Monday, December 27, 2010

ದೇವಿ ಮಹಾತ್ಮೆ



ನಾನೀಗ ಮೇಲ್ಗಡೆ ಲೋಕದಲ್ಲಿ ಅಲ್ಲೆಲ್ಲೋ ಇರುವ ದೇವತೆಗಳ ಬಗ್ಗೆ ಮಾತಾಡುತ್ತಿಲ್ಲ. ನಮ್ಮ ನಮ್ಮ ಗೃಹ ಗಳಲ್ಲೇ ಇರುವ, ಗೃಹ ಲಕ್ಷ್ಮಿ ಯಾ ಬಗ್ಗೆ ಹೇಳುವವನಿದ್ದೇನೆ.


ನನಗೆ ಇತ್ತೀಚಿಗೆ ಎಲ್ಲದರಲ್ಲೂ ಬೇಸರ ಮೂಡುತ್ತಿತ್ತು. ಅದು ಕೊನೆಗೆ ನಮ್ಮ ಮ್ಯಾನೇಜರ್ ಅರಿವಿಗೂ ಬಂತು. ಒಂದು ದಿನ ನಾನು ಕೆಲಸ ಎಲ್ಲಾ ಮುಗಿಸಿ, ಹಂಗೆ ಕಣ್ಣು ಮುಚ್ಚಿ ಧ್ಯಾನಸ್ತ, ಸಮಾಧಿ ಸ್ಥಿತೀಲಿ ಇರುವಾಗ ಮ್ಯಾನೇಜರ್ ಆಗಮನ ಆಯಿತು. ದೇವೇ ಗೌಡರ ಧ್ಯಾನಸ್ತ ಸ್ಥಿತಿ ಬಗ್ಗೆ ವಿ ಪಕ್ಷ ಗಳಿಗೆ ಹೊಟ್ಟೆ ಉರಿತಾ ಇದ್ದ ಹಾಗೆ ಇವನಿಗೂ ಕೂಡ ಉರಿತು. ಹೆಗಲು ಮುಟ್ಟಿ ಅಲ್ಲಾಡಿಸಿ, ಒಂದು ಅರ್ಥದಲ್ಲಿ ಬಡಿದೆಬ್ಬೆಸಿ ಕೇಳೋಕೆ ಶುರು ಹಚ್ಕೊಂಡ.

ಅಲ್ಲಪ್ಪಾ ಬಾಲು, ಮೊದಲೆಲ್ಲ ನೀನು ತುಂಬಾ ಚಟುವಟಿಕೆ ಇಂದ ಇರ್ತಾ ಇದ್ದೆ. ಯಾವಾಗಲು ಅವರಿವರ ಕಾಲು ಎಳಿತಾ, ಫೋನ್ ನಲ್ಲಿ ಪುಂಗಿ ಊದುತ್ತಾ, ನನ್ ಬಗ್ಗೆ ಕಾಮೆಂಟ್ ಮಾಡುತ್ತಾ (???) ಇದ್ದೆ, ಆದರೆ ಇತ್ತೀಚಿಗೆ ಯಾಕೆ ಒಳ್ಳೆ ಯಡ್ಡಿ ತರ ಗೋಳು ಮುಖ ಮಾಡಿಕೊಂದಿದ್ದಿ ಎಂದ.

ಯಾಕೋ ಗೊತ್ತಿಲ್ಲ ಸರ್, ಅದೇ ಕೆಲಸಗಳು, ಕಾರ್ ಗಳು, ಕ್ಯಾಬಿನ್ ಗಳು, ಕಾಲ್ ಗಳು.. ಲೈಫ್ ಊ ಇಷ್ಟೇನೆ ಅಂತ ಅನ್ನಿಸ್ತಾ ಇದೆ. ಅದೇ ಮನೆ, ಅದೇ ಹೆಂಡತಿ, ಅದೇ ಪಕ್ಕದ ಮನೆಯಾಕೆ ಎಲ್ಲ ಬೋರ್ ಹೊಡಿತ ಇದೆ ಅಂದೆ.

ನಿನ್ ಮದುವೆ ಆಗಿ ಒಂದು ವರ್ಷ ಆಯಿತಲ್ಲ?

ಹೌದು. ಎಂದೆ.

ಹಾಗಾದ್ರೆ ನಿಂಗೆ ಸಂಸಾರದಲ್ಲಿ ಸ್ವಲ್ಪ ಹೊಸತು ಬೇಕು, ಅವಾಗ ಜೀವನ ಸೂಪರ್ ಆಗಿ ಇರುತ್ತೆ, ನಾನು ಕೂಡ ಅದನ್ನೇ ಮಾಡ್ತಾ ಇರೋದು, ನೋಡು ಎಷ್ಟು ಜಾಲಿ ಆಗಿ ಇದೀನಿ ಅಂತ.

ನಂಗೆ ತಲೆ ಬುಡ ಅರ್ಥ ಆಗಿಲ್ಲ. ಸ್ವಲ್ಪ ಬಿಡಿಸಿ ಹೇಳಿ ಪುಣ್ಯ ಕಟ್ಕೊಳಿ ಅಂದೆ.

ಮೊದಲು ನೀನು ಆಫೀಸಿನ ಎಲ್ಲಾ ಹುಡುಗೀರ ಡಾಟಾ ಬೇಸ್ ಇಟ್ಕೊಂಡು ಇದ್ದೆ. ಅವರ ಜೊತೆ ಅಲೀತ ಗುಂಡ್ರು ಗೋವಿ ತರ ಇದ್ದೆ. (ಅವನು ಬೈತಾ ಇದ್ದಾನ, ಇಲ್ಲ ಹೊಗಳ್ತಾ ಇದ್ದಾನ ಅಂತ ನಂಗೆ ಡೌಟ್ ಬರ್ತಾ ಇತ್ತು. ) ಕಡೆಗೆ receptionist ರೀಟಾ ನೂ ನೀನು ಬಿಟ್ಟಿಲ್ಲ. ಅವಳ ಅಗಾದ ಫ್ಯಾನ್ ಗಳ ಲಿಸ್ಟ್ ನಲ್ಲಿ ನೀನು ಕೂಡ ಇದ್ದೆ. ಹೋಗ್ಲಿ ನೀನು ಈಗ ರೀಟಾ ಜೊತೆ ಸಿನಿಮಾ ಗೆ ಹೋಗಿ ಎಷ್ಟು ದಿನ ಆಯಿತು?

ಮದುವೆಗೂ ಮುನ್ನ ಸರ್, ಒಂದು ವರ್ಷ ಆಯಿತು.

ಸರಿ ಅವಳ ಜೊತೆ ಸ್ವಲ್ಪ ಸುತ್ತು, ಅವಳ ಬಾಯ್ ಫ್ರೆಂಡ್ ನಂಬರ್ ೩೮ ಕೈ ಕೊಟ್ಟು ೪ ದಿನ ಆಗಿದೆ, ಅವಳು ಕೂಡ ಮಂಕಾಗಿದ್ದಾಳೆ. ಇಬ್ರು ಒಂದು ಒಳ್ಳೆ ಸಿನಿಮಾ ನೋಡಿ.

ಆದ್ರೆ ಸರ್ ನಾನು ಮದುವೆ ಆದವ, ಹಾಗೆಲ್ಲ ಹೋಗೋದು ತಪ್ಪಲ್ಲವೇ? ಅಂದೆ

ಮೊದಲು ನನ್ ಮಾತು ಕೇಳು, ರೀಟಾ ಜೊತೆ ಸಿನಿಮಾ ನೋಡು. ಅವಳ ತುಂಡು ಲಂಗದ ಬಗ್ಗೆ ಹೆಂಡತಿ ಜೊತೆ ಚರ್ಚೆ ಮಾಡು. ಅವಾಗ ನೋಡು ನಿನ್ ಜೀವನ! ತುಂಬಾ ಫ್ರೆಶ್ ಆಗುತ್ತೆ.

ಅನುಭವಸ್ತರು ಹೇಳಿದ ಮೇಲೆ ನಂಬದೆ ಇರೋದು ಹೇಗೆ? ನಾನು ಕೂಡಲೆ ಸರಿ ಅಂದೆ. ರೀಟಾ ಗೆ ಕಾಲ್ ಮಾಡಿ ಮಾತಾಡಿದೆ. (ನಾನು ಅವಳ ೨೧ ನೆ ಬಾಯ್ ಫ್ರೆಂಡ್, ಆದ್ದರಿಂದ ಹಳೆ ಗಂಡನ ಪಾದವೇ ಗತಿ ಅಂತ ಅವಳಿಗೂ ಕುಶಿ ಆಯಿತೇನೋ)
ಮುಂದಿನ ಭಾನುವಾರವೇ, ಪಿ ವಿ ಅರ ನಲ್ಲಿ ಒಂದು ಸಿನಿಮಾ ನೋಡಿದೆವು, ಅವಳು ಬಟ್ಟೆ ಕೊಂಡಳು ನಾನು ದುಡ್ಡು ಕೊಟ್ಟೆ. (ಸರಿ ಸುಮಾರು ೪ ಸಾವಿರ ಹಜಾಮತಿ ಆಯಿತು ಬಿಡಿ. ಆದರೂ ಹೆಣ್ಣು ಮಕ್ಕಳು ಜೊತೆಗಿದ್ದಾಗ ದುಡ್ಡು ಕೊಡುವುದು ನಮ್ಮ ಜವಾಬ್ದಾರಿ ಅಲ್ಲವೇ?) ಅಂದು ಎಲ್ಲಾ ಮುಗಿಸಿ ಮನೆಗೆ ಬಂದು ಹೆಂಡತಿ ಗೆ ಎಲ್ಲ ವರದಿ ಒಪ್ಪಿಸ ತೊಡಗಿದೆ. ಒಳ್ಳೆ ಇಸ್ಟ್ ಮೆನ್ ಕಲರ್ ನಲ್ಲಿ ವರ್ಣಿಸಿದೆ, ಜೊತೆಗೆ ಡಿ ಟಿ ಎಸ್ ಎಫೆಕ್ಟ್ ಕೂಡ ಕೊಟ್ಟೆ. ನನ್ ಮ್ಯಾನೇಜರ್ ಮಾತು ನೂರಕ್ಕೆ ನೂರು ಸರಿ ಇತ್ತು. ಮಾರನೆ ದಿನ ದಿಂದ ನೋಡಿ, ಮನೆಯ ವಾತಾವರಣ ನೇ ಬದಲಾಯಿತು. ಲೈಫ್ ಊ ಒಂದು ವರ್ಷ ಹಿಂದೆ ಹೋಯಿತು. (ಗಮನಿಸಿ: ನಾನು ದಿನಾ ರೀಟಾ ವರ್ಣನೆ ಮಾಡೋದನ್ನ ಬಿಟ್ಟಿರಲಿಲ್ಲ). ದಿನಾ ಬೆಳಿಗ್ಗೆ ಉಪ್ಪಿಟ್ಟು ತಿನ್ನೋ ಕಾಟ ತಪ್ಪಿತು. ಮ್ಯಾಗಿ ಮನೆಗೆ ಬರುವುದು ನಿಂತಿತು. ನೀರು ದೋಸೆ, ಅಕ್ಕಿ ರೊಟ್ಟಿ ಮುಂತಾದುವು ಬೆಳಿಗ್ಗೆ ತಿಂಡಿ ಯಾಗ ತೊಡಗಿದವು. ಕಾ ಕಾ ಕಿ ಕಿ ಧಾರವಾಹಿ ಬಿಟ್ಟು ನನಗೆ ನ್ಯೂಸ್ ನೋಡುವ ಅವಕಾಶ ಸಿಕ್ಕಿತು. ಆಫೀಸ್ ನಿಂದ ಬೇಗ ಬಂದ್ರೆ ಒಂದು ಚಿಕ್ಕ ವಾಕ್, ಅವಳತ್ತೆ ಜೊತೆ ಒಂದು ಒಳ್ಳೆ ಟಾಕ್. ಲೈಫ್ ಊ ಒಂದು ರೀತಿ ನಂದನ ವನ ಆಯಿತು. (ರೀಟಾ ನೆನಪೇ ಮರೆತೇ ಬಿಡುವ ಹಾಗೆ ಆಗಿತ್ತು ) ನಿಜ ಹೇಳಬೇಕೆಂದರೆ ಮೊನ್ನೆ ಶನಿವಾರ ಕಾಫಿ ಡೇ ನಲ್ಲಿ ಒಳ್ಳೆ ಕೆಪೆಚಿನೋ ಕುಡಿದೆವು. ಗಂಡ ಹೆಂಡತಿ ಕಾಫಿ ಡೇ, ಬರಿಸ್ತಾಗೆ ಹೋಗಬಾರದು ಅಂತ ಇಲ್ಲವಲ್ಲ. !!

ಆದರೆ ನಿನ್ನೆ ಭಾನುವಾರ ನನ್ನಾಕೆಯನ್ನಾ ಗೋಳು ಹೊಯ್ದು ಕೊಳ್ಳುವ ಅಂತ ಅನ್ನಿಸಿತು. ರೀಟಾ ಮತ್ತೆ ಅವಳ ತುಂಡು ಲಂಗದ ಮೇಲೆ ವರ್ಣನೆ ಶುರು ಮಾಡಿದೆ. ಅಷ್ಟರಲ್ಲಿ ಅಡುಗೆ ಮನೇಲಿ ಏನೂ ಸುಟ್ಟ ವಾಸನೆ ಬರಲಿಕ್ಕೆ ಶುರು ವಾಯಿತು. ನಾನು ಅತ್ತ ಹೆಜ್ಜೆ ಹಾಕಿದೆ. ನನ್ನಾಕೆ ಥೇಟ್ ಒನಕೆ ಓಬವ್ವ ತರ ನಿಂತಿದ್ಲು. ಕೈಯಲ್ಲಿ ಆಯುಧ ಮಾತ್ರ ಲಟ್ಟಣಿಗೆ, ಓಲೆ ಮೇಲೆ ಕಾದ ಮಗುಚೋ ಕೈ ಬೇರೆ. ನಾನು ಪರಿಸ್ತಿತಿ ಅರ್ಥಮಾಡಿ ಕೊಳ್ಳುವುದರೋಳಗಾಗಿ ಯುದ್ದ ಘೋಷಣೆ ಆಗಿ ಬಿಟ್ಟಿತ್ತು.

ಇವತ್ತು ಬೆಳಿಗ್ಗೆ ಊದಿದ ಹಣೆ ಇಟ್ಟುಕೊಂಡು, ಕಂಡವರಿಗೆಲ್ಲ ಬಣ್ಣ ಬಣ್ಣದ ಕಥೆ ಹೇಳಿ ನನ್ ಕ್ಯಾಬಿನ್ ಗೆ ಬಂದು ಕೂತೆ. ಇಷ್ಟಕ್ಕೆಲ್ಲ ಕಾರಣ ನಾದ ನನ್ ಮ್ಯಾನೇಜರ್ ಹಲ್ಲು ಮುರಿಯುವ ಯೋಜನೆ ನು ಹಾಕಿಕೊಂಡೆ. ಅವನು ಸುಮಾರು ೪ ಗಂಟೆ ಲೇಟ್ ಆಗಿ ಬಂದ. ನನ್ನ ನೋಡಿ ಸಣ್ಣನೆ ನಕ್ಕ. ಅವನ ಹಣೆ ಲೂ ದೊಡ್ಡ ಗುಳ್ಳೆ ಇತ್ತು. ಇಬ್ಬರಿಗೂ ಸಾಕಷ್ಟು ಅರ್ಥ ಆಗಿತ್ತು. ಈಗ ನಂಗೆ ಅಕ್ಕ ಪಕ್ಕದ ಹುಡುಗಿಯರೆಲ್ಲ ಅಕ್ಕ ತಂಗಿ ತರ ಕಾಣುತ್ತಾ ಇದ್ದಾರೆ.


Wednesday, September 1, 2010

ಹೀಗೊಂದು ಅಸಂಗತ ಹರಟೆ


ಅಂತು ಇಂತೂ ನನ್ ಲೈಫ್ ಒಂದು ಮಟ್ಟಿಗೆ ಚಿತ್ರಾನ್ನ ಆಯಿತು!

ವಿಷ್ಯ ಏನಪ್ಪಾ ಅಂದ್ರೆ ಇತ್ತೀಚಿಗೆ ನಂಗೆ ನೆಮ್ಮದಿ ಹುಡುಕೋ ಚಟ ಜಾಸ್ತಿ ಆಗಿ ಬಿಟ್ಟಿತ್ತು. ಒಳ್ಳೆ ಹೆಂಡತಿ ಹುಡುಕೋ ಹಂಗೆ ಒಳ್ಳೆ ಮ್ಯಾನೇಜರ್ ನ ಹುಡುಕುತ್ತಾ ಹಲವಾರು ಕೆಲಸ ನ ಬದಲಿಸಿ ಬಿಟ್ಟೆ. ಈ ಪ್ರಯತ್ನದಲ್ಲಿ ಇರುವಾಗ ಕೆಲವು ದಿನಗಳ ಹಿಂದೆ ಒಂದು ದೊಡ್ಡ ಎಂ ಏನ್ ಸಿ ನಲ್ಲಿ ಯಾರೋ ಪಾಪ ಒಬ್ಬ ಪ್ರಾಜೆಕ್ಟ್ ಮ್ಯಾನೇಜರ್ ನನ್ ಮೂತಿ ಕೂಡ ನೋಡದೆ ಕೆಲಸ ಕೊಟ್ಟರು :) (ನೋಡಿದ್ರೆ ದೇವರಾಣೆ ಇಲ್ಲಿ ಕರೀತಾ ಇರಲಿಲ್ಲ ಅನ್ನೋದು ಘೋರ ಸತ್ಯ ಅಂತ ಗೊತ್ತು ಬಿಡಿ) ಇರೋ ೭ ಜನ ಟೀಂ ಗೆ ಮ್ಯಾನೇಜರ್ ರೇ ಇಲ್ಲ. ಎಂತ ಅದೃಷ್ಟ ಅಂತ ಕಣ್ಣು ಮುಚ್ಚಿ ಸೇರಿದೆ.

ಮೊದಲು ಎಂತ ಚಂದ ಇತ್ತು! ಒಳ್ಳೆ ಹನಿಮೂನ್ ಸಮಯ. ಆದರೇನು ಮಾಡೋದು? ಸುಖ ಅನ್ನೋದು ಯಾವಾಗಲು ಇರೋಕೆ ಅದೇನು ಜ್ಯೋತಿ ಬಸು ಗವರ್ನಮೆಂಟ? ಅದ್ಯಾರು ಲಿಂಬೆ ಹಣ್ಣಿನ ಮಾಟ ಮಾಡಿದರೋ ಏನೋ, ಇದ್ದಕ್ಕೆ ಇದ್ದಂತೆ ಒಬ್ಬ ಮ್ಯಾನೇಜರ್ ಬಂದು ಬಿಟ್ಟ. ಆಮೇಲೆ ಶುರು ಆಯಿತು ನೋಡಿ, ಹಿಡಿದು ಮುಟ್ಟಿದ್ದ ಕ್ಕೆಲ್ಲ ಪ್ರಶ್ನೆ, ಮೀಟಿಂಗು ಹಾಳು ಮೂಳು.. ಶುರು ಮಾಡಿದ. ಈ ಯಪ್ಪಂಗೆ ಅದೇನು presentation ಚಟ ಅಂದ್ರೆ ನಮ್ ಕ್ಯಾಬಿನ್ ಗೆ ಹೆಗ್ಗಣ ಬಂದಿದೆ ಅಂದರೂ, ಅದನ್ನು ಹೊಡೆದು ಕೊಲ್ಲಬೇಕು ಅಥವಾ ಬೋನ್ ನಲ್ಲಿ ಹಿಡಿದು ದೂರ ಬಿಡಬೇಕು ಅನ್ನುವ ಸರ್ವಕಾಲಿಕ ಸತ್ಯ ಕಂಡು ಹಿಡಿಲಿಕ್ಕೆ ಕನಿಷ್ಠ ೪-೫ ತಿಂಗಳು ಸಮಯ ಹಿಡಿಯುತ್ತೆ. ಯಾಕಪ್ಪ ಅಂದರೆ

1. ಮೊದಲು ಹೆಗ್ಗಣದ ಜೊತೆ ಒನ್ ಟು ಒನ್ ಮೀಟಿಂಗ್ ಮಾಡಬೇಕು

2. ಆಮೇಲೆ ನಮ್ಮಗಳ ಜೊತೆ ಒನ್ ಟು ಒನ್

3. ನಂತರ ನಮ್ಮೆಲ್ಲರ ಟೀಂ ಮೀಟಿಂಗ್

4. ಹೆಗ್ಗಣ ಕೊಲ್ಲೋದರ ಬಗ್ಗೆ ಒಂದು ಪವರ್ ಪಾಯಿಂಟ್ presentation ಕೊಡಬೇಕು

5. ಒಂದು ಎಂ ಎಸ ಎಕ್ಸೆಲ್ ನಲ್ಲಿ ಪಿವೋಟ್ ಟೇಬಲ್ ಹಾಕಿ, ಅಂಕಿ ಅಂಶ ದೊಂದಿಗೆ ವಿವರಣೆ ಕೊಡಬೇಕು

6. ಹೆಗ್ಗಣ ದಿಂದ ಎಷ್ಟೆಲ್ಲಾ ತೊಂದರೆ ಆಗ್ತಾ ಇದೆ ಅಂತ ೨-೩ ತಿಂಗಳು ಗಮನಿಸಬೇಕು

7. ಹೆಗ್ಗಣಗಳನ್ನು ಈಗಾಗಲೇ ಕೊಂದಿರುವವರನ್ನು ಕರೆಸಿ ನಮಗೆ ಒಂದೆರಡು ಗಂಟೆಗಳ ಪ್ರವಚನ ಕೊಡಿಸಬೇಕು.

8. ಇದೆಲ್ಲ ವನ್ನು ಮ್ಯಾನೇಜ್ಮೆಂಟ್ ಗೆ ತೋರಿಸಬೇಕು, ಯಾಕೆಂದರೆ ಎಲ್ಲವು "ಬಿಲ್ಲಬಲ್" ಸಮಸ್ಯೆ ಗಳು.

9. ಅವರವರ roles and responsibility ಗಳ ಬಗ್ಗೆ ವಿವರಣೆ ಕೊಡಬೇಕು. ಯಾರು ದೊಣ್ಣೆ ಹಿದುಕೋ ಬೇಕು, ಯಾರು ಬಾಲ ಹಿಡಿದು ಬಿಸಾಕಬೇಕು, ಯಾರು ಆಮೇಲೆ ನೆಲ ಸಾರಿಸಬೇಕು ಮುಂತಾದುವು.

10. ಇಷ್ಟೂ ಸಾಲದೆಂಬಂತೆ ನಾವುಗಳು ಅದೇನೋ ಕಿತ್ತೋದ work load tracker ಕೂಡ ಸಂಬಾಳಿಸಬೇಕು.


ಎಲ್ಲದಕ್ಕೂ ಒಂದು ಅಂತ್ಯ ಇರಬೇಕಲ್ಲ, ನಾವುಗಳು ಸರಿಯಾದ ಸಮಯದಲ್ಲಿ ಹೆಗ್ಗಣ ಕೊಲ್ಲದೆ ಇದ್ದಲ್ಲಿ ಹೆಗ್ಗಣದ ಜೊತೆ ಒಂದು review ಮೀಟಿಂಗ್! ನೀನು ಯಾಕೆ ಸಾಯಲಿಲ್ಲ ಮತ್ತೆ ನೀವುಗಳು ಯಾಕೆ ಸರಿಯಾಗಿ ಹೊಡೆದು ಸಾಯಿಸಲಿಲ್ಲ ಅಂತ.

ನಾನೇನು ನಮ್ಮ ಮ್ಯಾನೇಜರ ಬಗ್ಗೆ ದೂರುತ್ತಾ ಇಲ್ಲ. ಮ್ಯಾನೇಜರ್ ಅನ್ನುವವ ಇಲ್ಲ ಅಂದ್ರೆ ನನ್ನಂತ ಮಾನವ ಪ್ರಾಣಿಗಳು ಖಂಡಿತ ಕೆಲಸ ಮಾಡೋಲ್ಲ, ಅಲ್ಲಿ ಇಲ್ಲಿ ಪುಂಗಿ ಊದಿ, ಆಫೀಸ್ ಫೋನ್ ನ ನಂದೇ ಸ್ವಂತ ಅನ್ನೋ ತರ ಪೋಸ್ ಕೊಟ್ಟು, ಹೊಸದಾಗಿ ಬಂದಿರೋ ಕುಶವಂತ್ ಸಿಂಗ್ ಬುಕ್ ನ ಆಫೀಸ್ ನಲ್ಲೆ ಪ್ರಿಂಟ್ ತೆಗೆದು, ಇರೋ ಬಾರೋ ಸಿನಿಮಾ ನೆಲ್ಲ ಕದ್ದು ಡೌನ್ ಲೋಡ್ ಮಾಡಿ, ಆಮೇಲೆ ಕನ್ನಡ ಸಿನಿಮಾ ಚೆನ್ನಾಗಿರೊಲ್ಲ ಅಂತ ಒಂದಿಷ್ಟು ಗೊಣಗಾಡಿ ಇರುತ್ತಿದ್ದೆವು. ಮ್ಯಾನೇಜರನಿಲ್ಲದ ಕಚೇರಿ ಬೇಲಿಯಿಲ್ಲದ ಹೊಲ ಎ೦ಬ ಹೊಸ ಗಾದೆ ನನ್ನ ತಲೆಗೆ ಹೊಳೆಯುತ್ತಿದೆ. ನಮ್ಮ ಊರಕಡೆ ಗದ್ದೆಗಳಿಗೆ ಕಾಡುಪ್ರಾಣಿ ಬಾರದ೦ತೆ ಹಳೆ ಅ೦ಗಿ ತೊಡಿಸಿ, ಮಣ್ಣ ಮಡಿಕೆಗೆ ಮೀಸೆ ಬಳಿದ ನಿರ್ಜೀವ ಬೆರ್ಚಪ್ಪನ೦ತೆ ಇರಬೇಕು ನನ್ನ ಮ್ಯಾನೇಜರ್ ಅ೦ತ ನಾನೇನಾದರೂ ಬಯಸಿದರೆ ಅದು ಅತಿಶಯವಾದೀತೇನೋ ? ಎಲ್ಲರೊಳಗೊ೦ದಾಗಿ, ಎಲ್ಲರನ್ನು ಅರಿತು, ಎಲ್ಲರೊ೦ದಿಗೆ ಬೆರೆತು, ಗು೦ಡಪ್ಪ ನವರ ಎಲ್ಲರೊಳಗೊ೦ದಾಗು ಮ೦ಕುತಿಮ್ಮ ಎ೦ಬ೦ತಹ ಒಬ್ಬ ಮ್ಯಾನೇಜರ್ ನನಗೆ ಬೇಕು. ಸದ್ಯದಮಟ್ಟಿಗೆ ಅದನ್ನು ಬಯಸುವುದೂ, ಎಡಿಯೂರಪ್ಪನ ಮ೦ತ್ರಿಮ೦ಡಲ re-shuffle ಆಗೋದು ಎರಡೂ ಕಷ್ಟ ಅನ್ಸುತ್ತೆ .


ಹೋಗ್ಲಿ ಬಿಡಿ, ನಿಮಗೂ ಕೂಡ ನನ್ ತರಾನೆ ಒಬ್ಬ ಮ್ಯಾನೇಜರ್ ಇದ್ದಾನೆ ಅಂದ್ರೆ ನನಗಂತು ಒಂತರ ಕುಶಿ ಅಂತು ಆಗುತ್ತೆ. ಅಕಸ್ಮಾತ್ ಇಲ್ಲವ? ಅ ತರದ ಮ್ಯಾನೇಜರ್ ನಿಮಗೂ ಕೂಡ ಸಿಗಲಿ ಅಂತ ಅ ದಯಮನಾದ ಭಗವಂತನಲ್ಲಿ ಪ್ರಾರ್ತಿಸುವೆ.

Monday, June 28, 2010

ಪಾದರಕ್ಷೆ ಕದ್ದ ಪಾಪಿಯ ಹುಡುಕಾಟದಲ್ಲಿ


ಕಳ್ಳತನ ಎಲ್ಲಿ ಆಗೋಲ್ಲ ಸ್ವಾಮೀ? ನಮ್ಮ ಅರಿವಿಗೆ ಬಂದಂತೆಯೇ ಅಥವಾ ಬಾರದಂತೆ ಕಳ್ಳರು ದೋಚಿಕೊಂಡು ಹೋಗುವುದು ಹೊಸ ವಿಷಯ ಏನಲ್ಲ. ಒಬ್ಬರ ಆಸ್ತಿ ಪಾಸ್ತಿ ದರೋಡೆ ಆದರೆ, ಮಗದೊಬ್ಬರ ಮೂತ್ರ ಪಿಂಡ ವೆ ಮಾಯಾ! ಇನ್ನು ಕೆಲವರದ್ದು ಹೃದಯ ಕಳ್ಳತನ ಆಗುವುದು ಇದೆ ಆದರೆ ಅದು ಬೇರೆ ವಿಷಯ ಬಿಡಿ. ಕಳ್ಳತನ ಆದಾಗ ನಮ್ಮ ಆಸ್ತಿ ಹೋಯಿತಲ್ಲ ಅನ್ನುವುದಕಿಂತ, ನಮ್ಮ ಕ್ಷೇತ್ರದಲ್ಲಿ ಅನಾಮಿಕ ನೊಬ್ಬ ನಮ್ಮ ಅರಿವಿಗೆ ಬಾರದಂತೆ ಬಂದ ಅನ್ನುವುದೇ ಮನಸ್ಸಿಗೆ ಬೇಸರ ಹಾಗು ಕಳವಳ ಉಂಟು ಮಾಡುವ ಸಂಗತಿ. ಈ ವಿಷಯ ಯಾಕೆ ಬಂತು ಅಂದ್ರೆ ಮೊನ್ನೆ ನಮ್ಮ ಮನೆಯಲ್ಲಿ ಕಳ್ಳತನ ಆಯಿತು.

ಅಂದು ಮುಂಜ್ಹಾನೆ 3 ಗಂಟೆಗೆ ನಾನು ಪ್ರಕೃತಿ ಕರೆಗೆ ಒಗೊಡಲು ಎದ್ದಾಗ ರೂಮು ಸರಿಯಾಗೇ ಇತ್ತು. ನಮ್ಮ ಮನೆ ಇರುವುದು ಮೊದಲ ಮಹಡಿಯಲ್ಲಿ. ಕೆಳ ಅಂತಸ್ತಿನಲ್ಲಿ ದೊಡ್ಡ ಗೇಟ್ ಇರುವುದರಿಂದ ಅಪರಿಚಿತರು ಒಳಗೆ ನುಗ್ಗುವುದು ಸಾದ್ಯವೇ ಇಲ್ಲ. ಗೇಟ್ ಬಾಗಿಲು ತೆರೆಯುವುದು ಮೇಲಿನ ಮನೆ "ಶೇಟು" ಹಾಲು ತರಲು 6 ಗಂಟೆಗೆ ಮಕ್ಕಳನ್ನು ಹೊರಗೆ ಅಟ್ಟಿ ದಾಗಲೇ. ಅದಕ್ಕೂ ಮೊದಲು ಗೃಹ ಪ್ರವೇಶ ಮಾಡಬೇಕು ಅಂದರೆ ಕಳ್ಳ ಸ್ಪೈಡರ್ ಮ್ಯಾನ್ ಆಗಿರಬೇಕು. ಅದು ಸಾದ್ಯವಿಲ್ಲ ವಾದ್ದರಿಂದ ಕಳ್ಳ ಬಂದಿದ್ದು ಬೆಳಗಿನ ಮುಂಚೆ, ಅದೂ ಅಕ್ಕ ಪಕ್ಕದವರು ಎದ್ದ ನಂತರ, 6 ಗಂಟೆಯ ಮೇಲೆ! ಭಾನುವಾರ ನಾವು ಸಂಪೂರ್ಣ ಸೂರ್ಯ ವಂಶಸ್ತರಾಗಿರುವುದರಿಂದ ಕಳ್ಳತನ ನನ್ನ ಕಣ್ಣಿಗೆ ಬಿದ್ದಿದ್ದು ಸುಮಾರು 10 ಗಂಟೆ ಗೆ!. ಎದ್ದು ಮಂಪರು ಗಣ್ನಲ್ಲಿ ಹೊರ ಬರುತ್ತಲೇ ಎದೆ ದಸಕ್ ಎಂದಿತು, ಬಾಗಿಲ ಪಕ್ಕ ಹೊರಗೆ ಇಟ್ಟಿದ್ದ ನನ್ನ ಅಚ್ಚು ಮೆಚ್ಚಿನ, ಪ್ರೀತಿ ಪಾತ್ರದ ಶೂ ನಾಪತ್ತೆ ಆಗಿತ್ತು.

ಶೂ ನ ಮನೆ ಒಳಗೆ ಇಟ್ಟುಕೊಬೆಕಾಗಿತ್ತು ಅಂತ ನೀವು ಹೇಳಬಹುದು, ಆದರೆ ನಂಗೆ ನನ್ನ ಕಾಲು ಚೀಲ ಗಳ ಬಗ್ಗೆ ವಿಪರೀತ ಪ್ರೇಮ, ಅದನ್ನ ಒಗೆದರೆ ಅದರ ಬಣ್ಣ ಎಲ್ಲಿ ಹೋಗುವುದೋ ಎನ್ನುವ ಭಯದಲ್ಲಿ ಅದಕ್ಕೆ ನೀರೆ ತಾಗಿಸೋಲ್ಲ. ಶೂ ನ ಒಳಗೆ ಇಟ್ಟರೆ ಅದರ ಸುವಾಸನೆಗೆ ನಿದ್ದೆ ಬರುವುದಿಲ್ಲವಾದ್ದರಿಂದ ಹೊರಗೆ ಇಟ್ಟಿರಬೇಕಾಗಿತ್ತು. ಆ ಶೂ ನನ್ನ ಜೀವನದ ಒಂದು ಭಾಗ ಆಗಿತ್ತು. ಸುಮಾರು ಹನ್ನೆರಡು ನೂರು ರೂ ಕೊಟ್ಟು ಕಳೆದ ವರ್ಷ 2 ವರ್ಷದ ಹಿಂದೆ ಕೊಂಡಿದ್ದೆ. ಮಳೆಯಲ್ಲಿ, ಬಿಸಿಲಲ್ಲಿ, ಕೆಸರು, ದೂಳಲ್ಲಿ ನನ್ನ ಸಂಗಾತಿ ಯಾಗಿತ್ತು. ಅವಾಗ ಅವಾಗ ಅದನ್ನ ತೊಳೆಯದೆ ಇದ್ದರೂ, ಯಾವಾಗಲು ಸುವಾಸನೆ ಪೂರಿತ ಕಾಲು ಚೀಲ ಹಾಕಿದರು ಒಮ್ಮೆಯೂ ಅದು ನನ್ನ ಮೇಲೆ ಕೊಪಿಸ್ಕೊಂಡಿದ್ದು ಇಲ್ಲ.

ಊರಿಗೆ ಕೂಡ ಅದನ್ನೇ ನಾನು ಹಾಕಿಕೊಂಡು ಹೋಗುತ್ತಾ ಇದ್ದಿದ್ದು. ನಮ್ಮ ಮನೆಲ್ಲಿ ಅದನ್ನ ಅಸ್ಪೃಶ್ಯ ಜೀವಿ ತರ ನೋಡುತ್ತಾ ಇದ್ದರು, ಅಪ್ಪ ಅದನ್ನ ದೊಡ್ಡದೊಂದು ದೋಟಿಯಲ್ಲಿ ಅದನ್ನ ಎತ್ತಿ ಬೇಲಿ ಪಕ್ಕದಲ್ಲಿ ಇಟ್ಟು ಬರುತ್ತಾ ಇದ್ದರು. ಆದರೆ ನಮ್ಮ ಮನೆಯ ಬೆಕ್ಕು ಮತ್ತೆ ಪಕ್ಕದ ಮನೆಯ ನಾಯಿಗಳು ನನ್ನ ಶೂ ಗೆ ಸಾಕಷ್ಟು ಮಾರ್ಯಾದೆ ಕೊಡುತ್ತಾ ಇದ್ದವು. ಮನೆ ಹೊರಗೆ ಇಟ್ಟ ಯಾವುದೇ ಚಪ್ಪಲಿ ಯನ್ನು ಅವು ಕಿತ್ತು ಇದ್ದ ಅವುಗಳು, ನನ್ನ ಶೂ ನ ಮಾತ್ರ ಮೂಸಿಯೂ ನೋಡುತ್ತಾ ಇರಲಿಲ್ಲ. ( ಆ ಗಬ್ಬು ವಾಸನೆಗೆ ಅವೆಲ್ಲಿ ಬರ್ತಾವೆ ಅಂತ ಅಮ್ಮ ಬೈತಾ ಇರ್ತಾಳೆ. )

ಇಂತಿಪ್ಪ ನನ್ನ ಶೂ ನ ಒಬ್ಬ ಕಳ್ಳ ಕದ್ದಿದ್ದಾನೆ, ಅವನು ಕದ್ದ ಅಂತ ನನಗೇನು ಬೇಜಾರಿಲ್ಲ. ಆದರೆ ಕದಿಯೋಕಿಂತ ಮುಂಚೆ ಅಲ್ಲೇ ಬಾಗಿಲ ಪಕ್ಕ ಇಟ್ಟಿದ್ದ ಕಸದ ಬುಟ್ಟಿಗೆ ಕಾಲುಚೀಲವನ್ನ ಬಿಸಾಕಿ, ತನ್ನ ಚಪ್ಪಲಿಯನ್ನು ಅಲ್ಲೇ ಇಟ್ಟು, ಶೂ ಅನ್ನು ಮಾತ್ರ ಹಾಕಿಕೊಂಡು ಹೋಗಿದ್ದಾನೆ.!! ನನ್ನ ಪ್ರೀತಿ ಪಾತ್ರ ದ ಕಾಲು ಚೀಲಕ್ಕೆ ಕಸದ ಬುಟ್ಟಿಯ ದಾರಿ ತೋರಿದ ಅ ಕಳ್ಳನನ್ನು ನಾನು ಕಂಡಿತ ಕ್ಷಮಿಸಲಾರೆ. ನಿಮಗೆಲ್ಲಾದರು ಸ್ವಲ್ಪ ಕೆಂಪು ಬಣ್ಣದ ಖಾಲಿ ಶೂ (ನಾನು ಕೊಳ್ಳುವಾಗ ಅದು ಬಿಳಿ ಬಣ್ಣದ್ದು ಇತ್ತೆಂದು ನೆನಪು ) ದರಿಸಿರುವ ವ್ಯಕ್ತಿ ಕಂಡು ಬಂದಲ್ಲಿ ನನಗೆ ಕಂಡಿತಾ ತಿಳಿಸಿದರೆ ನಿಮಗೆ ಪುಣ್ಯ ಬರುವ ಸಾಧ್ಯತೆಗಳು ಇದೆ.

ಹಂಗೆ ಸುಮ್ನೆ: ನಾನು ಇತ್ತೀಚಿನ ಕೆಲವು ದಿನಗಳಿಂದ ಕಚೇರಿ ಕೆಲಸದಲ್ಲಿ ಮಗ್ನ ನಾಗಿರಬೇಕೆಂದು ಹಲವು ಸ್ನೇಹಿತರು ತಪ್ಪು ತಿಳಿದಿರುತ್ತಾರೆ, ಆದರೆ ನಾನು ಉತ್ತರ ಭಾರತದ (ಚೀನಾ, ನೇಪಾಳ ಕೂಡ) ಹಲವು ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗಿದ್ದೆ. ಹಾಗೆಯೇ ನಾನು ರಾಜಕಾರಿಣಿ ಒಬ್ಬರ ಜೊತೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿರುವುದಿಲ್ಲ, ಮಾನಸ ಸರೋವರ ದಲ್ಲಿ ನಾನು ಕೂಡ ಒಂಟಿ ಕಾಲಲ್ಲಿ ನಿಂತು ಲಬೋ ಲಬೋ ಅಂತ ಬಡಕೊಂಡು ಫೋಟೋ ಗಳಿಗೆ ಪೋಸು ಕೊಟ್ಟಿದ್ದರೂ ಕೂಡ ಆ ಸಮಯದಲ್ಲಿ ಅಲ್ಲಿ ನಾನೊಬ್ಬನೇ ಇದ್ದೆ. ಅಷ್ಟೂ ಸಾಲದೆಂಬಂತೆ ನಾನೇ ಸ್ವಂತ ದುಡ್ಡಿನಲ್ಲಿ ಟಿಕೆಟ್ ಕೊಂಡಿದ್ದು, ಅದಕ್ಕಾಗಿ ಯಾವ ನೆರೆ ಹಣವನ್ನು ಉಪಯೋಗಿಸಿರುವುದಿಲ್ಲ.

Saturday, March 13, 2010

ನಿದ್ದೆ ಬಾರದ ರಾತ್ರಿಗಳು


ನೀವು ಏನೇ ಹೇಳಿ, ನಂಗೆ ರಾತ್ರೆ ಭರಪೂರ ನಿದ್ರೆ ಮಾಡೋರನ್ನ ಕಂಡ್ರೆ ವಿಪರೀತ ಹೊಟ್ಟೆ ಉರಿಯುತ್ತೆ, ಅದರಲ್ಲೂ ಮಲಗಿದ ಕೂಡಲೇ ಗೊರಕೆ ಹೊಡಿಲಿಕ್ಕೆ ಶುರು ಮಾಡ್ತಾರಲ್ಲ ಅವರನ್ನು ಕಂಡ್ರೆ ಹೊಟ್ಟೆಲಿ ಜೀರಿಗೆ ಮೆಣಸು ಕುಟ್ಟಿದ ಹಾಗೆ ಅನ್ಸುತ್ತೆ. ಇದಕ್ಕೆ ಕಾರಣ ಇಷ್ಟೇ, ನಂಗೆ ಇತ್ತೀಚಿಗೆ ನಿದ್ದೆ ಕಡಿಮೆ ಆಗಿದೆ, ಮಧ್ಯರಾತ್ರೆ ಏನಾದ್ರು ಎಚ್ಚರ ಆದ್ರೆ ನನ್ನ ಕಷ್ಟ ಯಾರಿಗೂ ಬೇಡ.


ನನ್ನ ಸಮಸ್ಯೆಗೆ ಅಮ್ಮ ಪರಿಹಾರ ಸೂಚಿಸಿದಳು, ತಲೆಗೆ ಚೆನ್ನಾಗಿ ಎಣ್ಣೆ ಹಾಕಿಕೋ, ಹರಳೆಣ್ಣೆ ಬಿಸಿ ಮಾಡಿ ತಲೆಗೆ ಹೊಯ್ಕೋ, ನೆಲ್ಲಿ - ಕೊಬ್ಬರಿ ಎಣ್ಣೆ ಊರಿಂದ ಕಳಿಸಿ ಉಪಯೋಗಿಸು ಅಂತೆಲ್ಲಾ ಸಲಹೆ ಬಂತು, ನಾನು ಕೂಡ ಪ್ರಾಮಾಣಿಕವಾಗಿ ಪ್ರಯೋಗಿಸಿದೆ, ನಿದ್ದೆ ಬರಲಿಲ್ಲ, ಅದರ ಬದಲಿಗೆ ಮನೆಯ ಗೋಡೆಗಳೆಲ್ಲ ಎಣ್ಣೆ ಕಲೆ ಆಯಿತು ಅಷ್ಟೇ. ಅದೂ ಸಾಲದು ಎಂಬಂತೆ, ಒಮ್ಮೆ ರಾತ್ರೆ ತಲೆಯ ಮೇಲೆ ಇರುವೆಗಳು ಧಾಳಿ ಮಾಡಬೇಕೆ?


ಈ ಹಾಳು ನಿದ್ರೆ ಬೇಡದ ಸಮಯದಲ್ಲಿ ಚೆನ್ನಾಗಿ ಬರುತ್ತದೆ! ಮ್ಯಾನೇಜರ್ ಜೊತೆ ಮೀಟಿಂಗ್ ನಲ್ಲಿ ಇದ್ರೆ ಪೂರ ಆಕಳಿಕೆ ಹಾಗು ತೂಕಡಿಕೆ, ಒಂದು ಮಾತು ಕೂಡ ಮೆದುಳು ತಲುಪೋಲ್ಲ, ಅದೇ ರಾತ್ರೆ ಹಾಸಿಗೇಲಿ ಉರುಳಾಡಿದರು ನಿದ್ರೆಯ ಸುಳಿವಿರೋಲ್ಲ. ಮ್ಯಾನೇಜರ್ ಮಾತಿಗೂ ನಿದ್ರೆಗೂ ಸಂಬಂದವೆನಾದ್ರು ಇರಬಹುದೇ ಅಂತ ಅಂದುಕೊಂಡು ಮೊನ್ನೆ ಸೋಮವಾರ ಮೊಬೈಲ್ ನಲ್ಲಿ ಅವರ ಎಲ್ಲಾ ಮಾತನ್ನು ರೆಕಾರ್ಡ್ ಮಾಡಿಬಿಟ್ಟೆ, ಮನೆಗೆ ಬಂದು ಹಾಕಿ ಕುಳಿತೆ. ಚೆನ್ನಾಗಿ ಎಚ್ಚರ ಇದ್ದಿದ್ದಕ್ಕೋ ಏನೋ ಅವರ ಮಾತಿಗೆ ತರೇವಾರಿ ಅರ್ಥ ಹೊಳೆಯ ತೊಡಗಿದವು. ಪೆರ್ಫಾರ್ಮನ್ಸ್ ಇಲ್ಲದವರನ್ನು ಓಡಿಸಿಬಿಡುವೆ ಎಂದು ಗರ್ಜಿಸಿದ್ದು ಕೇಳಿ ತೀರ ಗಲಿಬಿಲಿ ಆಯಿತು. ಕೇಳಬಾರದ ಹೊತ್ತಲ್ಲಿ ಕೇಳಬಾರದನ್ನು ಕೇಳಿದ್ದಕ್ಕೆ ಮುಂದಿನ ೪ ದಿನ ನಿದ್ರೆ ಖತಂ.



ಕೊನೆಗೆ ನನ್ನ ಆಪ್ತ ಮಿತ್ರ ವರುಣ ನ ಸಹಾಯ ಕೇಳೋಣ ಅಂತ ತೀರ್ಮಾನಿಸಿದೆ. (ಮೂರು ಗೊತ್ತು ನಿದ್ದೆ ಮಾಡುವ ಅವನು ಆಪ್ತ ಶತ್ರು ಕೂಡ ಹೌದು) ಒಮ್ಮೆ ನಿದ್ದೆ ಮಾದುತ್ತಿದ್ದವನನ್ನ ಬಡಿದೆಬ್ಬಿಸಿ "ನಿನ್ನ ಗಾಢ ನಿದ್ದೆಗೆ ಕಾರಣವೇನು? ನವರತ್ನ ತೈಲವೇ ಎಂದು ಕೇಳಿದೆ?"

ಅದಕ್ಕವನು ಹಾಗೇನು ಇಲ್ಲ, ನಂಗು ಮೊದಲು ನಿನ್ ತರಾನೆ ನಿದ್ದೆ ಬರುತ್ತಾ ಇರಲಿಲ್ಲ, ಆಮೇಲೆ ಸ್ವಲ್ಪ ಲೋಜಿಕಲ್ ಆಗಿ ಚಿಂತಿಸಿ ಪರಿಹಾರ ಕಂಡು ಕೊಂಡೆ ಎಂದ.

ನಾನೂ ಅ ಪರಿಹಾರ ಮಾರ್ಗವನ್ನು ನನಗೂ ಭೋದಿಸಿ ಕೃತಾರ್ಥನಾಗು ಎಂದು ಬೇಡಿದೆ.

ಆಗ ಅವನು ಉಪದೇಶಾಮೃತ ಶುರು ಮಾಡಿದ. " ನೋಡು ಕಲಿಯುಗದ ನಿದ್ರೆಯ ಅಧಿದೇವತೆ ಯಾರು? ನಮ್ಮ ಮಾಜಿ ಪ್ರಧಾನಿಗಳು ಅಲ್ಲವೇ? ಅವರಿಗೆ ಎಲ್ಲರು ಬಾಯಿಗೆ ಬಂದಂತೆ ಬೈಯುತ್ತಾ ಇದ್ದರು, ನಾನು ಕೂಡ ದ್ವೇಷಿಸ್ತಾ ಇದ್ದೆ. ಆದ್ರೆ ಮಂತ್ರ ತಂತ್ರ ಪ್ರಚಂಡ ಮಾಜಿ ಪ್ರಧಾನಿಗಳು ತಮ್ಮ ಸುಖ ನಿದ್ದೆಯ ಮೇಲೆ ಕಣ್ಣು ಹಾಕಿರುವರಿಗೆ ನಿದ್ರಾ ಹೀನತೆ ಆಗಲೆಂದು ಕೇರಳದ ಮಾಂತ್ರಿಕರಲ್ಲಿ, ಕೊಪ್ಪ ದ ಬಾಲಗೋಪಾಲ ಜೋಯಿಸರಲ್ಲಿ ಮಾಟ ಮಾಡಿಸಿದ್ದಾರೆ ಅಂತ ಒಮ್ಮೆ ತಿಳಿಯಿತು, ಕೂಡಲೇ ಅವರ ಪಕ್ಷಕ್ಕೆ ಜೈ ಹೇಳಿದೆ, ಆಮೇಲಿ೦ದ ಕಣ್ಣು ಮುಚ್ಸಿದಾಗೆಲ್ಲ ನಿದ್ದೆ!!

ನಂಗು ಕೂಡ ಹೌದಲ್ವ ಅಂತ ಅನ್ನಿಸಿತು. ಕೂಡಲೇ ಅವರ ಪಕ್ಷಕ್ಕೆ ಒಂದಿಷ್ಟು ಘೋಷಣೆ ಕೂಗಿ ಮಲಗಿದೆ. ಏನು ಆಶ್ಚರ್ಯ ಅಂತಿರಿ, ಒಮ್ಮೆಲೇ ಗಾಢ ನಿದ್ದೆ ಆವರಿಸಿತು. ನಿದ್ರೆ ಬಂತು ಆದ್ರೆ ಸಮಸ್ಯೆ ಪರಿಹಾರ ಆಗಿಲ್ಲ, ಯಾಕೆ ಅಂತಿರ? ಗಾಢ ನಿದ್ರೆ ಲಿ ಬರಿ ರಾಧಿಕೆ ಕನಸು ಬೀಳೋಕೆ ಶುರು ಆಯಿತು! ಕೂಡಲೇ ಅವರ ಪಕ್ಷ ಬಿಟ್ಟೆ, ಹಾಗೆ ಇದ್ದಿದ್ರೆ ನಾನು ಮತ್ತೊಬ್ಬ ನಿತ್ಯಾನಂದ ಆಗ್ತಾ ಇದ್ದೇನೋ ಏನೋ..


ಇಂತಿಪ್ಪ ನನಗೆ ಸಹಾಯಕ್ಕೆ ಬಂದವರು ಹಿತೈಷಿಗಳಾದ ಶ್ರೀಯುತ ಪರಾ೦ಜಪೆ ಅವರು. ಮಲಗುವ ಮುನ್ನ ಓದಬೇಕು, ೪-೮ ಪುಟಗಳಷ್ಟು ಅಧ್ಯಯನ ಮಾಡಿದರೆ ಮನಸ್ಸು ಉಲ್ಲಸಿತಗೊಂದು ಅಧ್ಬುತ ನಿದ್ರೆ ಬರುವುದು ಎಂದು ಹೇಳಿದರು, ಹಿಂದೆ ಕಾಲೇಜಿನಲ್ಲಿ ಓದುತ್ತಾ ಇರಬೇಕಾದರೆ ಪುಸ್ತಕ ಕಂಡೊಡನೆ ನಿದ್ದೆ ಬರುತ್ತಿದ್ದರಿಂದ ನನಗು ಅವರ ಮಾತು ವೇದ ವಾಕ್ಯ ದಂತೆ ತೋರಿತು. ಅಂದೇ ಸಪ್ನಾ ಗೆ ನುಗ್ಗಿ ಚಿತ್ತಾಲರ ಮತ್ತೆ ಕಾರ್ನಾಡರ ಕಾದಂಬರಿ ಗಳನ್ನು ತಂದೂ ಬಿಟ್ಟೆ. ಹಾಸಿಗೆಯಲ್ಲಿ ಪವಡಿಸಿಕೊಂಡು ಭಾರತಿಪುರ ಓದಲು ಶುರು ಮಾಡಿದೆ. ಅದೊಂದು ಅಧ್ಬುತ ಕಾದಂಬರಿ, ಸಮಯ ಹೋದದ್ದು, ಪುಟಗಳು ತಿರುವಿದ್ದು ಗೊತ್ತೇ ಆಗಲಿಲ್ಲ, ಕೊನೆಗೆ ಪೇಜ್ ಬಂದಾಗ ಸಮಯ ನೋಡಿದರೆ ಬೆಳಗಿನ ಜಾವ ೫ ಗಂಟೆ! ನಂತರ ಆಫೀಸ್ ನಲ್ಲಿ ಪೂರ ಅಮಲು ಗಣ್ಣು. ಆಗಲೇ ಅನ್ನಿಸಿದ್ದು ಪರಾ೦ಜಪೆ ಅವರಿಗೆ ನನ್ನ ಮೇಲೆ ದ್ವೇಷ ಏನಾದ್ರೂ ಇದೆಯೇ? ನಾನು ಆಫೀಸ್ ನಲ್ಲಿ ನಿದ್ದೆ ಮಾಡಿ ಕೆಲಸ ಕಳೆದು ಕೊಳ್ಳಬೇಕು ಅಂತ ಏನಾದ್ರು ಉಪಾಯ ಮಾಡಿದ್ದರೋ ಅನ್ನುವ ಗುಮಾನಿಯೂ ಕಾಡಿತು. ಒಳ್ಳೆಯ ಕಾದಂಬರಿ ಓದುತ್ತಾ ಇದ್ದರೆ ಯಾರಿಗೆ ತಾನೇ ನಿದ್ದೆ ಬರುತ್ತೆ? ನಿದ್ದೆ ಬರೋಕೆ ಅದರಲ್ಲೇನು ಸೈನ್ ತೀಠ, ಕಾಸ್ ತೀಠ ಅಥವಾ ಫಿಸಿಕ್ಸ್ ನಿಯಮಗಳು ಯಾವುದು ಇರುವುದಿಲ್ಲವಲ್ಲ. ಆದರೆ ಏನು ಮಾಡುವುದು ಇದನ್ನು ಅವರಿಗೆ ಹೇಳಲಾಗುತ್ತದ?



ಅದಕ್ಕೆ ತೀರ್ಮನಿಸಿಯೇ ಬಿಟ್ಟೆ ನಾನೇ ಒಂದು ಕಾದಂಬರಿ ಬರೆದು ಬಿಡುವುದು ಅಂತ! ಅದನ್ನು ಓದ ತೊಡಗಿದರೆ ಎಂತಾ ಕಮಂಗಿ ಗು ಕೂಡ ನಿದ್ದೆ ಬರಬೇಕು, ಕುಂಬ ಕರ್ಣನ ಹಾಗೆ ನಿದ್ದೆ ಹೊಡಿಬೇಕು, ಅದು ಬಾಸ್ ನ ಮಾತಿಗಿಂತಲೂ ವಿಪರೀತ ಬೋರು ಇರಬೇಕು, ಅದೇ ಹೆಂಡತಿ / ಗಂಡ ನ ಮುಖ ನೋಡಿದಷ್ಟು ಬೇಜಾರಾಗಿ, ಬೋರಲು ಬಿದ್ದು ನಿದ್ದೆ ಮಾಡುವ ಹಾಗೆ ಇರಬೇಕೆಂದು ತೀರ್ಮಾನಿಸಿದೆ.


ನಿದ್ದೆ ಬಾರದ ರಾತ್ರೆಗಳಲ್ಲಿ ಬರೆಯಲು ಶುರು ಕೂಡ ಮಾಡಿದೆ, ಹಲವು ದಿನಗಳ ಪರಿಶ್ರಮ ದ ನಂತರ ಹಸ್ತ ಪ್ರತಿ ಸಿದ್ದವಾಯಿತು. ನನ್ನ ಹೊಸ ಸಾಹಸದ ಬಗ್ಗೆ ಸ್ನೇಹಿತರು ಬಹಳ ಮೆಚ್ಚುಗೆ ವ್ಯಕ್ತ ಪಡಿಸಿದರು. (ಅವರಾರು ಇನ್ನು ಓದಿಲ್ಲ, ಆದ್ರೆ ಅದು ಬೇರೆ ವಿಷ್ಯ ಬಿಡಿ) ಸುದ್ದಿ ತಿಳಿದ ಕೆಲವು ಡಾಕ್ಟರಗಳು ಇದೊಂದು ಅಧ್ಬುತ ಸಂಶೋದನೆ ಅಂತ ಹೇಳಿದರು. ಅದನ್ನು ಮುದ್ರಿಸಿ ಭಾರಿ ಲಾಭ ಮಾಡುವುದರ ಜೊತೆ ಜನೋಪಯೋಗಿ ಕೆಲಸ ವಾಗುವುದೆಂದು ಹೇಳಿದರು.


ಸರಿ ಇಷ್ಟೆಲ್ಲಾ ಹೇಳ್ತಾ ಇದ್ದೀಯ ಪುಸ್ತಕ ಯಾವಾಗ ಅಂತ ಕೇಳಿದ್ರ, ಅದೇ ಆಗಿರೋದು ಸ್ವಾಮೀ ಸಮಸ್ಯೆ ಓದಲು ಹಸ್ತ ಪ್ರತಿ ತೆಗೆದು ಕೊಂದು ಹೋದ ಒಬ್ಬ ಮುದ್ರಕ ೪ ಪುಟ ಓದಿ ಮಲಗಿದವ ಇನ್ನು ಎದ್ದಿಲ್ಲ!!


Wednesday, January 13, 2010

ಪ್ರೇಮಪತ್ರಕ್ಕೂ ರೇಶನ್ (Recession)





ಸದ್ಯದ ಮಟ್ಟಿಗೆ ದೇವರು ಇದ್ದನೋ ಇಲ್ಲವೋ ಖಂಡಿತಾ ಗೊತ್ತಿಲ್ಲ, ಆದರೆ ದೆವ್ವಗಳು, ರಾಕ್ಷಸರು ಮುಂತಾದವು ಇದ್ದಾವೆ ಅನ್ನೋದಕ್ಕೆ ನಂಗಂತೂ ಸಾಕಷ್ಟು ಪುರಾವೆ ಸಿಕ್ಕಿದೆ. ಅಂದ ಹಾಗೆ ತಪ್ಪು ತಿಳಿಬೇಡಿ ನಾನು ರೇಣುಕಾಚಾರ್ಯನ ಬಗ್ಗೆ ಮಾತಾಡುತ್ತ ಇಲ್ಲ. ಇರಲಿ ನಿಮಗೆ ಪೂರ ವಿಷಯ ಹೇಳಿ ಬಿಡುವೆ.




ನನ್ನದು ಪ್ರೇಮ ವಿವಾಹ, ಇಬ್ಬರದೂ ಒಂದೇ ಕಂಪನಿ. ಅವಳನ್ನು ಇಲ್ಲೇ ಮೊದಲು ಭೇಟಿ ಮಾಡಿದ್ದು. ಮೊದಲನೇ ನೋಟವೋ, ಎರಡನೇ ನೋಟವೂ ಪ್ರೀತಿ ಅಂತೂ ಹುಟ್ಟಿತು. ಅವಳು ಒಪ್ಪಿದ್ದೂ ಆಯಿತು. ಒಮ್ಮೆ ಕಾಫಿ ಡೇ ನಲ್ಲಿ ಕೂತು ಕಾಫಿ ಕುಡಿತ ಇರಬೇಕಾದ್ರೆ ಅವಳ ಪಕ್ಕದ ಮನೆಯರು ನೋಡಿ ಮನೆಗೆ ವಿಷ್ಯ ಮುಟ್ಟಿಸಿಯು ಬಿಟ್ಟರು. (ಅಷ್ಟೂ ಮಾಡದೆ ಇದ್ರೆ ಅವರಿರೋದು ಯಾಕೆ? ) ನಾವುಗಳು ಈಗ ಸಿನಿಮಾ ದ ತರ ದೊಡ್ಡ ಯುದ್ದ ನಡೆಯುತ್ತೆ, ರೂಮಿನಲ್ಲಿ ಕೂಡಿ ಹಾಕುವುದು, ತುರ್ತಿನಲ್ಲಿ ಮಾವನ ಮಗನೋ, ಮಗಳನ್ನೋ ತಂದು ಗಂಟು ಹಾಕುವರು ಎಂದೆಲ್ಲಾ ಭಾವಿಸಿದ್ದೆವು. ಆದ್ರೆ ಹಾಗೆ ಏನೂ ಆಗದೆ (ಇಲ್ಲಿ ಸ್ಟೋರಿ ಬರೆದದ್ದು ಸಿನಿಮಾ ನಿರ್ದೇಶಕ ಅಲ್ಲವಲ್ಲ) ಮನೆಯರು ಸಂತೋಷದಿಂದ ಒಪ್ಪಿ ಬಿಟ್ಟರು. ಒಂದು ಶುಭ ಮುಹೂರ್ತದಲ್ಲಿ ಮದುವೆಯು ಮಾಡಿ ಬಿಟ್ಟರು. (15 ದಿನದ ಹಿಂದೆ ಅಷ್ಟೇ ಮದುವೆ ಆಗಿದ್ದು) ಅಂತು ನಮ್ಮ 4 ತಿಂಗಳ ಪ್ರೇಮ - ಪರಿಣಯ ಸುಖಾಂತ್ಯ ಗೊಂಡಿತು.




ಆದರೆ ತೊಂದರೆ ಶುರುವಾದದ್ದೇ ಆಮೇಲೆ ನೋಡಿ, ಅದೇನೋ ಪ್ರಾಜೆಕ್ಟ್ ಡೆಡ್ ಲೈನ್, ಡೆಲಿವರಿ ಅಂತೆಲ್ಲ ಕಿವಿ ಮೇಲೆ ಹೂವ ಇಟ್ಟು ನಮ್ಮ 15 ದಿನಗಳ ರಜೆ ಕೇವಲ 4 ದಿನಕ್ಕೆ ನಮ್ಮ ಮ್ಯಾನೇಜರ್ ಮಾಡಿ ಬಿಟ್ಟರು. ಹನಿ ಮೂನ್ ಗೆ ಸಿಂಗಪೋರ್, ಶೀಮ್ಲ ಅಂತೆಲ್ಲ ಪ್ಲಾನ್ ಹಾಕಿದ್ದು ಎಲ್ಲ ವೇಸ್ಟ್ ಆಗಿ, ಅದೇ ಆಫೀಸ್ ನ ಎ ಸಿ ಕೆಳಗೆ ಕೂರೋ ಹಾಗೆ ಆಯಿತು. ಇಷ್ಟೇ ಆಗಿದ್ದರೆ ತೊಂದರೆ ಇರುತ್ತಾ ಇರಲಿಲ್ಲ. ಪ್ರಾಜೆಕ್ಟ್ implementation ಗೆ ಅಂತ ನನ್ನಾಕೆ ನ 2 ತಿಂಗಳು ಅಮೆರಿಕ ಹೋಗು ಅನ್ನೋದೇ? ನಾನಾದರೂ ಹೇಗೆ ಬೇಡ ಅನ್ನಲಿ? ದುಡ್ಡು ಸಿಗೊದಿಲ್ವೆ? ಅವಳ ದುಡ್ಡಿನ ನಂಬಿಕೆಯಿಂದಲೇ ಅಲ್ವ ನಾನು ಹೋಂ ಲೋನ್ ತಗೊಂಡಿರೋದು.




ಸಂಸಾರ ನಡೆಸೋ ಬದಲು ಅವಳು ಪ್ಯಾಕ್ಕಿಂಗ್ ಮಾಡಿಕೊಂಡು ಹೊರಟೇ ಬಿಟ್ಟಳು, ನನಗೋ ವಿರಹ, ಅಷ್ಟೆಲ್ಲ ಲವ್ ಮಾಡಿ, ಮದುವೆ ಆದ್ರೆ ಇವಳು ದೂರ ತೀರಕ್ಕೆ ಹೊರಡೋದೇ? ಈ ಮ್ಯಾನೇಜರ್ ಗಳಿಗೆ ಅಷ್ಟು ಕರುಣೆ ಇರೋಲ್ವೆ? ಕಡೆ ಪಕ್ಷ ನವ ದಂಪತಿ ಗಳು ಅನ್ನೋ ಕರುಣೆ ತೋರಿದ್ದರೂ ಸಾಕಿತ್ತು. 2 ತಿಂಗಳು ಅಮೆರಿಕ ಕೆಲಸ ಮುಂದೆ ಹಾಕಿದ್ರೆ ಅವನದ್ದೇನು ಹೋಗ್ತಾ ಇತ್ತು. ಸರಿಯಾಗಿ 143 ದಿನಗಳಿಂದ ದಿನಕೊಂದರಂತೆ ಬರೆದ ಪ್ರೇಮ ಪತ್ರ (ಇಮೇಲ್ ನಲ್ಲಿ ), ಕಳುಹಿಸಿದ ಮೆಸೇಜ್ ಗಳೇ ನನಗೆ ಸದ್ಯಕ್ಕೆ ಸಂಗಾತಿ ಅಂತ ಭಾವಿಸಿ, ಅವಳು ಅಲ್ಲಿ ತಲುಪಿದ ಮೇಲೆ ನನಗೆ ಮೇಲ್ ಮಾಡುವ ಆಶ್ವಾಸನೆ ನು ತಗೊಂಡೆ.




ಅವಳು ಇಷ್ಟವರೆಗೂ ನನಗೆ ಬರಿ ಮೆಸೇಜ್ ಗಳು, ಮಿಸ್ ಕಾಲ್ ಗಳು ಕೊಡ್ತಾ ಇದ್ದಳೆ ಹೊರತು ಪ್ರೇಮ ಪತ್ರ ಬರೆದಿರಲಿಲ್ಲ. ನನ್ನ ಪತ್ರಗಳನ್ನ ಓದಿ "ಚೆನ್ನಾಗಿದೆ ಕಣೋ", "ನಾನು ಕನ್ನಡ ಎಂ ಎ ಮಾಡಿದ್ರೆ ಚೆನ್ನಾಗಿ ಇರ್ತಿತ್ತು ಕಣೋ" "ನಿನ್ನ ಪತ್ರಗಳಲ್ಲಿ ಹೋಲಿಕೆ ಗಳೆಲ್ಲ ಬರಿ ತಿನ್ನೋ ಐಟಂ ಗಳೇ ಇರ್ತಾವೆ" ಅನ್ನುವ ಫೀಡ್ ಬ್ಯಾಕ್ ಕೊಡುತ್ತಿದ್ದಳು ಹೊರತು, ನನಗೆ ಒಂದೇ ಒಂದು ಮೇಲ್ ಮಾಡಿರಲಿಲ್ಲ. ಪುಕ್ಕಟೆ ಮೆಸೇಜ್ ಇರಬೇಕಾದ್ರೆ ಪತ್ರ ಯಾಕೆ ಅನ್ನೋದು ಅವಳ ಅಂಬೋಣ.




ಇಂದಿಗೆ ಸರಿಯಾಗಿ ಅವಳು 2 ದಿನ ಆಗಿಯೇ ಬಿಟ್ಟಿದೆ. ನಿನ್ನೆ ರಾತ್ರೆ ಅವಳು ಕಾಲ್ ಮಾಡಿದ್ಲು, ಆದರೆ ನನ್ನದು ಸೂರ್ಯ ವಂಶ ಅದ್ದರಿಂದ ಬೆಳಕು ಮೂಡಿದ ಮೇಲೆಯೇ ನನಗೆ ತಿಳಿದದ್ದು. ನಂತರ ಆಫೀಸ್ ಗೆ ಬಂದು ಒಂದು ಸುಂದರವಾದ "ಕ್ಷಮಾಪನ!" ಪತ್ರ ಬರೆದೆ. ಮತ್ತೆ ಕಾಲ್ ಮಾಡಿದ್ರೆ ಉಗಿಸಿಕೊಬೇಕು, ಯಾರಿಗೆ ಬೇಕು, ನೆಮ್ಮದಿ ಹಾಳಗೋದರ ಜೊತೆ, ದುಡ್ಡು ಕೂಡ ಖರ್ಚು. ಅಮೆರಿಕ ದಿನ ಬಂದ ಮೇಲೆ ಎಂ ಟಿ ಅರ್ ನಲ್ಲಿ ಒಳ್ಳೆಯ ಊಟ ಕೊಡಿಸುವ ಭರವಸೆ ನೀಡಿದೆ. (ಈಗಲೂ ಊಟದ ಬಗ್ಗೆನೇ ಪ್ರಾಮಿಸ್ಸು ಅಂತ ಬೈಯಬಹುದೇನೋ? ) ಮೇಲ್ ಗೆ ರಿಪ್ಲೈ ಬರುವ ನಂಬಿಕೆ ಇತ್ತಾದರಿಂದ ಲ್ಯಾಪ್ ಟಾಪ್ ನ ಮನೆಗೇ ಹೊತ್ತೊಯ್ದೆ. ಅವಳ ಮೊದಲ ಪ್ರೇಮ ಪತ್ರ ಓದಲು ತುಂಬ ಉತ್ಸುಕನಾಗಿದ್ದೆ. ನಿನ್ನೆ ರಾತ್ರೆ 12 ರ ವರೆಗೆ ಆನ್ಲೈನ್ ಇದ್ದರು ಅವಳು ಬರಲಿಲ್ಲ, ಮೇಲ್ ಗೆ ಉತ್ತರ ನು ಬರಲಿಲ್ಲ. ಅದೆಷ್ಟು ಹೊತ್ತಿಗೆ ಕಣ್ಣು ಮುಚ್ಚಿದೇನೋ ಗೊತ್ತಿಲ್ಲ, ಬೆಳಿಗ್ಗೆ ಕಣ್ಣು ಬಿಡುವಾಗ 10 ಆಗಿತ್ತು, ಕಂಪ್ಯೂಟರ್ ಆನ್ ಮಾಡಿದರೆ ಅವಳಿಂದ ಮೊದಲ ಪ್ರೇಮ ಪತ್ರ ಬಂದಿದೆ. ಸಬ್ಜೆಕ್ಟ್ ಲೈನ್ ನಲ್ಲಿ "ನಿನಗಾಗಿ ಮಾತ್ರ" ಅನ್ನುವ ಒಕ್ಕಣೆ ಬೇರೆ. :) ನನಗೆ ಸ್ವರ್ಗಕ್ಕೆ ಮೂರೇ ಗೇಣು. ಇನ್ನೇನು ಮೇಲ್ ಓಪನ್ ಆಗಬೇಕು ಅನ್ನುವಷ್ಟರಲ್ಲಿ ನಮ್ಮ ಅಂಬಾನಿಗಳು ಕೈ ಕೊಡಬೇಕೇ? datacard ಮುಷ್ಕರ ಹೂಡಿ ಬಿಟ್ಟಿತು.


ಇನ್ನು ಆಫೀಸ್ ಗೆ ಹೋಗಿಯೇ ಓದಬೇಕು ಅಂದುಕೊಂಡು ಒಂದು ಬಕೆಟ್ ನೀರನ್ನ ತಲೆ ಮೇಲೆ ಸುರಿದು ಕೊಂಡು ಸ್ನಾನದ ಶಾಸ್ತ್ರ ಮಾಡಿ, ಆಫೀಸ್ ಗೆ ಓಡಿ ಬಂದೆ. (ನಾನು ಬೇರೆ ಕಂಪನಿ ಗೆ ರೆಸ್ಯುಮೆ ಕಳಿಸಬೇಕಾದ ಸಮಯದಲ್ಲಿ ಮಾತ್ರ ಸೈಬರ್ ಕೆಫೆ ಗೆ ಹೋಗೋದು). ಆಫೀಸ್ ಗೆ ನುಗ್ಗಿ ಇನ್ನೇನು ಲ್ಯಾಪ್ಟಾಪ್ ನ ಆನ್ ಮಾಡಬೇಕು ಅನ್ನುವಷ್ಟರಲ್ಲಿ ಮ್ಯಾನೇಜರ್ ನಿಂದ ಕಾಲ್. ಕೂಡಲೇ ಬಾ ಅಂತ. ಅಪ್ಪ ಅಮ್ಮ ಕರೆದಾಗ ಹೋಗುತ್ತಾ ಇರಲಿಲ್ಲ, ಆದರೆ ಈಗ ಹಾಗಲ್ಲವಲ್ಲ. ಈ ಕೆಲಸ ಆಗಬೇಕು, ಅದು ಆಗಬೇಕು, ಅದು ಹೀಗಲ್ಲ ಹಾಗೆ, ಸರಿ ಸುಮಾರು 2 ಘಂಟೆಗಳ ಕಾಲ ವಿಪರೀತ ಕುಯ್ದ. 1 ರ ಸುಮಾರಿಗೆ ಕ್ಯಾಬಿನ್ನಿಗೆ ಬಂದು ಮೇಲ್ ನೋಡೋಣ ಅಂದರೆ ಸ್ನೇಹಿತರು ಅನ್ನುವ ಪುಂಡು ಹುಡುಗ ಹುಡುಗಿಯರ ಗುಂಪು ಅಲ್ಲಿದೆ. ಮದ್ಯಾನ ಊಟ ಹೊರಗಡೆ ಹೋಗಿ ಮಾಡೋಣ ಅಂತ. ನನಗೆ ಮದುವೆ ಆಗಿದ್ದರೂ, ಹೆಂಡತಿ ದೂರದಲ್ಲಿ ಇದ್ದಿದ್ದರಿಂದ ನಾನು ಅ ಗುಂಪಿಗೆ ಸೇರದವನು ಅಂತ ಏಕಪಕ್ಷೀಯ ನಿರ್ದಾರ ಮಾಡಿಬಿಟ್ಟಿದ್ದರು. ಇವರನ್ನೆಲ್ಲ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಳ್ಳಿ, ನಾನು ಹೆಂಡತಿಯ ಪ್ರೇಮ ಪತ್ರ ಓದಲಿಕ್ಕೆ ಇದೆ ಅಂತ ಹೇಳಲು ಸಾಧ್ಯನ? ಗೊತ್ತಾಗಿ ಬಿಟ್ಟರೆ ಇನ್ನು 2-3 ತಿಂಗಳು ನನ್ನ ಕಾಲು ಎಳಿಯದೆ ಬಿಡುವುದೇ ಇಲ್ಲ. ನಾನು ಕೂಡ ಅವರಿಗೆ ಹೇಗೆಲ್ಲಾ ಕಾಟ ಕೊಟ್ಟಿಲ್ಲ, ಅದಕ್ಕೆಲ್ಲ ಈಗ ಬಡ್ಡಿ ಸಮೇತ ವಾಪಸ್ಸು ಕೊಟ್ಟೇ ಬಿಡುವರು.


ಎಲ್ಲರ ಒತ್ತಾಸೆ ಯಂತೆ ಪಕ್ಕದ ಹೋಟೆಲ್ ಗೆ ಧಾಳಿ ಮಾಡಿ ತಿನ್ನುವಾಗಲೂ ನನಗೆ ಪತ್ರದ ಬಗ್ಗೆನೇ ಚಿಂತೆ. ಇವರುಗಳಾರು ಬೇಗ ತಿಂದು ಮುಗಿಸಿ ಹೊರಡುವ ಜಾಯಮಾನದವರಲ್ಲ, ಮ್ಯಾನೇಜರ್ ನಿಂದ ಹಿಡಿದು ಹೆಂಡತಿಯ ಅಪ್ಪ ಅಮ್ಮ ಎಲ್ಲರಿಗು ಮನಸೋ ಇಚ್ಛೆ ಬಯ್ಯದ ಹೊರತು ಹೊರಡುವ ಹಾಗಿಲ್ಲ!! ಸರಿ ಸುಮಾರು 2 ಘಂಟೆಗಳ ಅಮೋಘ ಊಟದ ನಂತರ ಆಫೀಸ್ ಗೆ ಬಂದು ನನ್ನ ಕ್ಯಾಬಿನ್ ಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಮೊಬೈಲ್ ಬಡಿದು ಕೊಳ್ಳತೊಡಗಿತು, ಇವಳದ್ದೇ ಏನೋ ಅಂತ ತೆಗೆದು ನೋಡಿದರೆ, ಕ್ರೆಡಿಟ್ ಕಾರ್ಡ್ ನವನು, ರಿಸೆಪ್ಶನ್ ನಲ್ಲಿ ಕಾಯುತ್ತ ಇದ್ದೀನಿ, ದಯವಿಟ್ಟು ಬನ್ನಿ ಅಂದ. ಕಾರ್ಡು ಬೇಕು ಅಂತ ಹೇಳಿದವನು ನಾನೇ ಆದರು ಈ ಸೇಲ್ಸ್ ಅಸಾಮಿ ಈಗಲೇ ವಕ್ಕರಿಸಬೇಕೆ? ಹಾಳಾದವನು ಎಂದುಕೊಂಡು ಅ ಕಡೆ ನಡೆದೆ.




ಅ ಅಸಾಮಿಯೋ 10 ನಿಮಿಷದೊಳಗೆ ನನ್ನನ್ನು ಬಿಡುವ ಹಾಗೆ ಕಾಣುತ್ತಲೇ ಇಲ್ಲ, ನಮ್ಮ ಕಂಪನಿ ಕಾರ್ಡ್ ನಿಂದ ಇಷ್ಟೆಲ್ಲಾ ಉಪಯೋಗ ಇದೆ, ಅದು ಇದೆ, ಇದು ಇದೆ ಅಂತೆಲ್ಲ ಹೇಳಲು ಶುರು ಮಾಡಿದ. ಆಮೇಲೆ ಅದೆಷ್ಟೋ ಕಡೆ ನನ್ನ ಸಹಿ ತೆಗೆದು ಕೊಂಡ. ಸ್ವಲ್ಪ ಮಟ್ಟಿಗೆ ಮೊಳೆ ಹೊಡೆಸಿ ಕೊಂಡ ನಂತರ ನನ್ನ ಸುಳ್ಳು ವಿದ್ಯಾ ಪ್ರಾವಿಣ್ಯತೆಯನ್ನು ಪ್ರದರ್ಶಿಸಿ ಅವನ್ನನ್ನು ಸಾಗಹಾಕುವ ಹೊತ್ತಿಗೆ ಸಮಯ ಸಂಜೆ ಆಗುತ್ತಾ ಬಂದಿತ್ತು. ನನಗು ತಾಳ್ಮೆ ಹೋಗುತ್ತಾ ಬಂದಿತ್ತು. ಕೂಡಲೇ ಕ್ಯಾಬಿನ್ ಗೆ ನುಗ್ಗಿ, ಲ್ಯಾಪ್ಟಾಪ್ ನ ಆನ್ ಮಾಡಿ ಇನ್ನೇನು ಜಿ ಮೇಲ್ ಗೆ ಲಾಗಿನ್ ಆಗಬೇಕು ಅನ್ನುವಷ್ಟರಲ್ಲಿ ಪಕ್ಕದ ಕ್ಯಾಬಿನ್ ನ ಕೋತಿ ಮೂತಿಯ ಪ್ರಾಣಿ ವಕ್ಕರಿಸಬೇಕೆ? ಅದೇನೋ ಹೊಸ ಬುಸಿನೆಸ್ಸು, ಮಾರ್ಕೆಟಿಂಗ್, ಕೇವಲ 8 ಸಾವಿರ ಇನ್ವೆಷ್ಟು ಮೆಂಟು ಅನ್ನುತ್ತಾ ಕೊರೆಯಬೇಕೆ? ಈ ಸಾಫ್ಟ್ ವರೆ ನವರಿಗೆ ಇಷ್ಟು ಜಾಬ್ ಇನ್ಸೆಕುರಿಟಿ ಯಾಕೆ ಅಂತ ಕೇಳೋ ಹಾಗೆ ಇಲ್ಲ. ಸಂಜೆ ಆಗ್ತಾ ಬಂದ್ರು ಅವನು ಹೋಗೋ ಹಾಗೆ ಇಲ್ಲ. ಇನ್ನು ಆಫೀಸ್ ನಲ್ಲಿ ಪತ್ರ ಓದಲು ಸಾದ್ಯನೇ ಇಲ್ಲ ಅಂತ ಅನ್ನಿಸಿ, ಮನೆಗೆ ಹೊರಟು ಬಿಟ್ಟೆ. ಮೊದಲ ಪ್ರೇಮ ಪತ್ರ ದಿನ ಆದರೂ ಓದದ ಪರಮ ಪಾಪಿ ಎಂಬ ಮುಖ ಹೊತ್ತು ಬೈಕು ಹತ್ತಿ ಮನೆಗೆ ಬಂದೆ.




ಮನೆಯಲ್ಲಿ ಕೂತು ಆತುರದಿಂದ ಲಾಗಿನ್ ಆದೆ, ಒಂದು ಚಂದದ ಸಬ್ಜೆಕ್ಟ್ ಲೈನ್ "ನಿನಗಾಗಿ ಮಾತ್ರ", ಮೇಲ್ ಓಪನ್ ಆಗೇ ಬಿಟ್ಟಿತು, ನೋಡುತ್ತೀನಿ ಕೇವಲ ಒಂದೇ ಒಂದು ಲೈನ್ ಇದೆ!! "ಇಲ್ಲಿ ಬಹಳ ಚಳಿ ಕಣೋ", ಅಂತ. ಸಿಟ್ಟೆಲ್ಲ ಬಂತು, ಇಡೀ ದಿನ ಕಷ್ಟ ಪಟ್ಟು ಮೊದಲ ಪ್ರೇಮ ಪತ್ರ ಅಂತ ಓದಿದರೆ ಹೀಗಾ ಬರೆಯೋದು? ಏನು ಮಾಡೋದು ಜಗಳ ಆಡೋಣ ಅಂದ್ರೆ ಅವಳು ಇಲ್ಲಿ ಇಲ್ಲವೇ? ರಿಪ್ಲೈ ಮಾಡೇ ಬಿಟ್ಟೆ, ನನ್ನೆಲ್ಲ ಸಿಟ್ಟು ಹೊರಹಾಕಿ, ಮೊದಲು ಆಶ್ವಾಸನೆ ಕೊಟ್ಟಿದ್ದ ಎಂ ಟಿ ಅರ್ ಊಟ ಕ್ಯಾನ್ಸಲ್ ಮಾಡಿದೆ.




ನೀವು ಕೇಳಬಹುದು ಇಷ್ಟೆಲ್ಲಾ ಕಷ್ಟ ಪಡೋ ಬದಲು ಒಂದು ಫೋನ್ ಮಾಡಬಹುದಿತ್ತಲ್ಲ ಅಂತ, ಈಗ ಅದನ್ನೇ ಮಾಡ್ತಾ ಇರೋದು, ಫೋನ್ ನಲ್ಲಿ ನಡೆಯೋ ಪ್ರೇಮ ಸಂಬಾಷಣೆ ಇಲ್ಲಿ ಹಾಕುವುದಿಲ್ಲ ಬಿಡಿ, ಈಗ ನನ್ನ ಸಿಟ್ಟೆನಿದ್ದರು ಅವಳ ಮ್ಯಾನೇಜರ್ ಎಂಬ ಬ್ರಹ್ಮ ರಾಕ್ಷಸನ ಮೇಲೆ ಮಾತ್ರ.