಾಮೆಂಟರಿ


ನನ್ನ ಅಖಂಡ ಪ್ರೇಮಕ್ಕೆ ಕೆ ಈಗ 15 ವರ್ಷ ಮೇಲಾಯಿತು. ಅಂದು ಬಾಂಬೆ ಯಲ್ಲಿ ಭಾರತ ಮತ್ತೆ ಆಸ್ಟ್ರೇಲಿಯಾ ವರ್ಲ್ಡ್ ಕಪ್ ಮ್ಯಾಚ್ ನಡೀತಾ ಇತ್ತು. ಅಂದು ಸಂಜೆ ನಾನು ಸಾಂದ್ಯವಂಧನೆ ಅದೆಷ್ಟು ವೇಗವಾಗಿ ಮಾಡಿದೆನೋ? ಮುಗಿಸಿ ದೇವರ ಕೋಣೆಯಿಂದ ಹೊರ ಬರುವಾಗ ಕಂಡಿದ್ದು ಸಚಿನ್ ಸಿಕ್ಸ್ ಮತ್ತೆ ಕುಣಿಯುತ್ತಿದ್ದ ನಿನ್ನ ಮುಂಗುರುಳು! ಅಂದು ಮನೆಯಲ್ಲಿ ಎಲ್ಲರಿಗೂ ಇಂಡಿಯಾ ಸೋತಿತಲ್ಲ ಅಂತ ನಿದ್ದೆ ಬಾರದೆ ಇದ್ರೆ, ನನಗೆ ಬೇರಾವುದೋ ಕಾರಣದಿಂದ ನಿದ್ರೆ ಬರಲಿಲ್ಲ!

ಅಂದಿನಿಂದ ಪ್ರತಿ ಮ್ಯಾಚ್ ನೋಡಲು ನೀನು ನಮ್ಮ ಮನೆಗೆ ಬರತೊಡಗಿದೆ. ನಂತರ ಪಾಕಿಸ್ತಾನದ ಮೇಲೆ ಬೆಂಗಳೂರಿನಲ್ಲಿ ಪಂದ್ಯ. ಅಂದು ಜಡೇಜ ಹೊಡೆದ ಎರಡು ಸಿಕ್ಸೆರ್ ಗೆ ನಾವಿಬ್ಬರು ಕೈ ಕೈ ತಟ್ಟಿ ಚಪ್ಪಾಳೆ ಹೊಡೆದಿದ್ದವು. ಅದೇ ನಿನ್ನ ಮೊದಲ ಸ್ಪರ್ಶ. ನಂತರ ಸೆಮಿ ನಲ್ಲಿ ಇಂಡಿಯಾ ಶ್ರೀಲಂಕ ಮೇಲೆ ಸೋತಿತು, ಆದರೆ ನಂಗೆ ನಿನ್ನ ಮೇಲೆ ಆಕರ್ಷಣೆ ಜಾಸ್ತಿ ಆಗಿತ್ತು.

ನಂತರ ಕೆನಡಾ ದಲ್ಲಿ ಸಹಾರ ಕಪ್ ಆಡಲು ನಮ್ಮವರು ಹೋದರು. ಆಗಲೂ ಮ್ಯಾಚ್ ಗಳನ್ನು ನೋಡಲು ನೀನು ನಮ್ಮ ಮನೆಗೆ ಬಂದೆ. ಭಾರತ ಸರಣಿ ಸೋತಿತು. ಕೊನೆಯ ಪಂದ್ಯ ದಲ್ಲಿ ಮುಶ್ತಕ್ ಅಹ್ಮೆದ್ 5 ವಿಕೆಟ್ ಪಡೆದ, ನಿನಗೆ ಕಣ್ಣಲ್ಲಿ ನೀರೆ ಬಂದಿತ್ತು. ಹಾಗೇನೆ ಮುಶ್ತಕ್ ಗೆ ನನ್ನ ಕಡೆ ಇಂದ ಲೆಕ್ಕವಿಲ್ಲದಷ್ಟು ಶಾಪ ಕೂಡ ಜಮೆ ಆಯಿತು. ನಿನ್ನ ಮೇಲಿನ ಇರುವುದು ಕೇವಲ ಆಕರ್ಷಣೆ ಅಲ್ಲವೇನೋ ಅಂತ ಅನ್ನಿಸುವಷ್ಟರಲ್ಲಿ ನಮ್ಮವರು ನ್ಯೂಜೀಲ್ಯಾಂಡ್ ನಲ್ಲಿ ಆಡುತ್ತಿದ್ದರು. ಅಲ್ಲಿನ ಹಗಲು ರಾತ್ರಿ ಪಂದ್ಯ ನೋಡಲು ನೀನು ಮನೆಗೆ ಬರುತ್ತಿರಲಿಲ್ಲ. ಆಡಲು ಅಲ್ಲಿಗೇ ಹೋಗಬೇಕಿತ್ತಾ? ನಮ್ಮಲ್ಲೇನು ಮೈದಾನಗಳು ಇಲ್ಲವ ಅಂತ ಅದೆಷ್ಟು ಅಂದು ಕೊಂಡೆನೋ? ಆಮೇಲೆ ಅದೆಷ್ಟೋ ಮ್ಯಾಚ್ ಗಳು ಇಲ್ಲಿ ನಡೆದವು. ಸಚಿನ್ ಹೊಡೆದ ಸೆಂಚುರಿಗಳು ಎಷ್ಟೋ. ಅವನ ಪ್ರತಿ ಬೌಂಡರಿಗೆ ಹಾಕಿದ ಕೇಕೆಗಳು ಲೆಕ್ಕವಿಟ್ಟವರಾರು?. ಕೆಲವೊಮ್ಮೆ ಮಳೆ ಬಂದು ಪಂದ್ಯ ನಿಲ್ಲಿಸಿದರೆ ನೀನು, ಮಳೆ ನಿಲ್ಲುವುದನ್ನೇ ಕಾಯುತ್ತಾ ಲಂಕೇಶ್ ತಿರುವಿ ಹಾಕುತ್ತಿದ್ದೆ. ನಾನು ನಿನ್ನ ಕಣ್ಣುಗಳನ್ನೇ ನೋಡುತ್ತಾ ಕೂತಿರುತ್ತಿದ್ದೆ.


1999 ರಲ್ಲಿ ಇಂಗ್ಲೆಂಡ್ ನಲ್ಲಿ ವರ್ಲ್ಡ್ ಕಪ್ ನಡೆಯುತ್ತಿತ್ತು. ನಮ್ಮೂರಲ್ಲಿ ಎಡೆಬಿಡದೆ ಮಳೆ. ನೀನು ಬರಲಿಲ್ಲ, ವಿಪರೀತ ಜ್ವರವಿತ್ತು ನಿಂಗೆ. 2000 ರಲ್ಲಿ ಸಹರ ಕಪ್ ನಡೆಯದೆ ಬೇಸರ ಉಂಟು ಮಾಡಿದರೆ, ನಿಮ್ಮ ಮನೆಯಲ್ಲಿ ಬಣ್ಣದ ಟೀವಿ ಬಂದಿತ್ತು, ನನ್ನಲ್ಲಿ ಅಳುವಿನ ಕಟ್ಟೆ ಒಡೆದಿತ್ತು. ಆಮೇಲೆ ನೀನು ಡಿಗ್ರಿ ಮಾಡಲು ಶಿವಮೊಗ್ಗೆ ಗೆ ಹೋದೆ. ಆಸ್ಟ್ರೇಲಿಯಾ ದವರು ಇಂಡಿಯಾ ಗೆ ಬಂದರು. ಹೇಡನ್, ಸಚಿನ್ ದೇವರು ಅಂತ ಕರೆದ. ವಾರ್ನೆ ತಲೆ ಮೇಲೆ ಕೈ ಇಟ್ಟ. ಆದರೆ ಸಂತಸ ಹಂಚಿ ಕೊಳ್ಳಲು ನೀನು ಇರಲಿಲ್ಲ. ಆದರೆ 2003 ರಲ್ಲಿ ಸೆಂಚುರಿಯನ್ ನಲ್ಲಿ ಭಾರತ ಮತ್ತೆ ಪಾಕಿಸ್ತಾನ ಆಡುವಾಗ ನೀನು ಊರಿಗೆ ಬಂದಿದ್ದೆ. ಅಕ್ತರ್ ಗೆ ಒಂದು ಸಿಕ್ಸ್ ಬಿದ್ದ ಕೂಡಲೇ ನಿಮ್ಮನೇಲಿ ಕೇಬಲ್ ಸರಿ ಬರ್ತಾ ಇಲ್ಲ ಅಂತ ಹೇಳಿ ಬಂದು ನನ್ನ ಜೊತೇನೆ ಕೂತು ಆಟ ನೋಡಿದೆಯಲ್ಲ, ಅಂದು ನಮ್ಮಿಬ್ಬರ ಮದ್ಯೆ ಗ್ಯಾಪ್ ಇತ್ತಾ? ಆದ್ರೆ ಹಾಳದೊನು ಸಚಿನ್ 98 ಕೆ ಔಟ್ ಆಗಿ ಬಿಟ್ಟ! ನೀನು ಸಿಡುಕಿಕೊಂಡು ಮನೆಗೆ ಹೋದೆ.


2004 ರಲ್ಲಿ ರಾವಲ್ಪಿಂಡಿಯಲ್ಲಿ ಸಚಿನ್ 37 ನೆ ಶತಕ ದಾಖಲಿಸಿದ, ಆದರೆ ಪಂದ್ಯ ಸೋತ. ಅಷ್ಟೇ ಅಲ್ಲ, 38, 39,40 ನೆ ಶತಕದಲ್ಲೂ ಭಾರತಕ್ಕೆ ಸೋಲು. ನಿನ್ನ ಮುಖ ಕೂಡ ನೋಡದೆ 2 ವರ್ಷ 6 ತಿಂಗಳು 18 ದಿನ ಆಗಿತ್ತು. ನಂಗೆ 9 ನೇ ಕೆಲಸ ಕೂಡ ಹೋಗಿತ್ತು.

ಮುಂದೆ ವೆಸ್ಟ್ ಇಂಡಿಸ್ ನಲ್ಲಿ ಕಪ್ ನಡೆಯೋ ಹೊತ್ತಿಗೆ ನಿಮ್ಮನೇಲಿ ವರ ಹುಡುಕುವ ಸಂಭ್ರಮ. ಅದೆಷ್ಟು ಉಪ್ಪಿಟ್ಟು ಕೇಸರಿ ಬಾತ್ ಸಮಾರಾಧನೆ ನಡೆಯಿತೋ? ಬಾಂಗ್ಲ ಗೆ ನಮ್ಮವರು ಸೋಲೋ ಹೊತ್ತಿಗೆ, ಇಂಜಿನಿಯರ್ ಬಿಟ್ಟು ಬೇರಾರಿಗೂ ನನ್ನ ಮಗಳನ್ನು ಕೊಡೋಲ್ಲ ಅಂತ ನಿಮ್ಮಪ್ಪ ಘೋಷಣೆ ಮಾಡಿ ಬಿಟ್ಟಿದ್ದರು. ನಾನಿಲ್ಲಿ ಮತ್ತೆ ಕೆಲಸ ಕಳೆದು ಕೊಂಡು ಬೀದಿ ಬೀದಿ ಅಲೀತಾ ಇದ್ದೆ. ನಮ್ಮವರು ವೆಸ್ಟ್ ಇಂಡಿಸ್ ನಿಂದ ವಾಪಾಸ್ ಬಂದ್ರು, ನಾನು ಇಲ್ಲಿ ಹೀನಾಯವಾಗಿ ಸೋತೆ. ಮುಂದೆ 2007 ಸೆಪ್ಟೆಂಬರ್ ನಲ್ಲಿ ಟಿ 20 ಶುರು ಆಗುವಾಗ ಅದ್ಯಾರೋ ರಮೇಶ ಅನ್ನೋ ಹೆಸರು ನಿನ್ನ ಜೊತೆ ಕೇಳಿ ಬರುತ್ತಲಿತ್ತು. ಯುವರಾಜ್, ಕ್ರಿಸ್ ಬ್ರಾಡ್ ಗೆ 6 ಸಿಕ್ಸ್ ಹೊಡೆದ. ಕಪ್ ಕೂಡ ಗೆದ್ದರು. ಆದರೆ ತಂಡದಲ್ಲಿ ಸಚಿನ್ ಇರಲಿಲ್ಲ. ನಂತರ ಅವನು ಹೊಡೆದ ಯಾವ ಶತಕ ಗಳು ನನಗೆ ನೆನಪೇ ಉಳಿಯಲಿಲ್ಲ. ಮೊನ್ನೆ ಮೊನ್ನೆ ಅವನು ವಿಶ್ವ ಕಪ್ ಕೂಡ ಗೆದ್ದು ಬಿಟ್ಟ, ಆದರೆ ಬೆಂಗಳೂರ್ ನಲ್ಲಿ ನಾನು ಒಬ್ಬನೇ ಕೂತು ನೋಡುತ್ತಿದ್ದೆ, ನೀನು ಎಲ್ಲಿದ್ದ್ಯೋ?

ಕಳೆದ ವಾರ ಊರಿಗೆ ಹೋಗಿದ್ದೆ, ಅಮ್ಮ ಹೇಳಿದಳು, ನೀನು ಅದ್ಯಾವ್ದೋ ಆಫ್ರಿಕಾ ದೇಶದಲ್ಲಿ ಇದ್ದಿ ಅಂತ. ಅಲ್ಲಿ ಕ್ರಿಕೆಟ್ ಬರುತ್ತಾ? ಗೊತ್ತಿಲ್ಲ. ಟೀವಿ ಲಿ ಕ್ರಿಕೆಟ್ ಬರ್ತಾ ಇತ್ತು. ನೋಡೋ ಆಸಕ್ತಿ ಇರಲಿಲ್ಲ. ಸಚಿನ್ ಕೂಡ ಟೀಂ ನಲ್ಲಿ ಇರಲಿಲ್ಲ.

Sunday, June 5, 2011

ಕಾಂಗ್ರೆಸ್ ಗೆ ಜೈ

ನಂಗೆ ಈ ಕಾಂಗ್ರೆಸ್ ಕಂಡ್ರೆ ಅಬ್ಬಾ ಅನ್ಸುತ್ತೆ. ಅಧ್ಬುತ ರಾಜಕೀಯ ನ ಅವರಿಂದ ಕಲಿಬೇಕು ಕಣ್ರೀ. ಒಂದು ಗೊಂಬೆ ನ ತಂದು ಇದು ದೇಶದ ಪ್ರಧಾನಿ ಅಂತ ಹೇಳುತ್ತೆ. ಅಕ್ಕಿ, ಬೇಳೆ, ಪೆಟ್ರೋಲ್ ಮುಂತಾದವು ಗಗನಕ್ಕೆ ಹೋಗಿದ್ದರೂ (ಇಲ್ಲ ಬಿಡಿ, ಗಗನ ಅಲ್ಲ. ಪೆಟ್ರೋಲ್ ಚಂದ್ರ ಲೋಕ ಸೇರಿದೆ ) ಪಾಕೆಟ್ ನಲ್ಲಿ ಹಣ ಸೇರ್ಸೋದ್ರಲ್ಲಿ ನಿರತವಾಗಿ ಬಿಡುತ್ತದೆ. ಇನ್ನೇನಾದ್ರು ಹೋರಾಟ ಮಾಡ್ತಿವಿ ಅಂದ್ರೆ ಸಂದಾನ ದ ನಾಟಕ ಆಡಿ, ಆಮೇಲೆ ನನಗೂ ಅದಕ್ಕೂ ಏನೂ ಸಂಬಂದ ಇಲ್ಲ ಅಂತ ನಿಧಾನ ಮಾಡುತ್ತೆ. ಇದೆ ಸಮಯಕ್ಕೆ ಸಿಬಲ್, ದಿಗ್ವಿಜಯ್, ಮೊಯ್ಲಿ ಮುಂತಾದ ಕೊಳಕುಗಳ ಮೂಲಕ ಹೋರಾಟಗಾರ ಚಾರಿತ್ರವಧೆಗೆ ಮುಂದಾಗಿ ಬಿಡುತ್ತದೆ. ಇಷ್ಟರಲ್ಲಾಗಲೇ ಜನಕ್ಕೆ ಹೋರಾಟದ ನೆನಪೇ ಹೋಗಿರುತ್ತೆ.

ಆದರೆ ಹೋರಾಟಗಾರರು ದೈರ್ಯ ಕಳೆದು ಕೊಳ್ಳಬೇಕಾದ ಅಗತ್ಯ ಇಲ್ಲ. ಈ ಹೋರಾಟದ ಬಗ್ಗೆ ನಾನು ಅಮೂಲಾಗ್ರ ವಾಗಿ ಚಿಂತಿಸಿ, ಚರ್ಚಿಸಿ ಹಾಗು ಯೋಚಿಸಿ ಕೆಳಕಂಡ ವಿಚಾರ ಮಂಡಿಸಿದ್ದೇನೆ. ಜನರು ಇದನ್ನು ಓದಿ, ಅರ್ಥೈಸಿ, ಮುಂದಿನ ನಡೆಯನ್ನು ಇಟ್ಟರೆ ದೇಶದ ನಾಯಕಿ ಸೋನಿಯಾ, ಭಾವಿ ಪ್ರಧಾನಿ ರಾಹುಲ ಮುಂತಾದವರ ಗಮನ ಸೆಳೆದು ಜಯಗಳಿಸಬಹುದಾಗಿದೆ.

೧. ಸುಖಾ ಸುಮ್ಮನೆ ಉಪವಾಸ ಕೂತುಕೊಂಡು ಸರ್ಕಾರಕ್ಕೆ "ಪ್ರಾಮಾಣಿಕವಾಗಿ" ಕೆಲಸ ಮಾಡಿ ಅಂದ್ರೆ ಹೆಂಗೆ ಸ್ವಾಮೀ? ಸತ್ಯಾಗ್ರಹಿಗಳು ಯಾರೂ ಇತಿಹಾಸ ದಿಂದ ಪಾಠ ಕಲಿತಿಲ್ಲ ಅಂತ ತೋರುತ್ತಿದೆ. ೨ ಜಿ ಹಗರಣ ದಲ್ಲಿ ಮುಖ್ಯ ಪಾತ್ರಧಾರಿ ಯಾಗಿದ್ದ "ನೀರಾ ರಾಡಿಯ " ತರದ ಲಾಬಿ ಮಾಡುವವರು ಬೇಕು. ಅದರಲ್ಲೂ ಒಬ್ಬ ಸುಂದರ ಮಹಿಳೆ ಮಧ್ಯವರ್ತಿ ಆದ್ರೆ ಫಲ ನಿಶ್ಚಿತ!

೨. ಬಾಬಗಿರಿ, ಗಾಂಧಿಗಿರಿ ಇಂದ ಏನೂ ಆಗೋಲ್ಲ. ಸದ್ಯಕ್ಕೆ ಸತ್ಯಾಗ್ರಹಿಗಳಿಗೆ "ಟೇಪ್ ಗಿರಿ " ಮಾಡಬೇಕಿದೆ. ಕಾಂಗ್ರೆಸ್ ಮಂತ್ರಿ ಗಳ ಮಾತುಕತೆ ಯನ್ನ ರೆಕಾರ್ಡ್ ಮಾಡಿ ಅವರನ್ನ ಬ್ಲಾಕ್ ಮೇಲ್ ಮಾಡಬೇಕು. ಅ ಟೇಪ್ ನಲ್ಲಿ ಒಂದಿಷ್ಟು ಸಿನೆಮಾ ನಟಿಯರ ಸ್ವರ ಸೇರಿಸಿದರೆ ಬಹಳ ಒಳ್ಳೇದು.

೩. ಮುಖ್ಯವಾಗಿ ಈ ಹೋರಾಟಗಾರರ ಬೇಡಿಕೆ ನೆ ಸರಿ ಇಲ್ಲ. ಬ್ರಷ್ಟಾಚಾರ ಬೇಡಂತೆ, ಕಪ್ಪು ಹಣ ವಾಪಾಸ್ ತರಬೇಕಂತೆ, ಲೋಕಪಾಲ ಮಸೂದೆ ಜಾರಿಗೆ ತರಬೇಕಂತೆ. ಒಂದಾ? ಎರಡ? ನಂಗೆ ಅನ್ಸುತ್ತೆ ಈ ಬೇಡಿಕೆಗಳನ್ನ ಸ್ವಲ್ಪ ಬದಲಿಸ ಬೇಕಾದ ಅಗತ್ಯ ಇದೆ. ಮೊದಲು
೧. ಬ್ರಷ್ಟಾಚಾರವನ್ನ ರಾಷ್ಟ್ರೀಕರಣ ಮಾಡಬೇಕು.
೨. ವಿದೇಶಿ ಬ್ಯಾಂಕ್ ಗಳಲ್ಲಿ ಹಣ ಇಟ್ಟರೆ ಅಲ್ಲಿ ಅದಕ್ಕೆ ಬಡ್ಡಿ ದೊರಕುವುದಿಲ್ಲ ವಾದ್ದರಿಂದ ಸರ್ಕಾರ ಅವರಿಗೆ ವಾರ್ಷಿಕ ೪೦ ಶೇಕಡಾ ಬಡ್ಡಿ ಕೊಡಬೇಕು.
೩. ಲೋಕಪಾಲ ಬದಲು ಶಿಶುಪಾಲ ಕಾಯಿದೆ ಜಾರಿಗೆ ತರಬಹುದು. ಇದರಿಂದ ಹೊಲಸು ಬಾಯಿಯ ದಿಗ್ವಿಜಯ್ ಸಿಂಗ್ ಮುಂತಾದವರಿಗೆ ಬಹಳ ಸಹಾಯ ಆಗುತ್ತದೆ.

ಈಥರ ಏನಾದ್ರೂ ಮಾಡಿದ್ರೆ ಸ್ವಲ್ಪ ಫಲವನ್ನ ಕಾಣಬಹುದಾಗಿದೆ. ಇಲ್ಲ ಅಂದ್ರೆ ಕಾಂಗ್ರೆಸ್ "ಉಪವಾಸದಿಂದ ಒಳ್ಳೇದು" ಕನಿಷ್ಠ ಹಣದುಬ್ಬರ ನಾದ್ರೂ ಇಳಿಯುತ್ತೆ ಅಂತ ಹೇಳಿದ್ರು ಹೇಳಬಹುದು. ಇಲ್ಲಾ, ರಾತ್ರೆ ಕಾರ್ಯಾಚರಣೆ ಮುಂದುವರೆಸುತ್ತೆ.


Tuesday, February 8, 2011

ಯಡ್ಡಿಯ ನವ ಸೂತ್ರಗಳು.


ಇಷ್ಟು ದಿನ ಬರೀ ಬ್ಲಾಕ್ ಮ್ಯಾಜಿಕ್ ಅಂತ ಹೇಳುತ್ತಾ ಇದ್ದ ನಮ್ಮ ಸನ್ಮಾನ್ಯ ಯೆಡ್ಡಿ ಅವರು, ಈಗ ತಮ್ಮ ಬಳಿ ಇರುವ ವೈಟ್ ಮನಿ ಬಗ್ಗೆ ಹೇಳಲು ಶುರು ಮಾಡಿದ್ದಾರೆ. ಒಟ್ಟಾರೆ ತಮ್ಮ ಜೀವನ ಬ್ಲಾಕ್ ಅಂಡ್ ವೈಟ್ ಅಂತ ಸಿಕ್ಕಾಪಟ್ಟೆ ಸಾಕ್ಷಾ ಕೊಟ್ಟು ಪ್ರಮಾಣಿಸಿದ್ದಾರೆ. ತಮ್ಮ ಉಸೀರು ಇರುವ ವರೆಗೂ ತಾವೇ ಮು ಮಂ ಅಂತ ಬೇರೆ ಹೇಳಿಕೊಳ್ಳುತ್ತಾ ಇದ್ದಾರೆ. ಅವರ ಅದೃಷ್ಟ ವಶಾತ್ ಅವರು ಮುಂದಿನ 5-10 ವರುಷಗಳ ಕಾಲ ಮು ಮಂ ಆಗಿ ಮುಂದುವರಿದರೆ ಕರ್ನಾಟಕ ಹೇಗೆ ಇರಬಹುದು, ಯಾವೆಲ್ಲಾ ನಿಯಮಗಳನ್ನು ಮಾಡಬಹುದು, ಏನೆಲ್ಲಾ ಬದಲಾವಣೆಗಳನ್ನು ತರ ಬಹುದು ಅಂತ ಟೈಮ್ ಪಾಸ್ ತಂಡದ ಏಕ ಸದಸ್ಯ ಪೀಠವು ದೀರ್ಘ ಸಮಾಲೋಚನೆ, ಚಿಂತನೆ ಹಾಗು ಚರ್ಚೆ! ಗಳನ್ನು ನಡೆಸಿ ಈ ಕೆಳಕಂಡ ವರದಿ ಸಿದ್ದ ಪಡಿಸಿದೆ.


1. ನಮ್ಮ ಮನೆಯ ಬಾಡಿಗೆ ಕರಾರು ಪತ್ರವನ್ನ ನೇರವಾಗಿ ಮು ಮಂ ಜೊತೆ ಮಾಡಿ ಕೊಳ್ಳಬೇಕು. (ಇಡೀ ಕರ್ನಾಟಕ ನೆ ತನ್ನ ಹೆಸರಿಗೆ ಬರಕೊಂಡು ಇರ್ತಾನೆ ಅಲ್ವ? )

2. ಕೃಷಿ ಚಟುವಟಿಕೆ ಗಳಿಗೆ ಭಾರಿ ಬೆಂಬಲ. ಮುಖ್ಯವಾಗಿ ನಿಂಬೆ ಹಣ್ಣು ಮಾತು ಕುಂಬಳ ಕಾಯಿ ಬೆಳಿಯೋರಿಗೆ ಬಹಳ ಉಪಯೋಗ. (ಮಾಟ ಮಾಡಕ್ಕೆ ಬೇಕಲ್ಲ.. )

3. ಮಾಟ ಮಾಡೋರಿಗೆ ಮುಜರಾಯಿ ಇಲಾಖೆ ಇಂದ ಮಾಶಾಸನ.

4. ನ್ಯಾಯಾಂಗ ವ್ಯವಸ್ತೆ ನ ತೆಗೆದು ಹಾಕಿ, ಅದರ ಬದಲಿಗೆ ಕಳ್ಳರ ಮೇಲೆ ವಾಮಾಚಾರ ಪ್ರಯೋಗ. :) ಪೋಲಿಸರನ್ನು ಕಳ್ಳರ ಕೂದಲು ಮತ್ತೆ ಉಗುರು ಹಿಡಿಯಲು ಉಪಯೋಗಿಸಿ ಕೊಳ್ಳಬಹುದು.

5. ಮಹಿಳೆಯರಿಗೆ ಸೀರೆ ಕೊಡ್ತಾ ಇದ್ರು, ಇನ್ನು ಮುಂದೆ ಚೂಡಿದಾರ ಕೂಡ ಕೊಡಬಹುದು.

6. ಮನೆ ಕಟ್ಟಿಸುವಾಗ ವಾಸ್ತು ತಜ್ಞರ ಪರಿಶೀಲನೆ ಕಡ್ಡಾಯ.

7. ವಿರೋದ ಪಕ್ಷ ಅನ್ನೋದೇ ಇರೋಲ್ಲ, ಎಲ್ಲರನ್ನು ಸಾಮೂಹಿಕ ಅಪರೇಷನ್ ಮಾಡಿ ಕಮಲಕ್ಕೆ ದಳ ದಳಗಳನ್ನು ಕೂಡಿಸಲಾಗುವುದು.

8. ಎಡ್ಡಿ ಅವರಿಗೆ ಗೊಳೋ ಅನ್ನುವು ಅತ್ಯಂತ ಪ್ರೀತಿಯ ಹವ್ಯಾಸ ಆಗಿರುವುದರಿಂದ, ಗೊಳೋ ಸಿನೆಮ ಗಳಿಗೆ ತೆರಿಗೆ ಕಡಿತ. (ಸಾಯಿ ಪ್ರಕಾಶ್ ತೆಗಿಯೋ ಸಿನಿಮಾ ತರದ್ದು ಮಾತ್ರ, ಮೈಲಾರಿ ಗೆ ಅಲ್ಲ. )

9. ಕಾಸರಗೋಡು ಮತ್ತೆ ಬೆಳಗಾವಿ ಸಮಸ್ಯೆ ಪರಿಹಾರ. ವಾಸ್ತು ಚೆನ್ನಾಗಿದ್ದರೆ ಮಾತ್ರ ಕರ್ನಾಟಕಕ್ಕೆ. ಚೆನ್ನಾಗಿಲ್ಲ ಅಂದ್ರೆ ಕೇರಳ ಮತ್ತೆ ಮಹಾರಾಷ್ಟ್ರ ದ ಜೊತೆ ಶಾಂತಿಯುತ ಒಪ್ಪಂದ. ಬೆಳಗಾವಿ ಅವರಿಗೆ ದಾನ.



ಸೂಚನೆ: ಈ ವರದಿ ಯನ್ನು ಯಾವುದೇ ಬಲಪಂಥೀಯ ಪಂಗಡಗಳ ಒತ್ತಡಗಳಿಗೆ ಮಣಿದು ಸಿದ್ದ ಪಡಿಸಿರುವುದಿಲ್ಲ. ಉಪೇಂದ್ರ ಅವರ ಸೂಪರ್ ಕಲ್ಪನೆ ಯನ್ನು ಕದ್ದು ಇಲ್ಲಿ ಹಾಕಿರುವುದಿಲ್ಲ. ಇಲ್ಲಿ ಒಂಬತ್ತೇ ಸೂತ್ರ ಗಳನ್ನು ಯಾಕೆ ಮಂಡಿಸಲಾಗಿದೆ ಅಂದರೆ ಅದು ಸನ್ಮಾನ್ಯರಿಗೆ ಶುಭ ಸೂಚಕ!!