Friday, January 2, 2015

ಪ್ರೇಮ ಪತ್ರಗಳು - nostalgia

ತೀರ ಹಿಂದಲ್ಲ.
ಮೊಬೈಲ್ ಜಗತ್ತಿಗಿಂತ ಹಿಂದಿನ ಪ್ರಪಂಚ ಚೆನ್ನಾಗಿತ್ತು.
ಇಷ್ಟ ಪಟ್ಟ ಹುಡುಗಿ ಮನೆಯ ಫೋನ್ ನಂಬರ್ ಬೇಕು ಅಂದ್ರೆ ಹರಸಾಹಸ ಮಾಡಬೇಕಿತ್ತು. ಮೊದಲು ಅವರಪ್ಪನ ಹೆಸರು ಪತ್ತೆ ಮಾಡಬೇಕು, ಆಮೇಲೆ ಅಡ್ರೆಸ್ ಕಂಡು ಹಿಡಿಬೇಕು. ಕೊನೆಗೆ ಬಿ ಎಸ ಏನ್ ಎಲ್ ನವರ ಟೆಲಿಫೋನ್ ಡೈರೆಕ್ಟರಿ ಗೆ ಶರಣು ಹೊಡೆದು.. ಪ್ರಯತ್ನಿಸಬೇಕು.

ಇಷ್ಟೆಲ್ಲಾ ಸಾಹಸ ಗಾಥೆಯ ನಂತರವೂ ಕಾಲ್ ನ ನಮಗೆ ಬೇಕಾದವರೇ ಎತ್ತುತ್ತಾರೆ ಅನ್ನೋದಕ್ಕೆ ಏನೂ ಖಾತರಿ ಇರುತ್ತಿರಲಿಲ್ಲ. ಹುಡುಗಿಯ ಅಪ್ಪನೋ, ಅಣ್ಣನೋ ಎತ್ತಿದರೋ... ಮುಗೀತು. ಸಾಕು ಸಹಸ್ರ ಮಾನಕ್ಕೆ ಸಾಕಾಗುವಷ್ಟು ಬೈದು ಫೋನು ಕುಕ್ಕುತ್ತಿದ್ದರು.

ಹಾಗಾಗಿ, ಇಂತಾ ದುರಂತ ಸಂದರ್ಭಗಳಿಂದ ನಮ್ಮಂತ ಸುಸಂಸ್ಕೃತ ಗಂಡು ಮಕ್ಕಳನ್ನು ಕಾಪಾಡಲು ಒಂದು ವ್ಯವಸ್ತೆ ಜಾರಿಯಲ್ಲಿ ಇತ್ತು. ಎರಡು ಬಾರಿ ರಿಂಗ್ ಮಾಡಿ ಕಟ್ ಮಾಡಿ ಮತ್ತೆ ಪ್ರಯತ್ನಿಸಿದರೆ, ಅದು ಆ ಮನೆಯಲ್ಲಿರುವ ನಮಗೆ ಬೇಕಾದ ವ್ಯಕ್ತಿಯೇ ಫೋನ್ ಎತ್ತುತ್ತಿದ್ದರು. :) 


ಆಗಿನ ಕಾಲದಲ್ಲಿ ಪ್ರೇಮಿಸುವುದು,  ಒಂದು ಮೆಸೇಜ್ ಕಳಿಸಿದಷ್ಟು ಸುಲಭದ್ದು ಆಗಿರಲಿಲ್ಲ. ಪ್ರೇಮ ಪತ್ರ ಬರೆದು ಕೊಡುವ ನೆಪದಲ್ಲಿ ಕೈ ಬರಹ ಹಾಗು ಕಾಗುಣಿತ ಕೂಡ ಸಹನೀಯವಾಗಿಯೇ ಇರುತ್ತಿತ್ತು. ಈಗ ವಾಟ್ಸ್ ಅಪ್ ನಲ್ಲಿ ನೀಲಿ ಬಣ್ಣಕ್ಕೆ ತಿರುಗಿಲ್ಲ, ರಿಪ್ಲೈ ಎರಡು ನಿಮಿಷ ಆದರೂ ಬಂದಿಲ್ಲ ಅಂದ್ರೆ ಯಾಕೋ ಮನಸು ದಿಗಿಲು ಗೋಳ್ಳುತ್ತೆ.

ಊಹಿಸಿ ಆಗಿನ ಕಾಲವನ್ನು.

ಪತ್ರವನ್ನು ಬರೆಯುವುದು ಬಹಳ ಕಷ್ಟ ಆದರೆ ಇಷ್ಟ. ಅಂಚೆ ಕಚೇರಿಗೆ ಹೋಗಿ ಹಾಕಿ ಬಂದ್ರೆ ಹೆದರಿಕೆ ಶುರು. ಪತ್ರದಲ್ಲಿ ಏನೇ ಶೂರತ್ವದಿಂದ ಬಂಡಲು ಬಿಟ್ಟಿದ್ದರೂ, ಹುಡುಗಿ ಅಪ್ಪನ ಕೈಗೆ ಸಿಕ್ಕರೆ ಏನು ಗತಿ?
ಆಮೇಲೆ ಪೋಸ್ಟ್ ಕಾರ್ಡ್, ಅಥವಾ ಎನ್ವೆಲೋಪ್ ಗಳ ಬಗ್ಗೆ ಮಾಹಿತಿ ಕೂಡ ಅಗತ್ಯ ಇರಬೇಕಿತ್ತು. ಒಮ್ಮೆ ಪರಿಚಿತರೊಬ್ಬರು ಒಂದು ರುಪಾಯಿಯ ಅಂಚೆ ಚೀಟಿ ಅಂಟಿಸಬೇಕಾದಲ್ಲಿ ಒಂದು ರುಪಾಯಿಯ ರೆವೆನ್ಯೂ ಸ್ಟ್ಯಾಂಪ್  ಹಾಕಿ ಕಳಿಸಿದ್ರು. ಎರಡು ದಿನ ಆದಮೇಲೆ ಅಂಚೆಯಣ್ಣ ಬಂದು, ಬಾಯಿ ತುಂಬ ಉಗಿದು, ವಾಪಸು ಕೊಟ್ಟು ಹೋಗಿದ್ದ!


ಇರಲಿ, ಈ ಪ್ರೇಮ ಪತ್ರಗಳನ್ನು ಹಾಗೆಯೇ ಜತನವಾಗಿ ಇಟ್ಟುಕೊಳ್ಳುವುದರಲ್ಲಿ ಇರುವ ಸುಖ, ಅವುಗಳ ಮೇಲೆ ಆಗಾಗ ಕೈ ಆಡಿಸಿದಾಗ ಸಿಗುವ ಆನಂದ, ಮೊಬೈಲ್ ಮುಟ್ಟಿದ ಮಾತ್ರಕ್ಕೆ ಸಿಗುತ್ತಾ? ಇರಲಾರದು. 


ಆದರೆ ಮೊಬೈಲ್ ಬಂದ ಕೂಡ್ಲೇ ಎಲ್ಲಾ ಬದಲಾಯಿತು ಎಂದಲ್ಲ. 2000 ದಶಕದ ಆದಿಯಲ್ಲಿ "ಜೆ ಟಿ ಎಂ ನಿಂದ ಶ್ರೀನಾಥ್ ಅವರು ಮೊಬೈಲ್ ಆದರು, ಇನ್ನು ನೀವು?" ಉದಯ ಟೀವಿಯಲ್ಲಿ ಜಾಹಿರಾತು ಬರುತ್ತಿತ್ತು. ಆದರೆ ಸಾಕುವುದು ಉದ್ಯೋಗಪತಿ ಗಳಿಗೇ ಸಾದ್ಯ ಆಗ್ತಾ ಇರಲಿಲ್ಲ. ಇನ್ನು ಕಾಲೇಜು ಮಕ್ಕಳಿಗೆ ದೂರದ ಮಾತು ಆಯಿತು.
ಅದೂ ಅಲ್ಲದೆ, ಅದನ್ನ ಪ್ಯಾಂಟ್ ಜೇಬಲ್ಲಿ ಇಟ್ಟು ಕೊಂಡಲ್ಲಿ ಕಿಡ್ನಿ ಗೆ ತೊಂದರೆ, ಶರ್ಟ್ ಜೇಬಲ್ಲಿ ಇಟ್ಟರೆ ಹಾರ್ಟ್ ಅಟ್ಯಾಕ್ ಆಗುತ್ತೆ ಅನ್ನುವ ಅಪವಾದವೂ ಇತ್ತು.

ಈಗ ಎಷ್ಟು ಜನರ ಕಿಡ್ನಿ ಹೋಗಿದೆಯೋ ಮಾಹಿತಿ ಇಲ್ಲ.
ಆದರೆ ಆಗಿನ ಕಾಲದ ರೀತಿಯ ಪ್ರೇಮ ಪ್ರಕರಣಗಳು ಕಾಣುತ್ತಿಲ್ಲ.
ಒಂದು ಮೆಸಜು, ಫೇಸ್ಬುಕ್ ನಲ್ಲಿ ಅನ್ ಫ್ರೆಂಡ್ ಮಾಡಿದ ಮಾತ್ರಕ್ಕೆ ಸಂಬಂಧ ಮುಗೀತಾ ಇರಲಿಲ್ಲ.

ಯಾಕೋ ಹಂಗೆ ಅನ್ನಿಸ್ತು.
ಕೊಸರು: ಇದರರ್ಥ ನಂಗೆ ವಯಸ್ಸು ಆಗಿದೆ, ಹಳೆ ಲ್ಯಾಂಡ್ ಲೈನ್ ಜಮಾನದವನು ಅಂತ ಅಲ್ಲ. ಹಿರಿಯರು ಹೇಳಿಲ್ವೇ? ಪ್ರೇಮಕ್ಕೆ ಕಣ್ಣಿಲ್ಲ... ಹಾಗೆಯೇ ವಯಸ್ಸು ಕೂಡ ಇಲ್ಲ. :) 

Tuesday, August 13, 2013

ವರುಣನ ಸಾಹಸಗಳು! - ಪತ್ತೇದಾರಿ ಮಾಲಿಕೆ 2



ನಿಮಗೆ ನಮ್ಮ ವರುಣ ಗೊತ್ತಲ್ಲ? ಅದೇ ಲಭ್ಯವಿರುವ ಪತ್ತೆದಾರರಲ್ಲಿ ಅತ್ಯಂತ ಖ್ಯಾತನಾಮ. ಹಿಂದೊಮ್ಮೆ ಹೇಳಿದ್ನಲ್ಲ, ಕಳ್ಳಕಾಕರನ್ನು ಮಾತ್ರವಲ್ಲದೆ ದೆವ್ವವನ್ನು ಕೂಡ ಹಿಡಿದ್ದದ್ದು. ಇಂತಿರ್ಪ, ವರುಣನಿಗೆ ಕೇಸುಗಳು ವಿಪರೀತ. ಕೈ ಹಿಡದ ಯಾವ ಕೆಲಸವನ್ನು ಅರ್ದಕ್ಕೆ ಬಿಟ್ಟಿದ್ದೇ ಇಲ್ಲ. ಒಮ್ಮೆ ಒಂದು ಪ್ರಕರಣಕ್ಕೆ ಹಿಡಿದ ಸಾಕ್ಷಗಳು ಎಷ್ಟು ಖಡಕ್ ಇತ್ತು ಅಂದ್ರೆ, ಸಾಕ್ಷಾತ್ CSP (ಅದೇ ರೀ.. ಮುಕ್ತ ಮುಕ್ತ ಲಾಯರ್ರು) ಕೂಡ ವಾದಮಾಡಲು ಸಾಧ್ಯವಾಗದೆ ಸೋತು ಬಿಟ್ರು. J

ಇರಲಿ ಈಗ ವಿಷಯಕ್ಕೆ ಬರೋಣ. ಮೊನ್ನೆ ಹಿಂಗೆ ಟಿವಿ 9 ನೋಡ್ತಾ ಇರಬೇಕಾದ್ರೆ, ಎಂದಿನಂತೆ ಫೋನ್ ಬಂತು. ಅವನು ಮಾತಾಡುವಾಗ ಅಷ್ಟೇನೂ ಮಂದಹಾಸ ಇರಲಿಲ್ಲ, “ಹ್ಮ್ , ಸರಿ” ಮುಂತಾದ ಪದ ಪುಂಜ ಬಂತು. ಕೂಡ್ಲೇ ಇದು ಒಂದು ಕೇಸ್, ಆ ಕಡೆ ಇರೋದು ಗಂಡಸು ಅಂತ ಕೂಡ ಗೊತ್ತಾಯಿತು. (ಹುಡುಗೀರ ಫೋನ್ ಮಾಡಿದ್ರೆ ಮುಖ ಭಾವ ಬದಲಾಗೊಲ್ವೆ?... ನಂಗು ಪತ್ತೆದಾರಿಕೆ ಬರುತ್ತೆ) ಹೆಸರಾಂತ ಮಾಜಿ ಮಂತ್ರಿ ಮಾಡಿದ್ದು ಅಂತ ಹೇಳಿದ. ಅವರ ಅತಿ ಮುಖ್ಯ ಐ ಪ್ಯಾಡ್ ಕಳೆದು ಹೋಗಿದೆಯಂತೆ. ಅದರಲ್ಲಿ ದೇಶದ ಹಾಗು ನಾಡಿನ ಅತಿ ಮುಖ್ಯ ಮಾಹಿತಿ ಇದೆಯಂತೆ. ಅದು ವೈರಿಗಳ ಕೈಗೆ ಸೇರಿದರೆ ದೇಶದ ಭದ್ರತೆಗೆ ಅಪಾಯ ಆಗುತ್ತಂತೆ. ಕೂಡಲೇ ಹುಡುಕಿ ಕೊಡಬೇಕು ಅಂತ ವಿನಂತಿ ಮಾಡಿದ್ದಾರೆ ಅಂದ. ಅದು ಕಳೆದು ಎರಡು ದಿನಗಳೇ ಆಗಿದೆ, ವಿಷ್ಯ ಪೊಲೀಸರಿಗೆ ತಿಳಿಸುವ ಹಾಗೂ ಇಲ್ಲ, ಮಾಧ್ಯಮಗಳಿಗೆ ತಿಳಿದರೆ ವೈರಿಗಳು ಎಚ್ಚೆತ್ತು ಬಿಡುತ್ತಾರೆ ಎಂಬುದು ಮಾಜಿ ಮಂತ್ರಿಯ ಅಂಬೋಣ, ಹಾಗಾಗಿ ಕೂಡಲೇ ಹೋಗಿ ಅವರ ಮನೆ – ಆಫೀಸ್ ನೋಡಿ ಬರೋಣ ಬಾ ಎಂದ.

ಮೊದ್ಲೇ ನಮ್ಮ ದೇಶದಲ್ಲಿ ಎಲ್ಲಿ, ಯಾವಾಗ ಬೇಕಾದ್ರೂ ಬಾಂಬು ಸಿಡಿಯಬಹುದು. ನಾನು ಆ ರಾಜಕಾರಣಿ ಮನೆಗೆ ಹೋಗೋದು, ವೈರಿಗಳು ನಮ್ಮನ್ನು ಗುರುತು ಮಾಡಿಕೊಂಡು... ಡುಂ ಅಂತ ಸಿಡಿಸಿ ಬಿಡಬಹುದು. ಇಲ್ಲಿ ಜೀವಕ್ಕೆ ಬೆಲೆ ಬಹಳ ಕಡಿಮೆ. ಹಂಗಾಗಿ ಹೆದರಿಕೆ ಅಲ್ಲದಿದ್ದರೂ... ಹೊಟ್ಟೆಯಲ್ಲಿ ಯಾಕೋ ಡುಳು ಡುಳು ಶಬ್ದ ಬಂತು. ಸ್ವಲ್ಪ ವಾಸನೆಯೂ ಬಂತು. ನನ್ನ ಪರಿಸ್ಥಿತಿ ನೋಡಿ, ಬೈಕೊಂಡು ಅವನೊಬ್ಬನೇ ಹೋದ. ನಾನು ಕೂಡ ಎಂದಿನಂತೆ ಟಿವಿ 9 ನಿಂದ ಸುವರ್ಣ ನ್ಯೂಸ್ ಗೆ ಚಾನೆಲ್ ಬದಲಿಸಿದೆ. ಅದೇನೋ ಬ್ರೇಕಿಂಗ್ ನ್ಯೂಸ್ ಬರ್ತಾ ಇತ್ತು.

ಮಧ್ಯ ರಾತ್ರೆ ಹೊತ್ತಿಗೆ ವರುಣ ಬಂದ. ಒಮ್ಮೆಲೇ ಅಟ್ಟದಿಂದ ಹಳೆ ಪೇಪರ್ ತೆಗೆದು ಏನೇನೋ ಹುಡುಕಲು ಶುರು ಮಾಡಿದ. ಸ್ವಲ್ಪ ಹೊತ್ತಿಗೆ, ಇಂಟರ್ನೆಟ್ ನಲ್ಲಿ ಅದೇನೋ ಹುಡುಕಿ ನೋಟ್ಸ್ ಮಾಡಲು ಶುರು ಮಾಡಿದ. ಏನು ಬೇಕಿತ್ತು ಅಂತ ಕೇಳಬೇಕು ಅಂತ ಅನ್ನಿಸ್ತು, ಆದ್ರೆ ಎಲ್ಲಿ ಕೆಲಸ ಹೇಳ್ತಾನೋ ಅಂತ ಮತ್ತೊಂದು ರಗ್ಗು ಎಳಕೊಂಡು ಮಲಗಿದೆ. ಬೆಳಿಗ್ಗೆ ಒಂಬತ್ತಕ್ಕೆ ಎದ್ದುಳುವಾಗ ಅವನು ಇರಲಿಲ್ಲ. ಒಳ್ಳೆದೇ ಆಯಿತು ಅಂತ ಹೋಗಿ, ಮೂರು ಮಸಾಲೆ ದೋಸೆ, ಒಂದು ಸ್ಟ್ರಾಂಗ್ ಕಾಫಿ ಕುಡಿದು ಬಂದೆ.

ಮಾರನೆ ದಿನ ಸಂಜೆ ನಮ್ಮ ಪತ್ತೆದಾರದ ಸವಾರಿ ಬಂತು. ಪಕ್ಕದ ಮನೆ ನೀಲು ಆಂಟಿ ತಂದು ಕೊಟ್ಟ ಬಜ್ಜಿ ಪಕೋಡ ತಿನ್ನುತ ವಿಷ್ಯ ಹೇಳಿದ. 

ಹಿಂದಿನ ಸರ್ಕಾರ ಎಲ್ಲಾ ಎಂ ಎಲ್ ಎ ಗಳಿಗೆ ಕೆಲಸಕ್ಕೆ ಅನುಕೂಲವಾಗಲಿ, ಮಾಹಿತಿ ಕೈ ಅಂಚಿನಲ್ಲಿ ಇರಲಿ ಎಂದು ಐ ಪ್ಯಾಡ್ ಕೊಟ್ಟಿತ್ತಂತೆ. ಈ ರಾಜಕಾರಣಿ ಆವಾಗ ದೊಡ್ಡ ಮಂತ್ರಿ ಕೂಡ ಆಗಿದ್ದರಂತೆ. ಈಗ ಮಾಜಿ ಆದಮೇಲೆ ಐ ಪ್ಯಾಡ್ ನ ಅವರ ಕಚೇರಿಯಲ್ಲಿ ಮಾತ್ರ ಬಳಸುತ್ತಿದ್ದರಂತೆ. ಹಾಗಾಗಿ ಅದು ಕಚೇರಿಯಲ್ಲಿಯೇ ಕಳುವಾಗಿದೆ ಎಂಬ ನಿರ್ದಾರಕ್ಕೆ ಬಂದನಂತೆ. (ಬಹಳ ಈಜಿ ಅಲ್ವ?) ೪-೫ ದಿನದ ಹಿಂದೆ ಅಲ್ಲಿಗೆ ಭೇಟಿ ಕೊಟ್ಟ ಎಲ್ಲಾ ಜನರ ಬಗ್ಗೆ ರಿಜಿಸ್ಟರ್ ನಲ್ಲಿ ನೋಡಿದ ನಂತೆ. ಅಲ್ಲಿಗೆ ಬಂದವರು ವ್ಯಾಪಾರ ನಿರತ ರಾಜಕಾರಣಿಗಳು, (ಕುದುರೆ ವ್ಯಾಪಾರ ನ? ) ಬೆಂಬಲಿಗರು ಹಾಗು  ಮಂತ್ರಿಯ ಮಾಜಿ ಆಪ್ತ ಕಾರ್ಯದರ್ಶಿ!. ನನಗೆ ಕಾರ್ಯದರ್ಶಿ ಮೇಲೇನೆ ಅನುಮಾನ ಬಂತು. ಗುಟ್ಟಾಗಿ ಮನೆಗೆ ಹೋದರೆ, ಆ ಪಿಯೇ ಮಗ ಜಗುಲಿಲೇ ಕೂತು  ಐ ಪ್ಯಾಡ್ ನಲ್ಲಿ ಆಟ ಆಡ್ತಾ ಇದ್ದಾನೆ!  ಮಗು ಆಡೋಕೆ ಸಾಮಾನು ಕೇಳಿದೆ ಅಂತ ಪಿಯೆ ಇದನ್ನೇ ಕದ್ದು ಬಿಟ್ಟಿದ್ದ. ನಮ್ಮ ವರುಣ ರೆಡ್ ಹ್ಯಾಂಡ್ ಆಗಿ ಹಿಡಿದು ಐ ಪ್ಯಾಡ್ ನ ಹಿಂತಿರುಗಿಸಿದನಂತೆ.

ಅಲ್ಲ ಮಾರಾಯ, ಕದ್ದಿದ್ದು ಅವನೇ ಅಂತ ಹೆಂಗೆ ನಿರ್ದಾರಕ್ಕೆ ಬಂದೆ? ಉಗ್ರರೋ.. ಇನ್ಯಾರೋ ಅಲ್ವ ಅಂದೆ. (ಸುಖಾ ಸುಮ್ನೆ ಹೆಂಗೆ ಒಪ್ಪೋದು?)

ವರುಣ ಟೀ ನ ಬಾಯಿಗೆ ಇಡುತ್ತಾ ಹೇಳಲು ಶುರು ಮಾಡಿದ. ಆ ಮಾಜಿ ಮಂತ್ರಿಗೆ ಕಂಪ್ಯೂಟರ್ ಜ್ಞಾನ ಏನು ಇಲ್ವಂತೆ, ಉಗ್ರರಿಗೆ ಬೇಕಾಗೋ ಮಾಹಿತಿ ಈ ಮನುಷ್ಯ ನ ಹತ್ರ ಏನೂ ಇರಲಿಲ್ಲ. ಅಷ್ಟಕ್ಕೂ ಆತ ಸಧನ ದಲ್ಲಿ ಮಾತಾಡಿದ್ದೆ ಕಡಿಮೆ ಅಂತೆ. ಮಾತಾಡಿದ್ದೆಲ್ಲವೂ ಉಪಯೋಗಕ್ಕೆ ಬಾರದವೇ. ಈ ನಾಯಕರಿಗೆ ಈ ಟ್ಯಾಬ್ಲೆಟ್ ಗಳಲ್ಲಿ ಸಿನೆಮ ನೋಡೋಕೆ ಬಳಸುತ್ತಿದರೆ ಹೊರತು ಮಾಹಿತಿ ಸಂಗ್ರಹಣೆಗೆ, ಸಂಸ್ಕರಣೆಗೆ ಉಪಯೋಗಿಸುತ್ತಾ ಇರಲ್ಲವಂತೆ. ಅವರು ನೋಡೋ ಸಿನೆಮ ಎಲ್ಲ ನಮಗೆಲ್ಲಾ ಗೊತ್ತಿರುವಂತದ್ದೇ ಎಂದು ನಕ್ಕ. ಅದಕ್ಕೆ ಆ ರಾಜಕಾರಣಿ ಪೊಲೀಸರು – ಮಧ್ಯಮ ಅಂತ ಹೆದರಿದ್ದು, ದೇಶ – ಭದ್ರತೆ ಅಂತ ನಾಟಕ ಮಾಡಿದ್ದು ಅಂದು ಮತ್ತೊದ್ದು ಪಕೋಡ ಬಾಯಿಗೆ ಹಾಕ್ಕೊಂಡ. ಇವನು  ಪಿಯೆ ಮೇಲೆ ಅನುಮಾನ ಪಟ್ಟ, ಹಾಗು ಅದು ಎಂದಿನಂತೆ ಸರಿಯಾಗೇ ಇತ್ತು. ಕಳ್ಳ ಮಾಲು ಸಮೇತ ಸಿಕ್ಕಿಬಿದ್ದ. ಕೂಡಲೇ ಮತ್ತೊಂದು ಪಕೋಡ ಕೂಡ ಬಾಯಿಗೆ ಹಾಕ್ಕೊಂಡು ನಂಗೆ ಸಿಗದಂತೆ ಮಾಡಿದ.

ಹೋಗ್ಲಿ ಬಿಡಿ, ಈ “ಬದುಕು” ದಾರವಾಹಿ ಯಾವಾಗ ಮುಗಿಯುತ್ತೆ ಅನ್ನೋ ಒಂದು ಸಮಸ್ಯೆ ಬಿಟ್ಟು ಮತ್ತೆಲ್ಲವನ್ನೂ ವರುಣ ಬಗೆಹರಿಸಿ ಆಗಿದೆ.

ನಿಮಗೂ ಏನಾದ್ರು ಸಮಸ್ಯೆ ಇದ್ದಲ್ಲಿ, ಸಂಪರ್ಕಿಸಬಹುದು. ಫೀಸ್ ಜೊತೆ ಒಂದಿಷ್ಟು ಕುರುಕುಲು ತಿಂಡಿ ಕೂಡ ಸರಬರಾಜು ಮಾಡಬೇಕಾದೀತು ಅಷ್ಟೇ. 

Wednesday, June 12, 2013

ಉತ್ತಮ ಪತಿ ಎಂದೆನಿಸಿಕೊಳ್ಳಲು...



“ಒಳ್ಳೆ ಗಂಡ ಸಿಗಲಿ” ಎಂಬ ಆಶಯಕ್ಕೆ ನಮ್ಮ ಶಾಸ್ತ್ರ ಪುರಾಣಗಳು ಯಾವತ್ತೂ ಹಲವು ಉದಾಹರಣೆಯನ್ನು ಸ್ತ್ರೀಯರಿಗೆ ಕೊಟ್ಟಿದೆ. ಪುರುಷರಿಗೆ ಈ ವಿಷಯದಲ್ಲಿ ಅಷ್ಟು ಅವಕಾಶ ಇದ್ದಂತಿಲ್ಲ. (ಅಥವ ನಾನು ಕೇಳಿಲ್ಲ. ) ಆದರೆ ಗಂಡಿನ ಜವಾಬ್ದಾರಿಗಳ ಬಗ್ಗೆ “ಮದುವೆ ಮಂಟಪ ದಲ್ಲೇ ಬೋಧನೆ” ಆಗುತ್ತದೆ. ಆದರೆ ದುರಂತಕ್ಕೆ ಅವುಗಳಲ್ಲಿ ಬಹಳಷ್ಟು ಈ ಕಾಲ ಘಟ್ಟಕ್ಕೆ ತಕ್ಕಂತೆ ಅಪ್ಡೇಟ್ ಆಗಿಲ್ಲ. ಹಾಗಾಗಿ “ಉತ್ತಮ ಪತಿಯಾಗುವುದು ಹೇಗೆ” ಎಂದು ನಮ್ಮ ಟೈಮ್ ಪಾಸು ತಂಡದ ಏಕ ಸದಸ್ಯ ಪೀಠವು ಚಿಂತಿಸಿ, ಯೋಚಿಸಿ, ಚರ್ಚಿಸಿ ಈ ಕೆಳಕಂಡ ಹಿತೋಪದೇಶಗಳನ್ನು ಸಿದ್ದಪಡಿಸಿದೆ.


ಮೊದಲನೇದಾಗಿ ಹೆಂಡತಿಯ ಮಾತಿಗೆ ಯಾವತ್ತೂ ಎದುರಾಡಲು ಹೋಗಬಾರದು. (ಅಂತಾ ದೈರ್ಯ ಯಾವ  ಗಂಡನಿಗೆ ಇದೆ  ಅಲ್ವ?) “ಹೌದು, ಸರಿ, ಹಾಗೆ ಆಗಲಿ, ಖಂಡಿತ.. ಮುಂತಾದ ಪದ ಬಳಕೆ ಮಾಡಬೇಕು. ಸ್ಥಿತಿ ಪ್ರಜ್ಞರಾಗಿ – ತರ್ಕ ಬದ್ದವಾಗಿ  ಮಾತಾಡಲು ಹೊರಟಿರೋ.. ನೀವು ಕೆಟ್ಟಿರಿ.

ಈಗಿನ ಕಾಲದ ಹುಡುಗೀರಿಗೆ ಅಡುಗೆ ಮನೆ ಅಂದ್ರೆ ಅಲರ್ಜಿ. ಸಾರಿನ ಪುಡಿಗೂ, ಹುಳಿ ಪುಡಿ ಗೂ ಇರೋ ವ್ಯತ್ಯಾಸವೇ ಬಹಳಷ್ಟು ಸಲ ಗೊತ್ತಿರೋಲ್ಲ. ಮಡದಿ ಏನು ಮಾಡಿ ಕೊಟ್ಟರೂ, ಯಾವುದೇ ರೀತಿಯ ವಿಮರ್ಶೆ ಮಾಡದೆ ಚಪ್ಪರಿಸುತ್ತಾ ತಿನ್ನಬೇಕು. ಸಾಧ್ಯವಾಗದೆ ಹೋದ್ರೆ, ತಾವೇ ಅಡುಗೆ ಮನೆಗೆ ಧಾಂಗುಡಿ ಇಟ್ಟು ಪ್ರೀತಿಯಿಂದ ಅಡುಗೆ ಮಾಡಿ ಬಡಿಸಬೇಕು.

ಹೆಂಡತಿಗೆ ಅಗತ್ಯ ಇದ್ದಾಗೆಲ್ಲ ದುಡ್ಡು ಕೊಡುತ್ತಾ ಇರಬೇಕು. ಸಾದ್ಯ ಆದ್ರೆ, ಕ್ರೆಡಿಟ್ ಕಾರ್ಡ್ ನೆ ಕೊಡಬೇಕು. ಆಮೇಲೆ ಬಿಲ್ ಬಂದಮೇಲೆ ಖರ್ಚಿನ ವಿವರ ಕೇಳುವ ಮೂರ್ಖ ಕೆಲಸಕ್ಕೆ ಕೈ ಹಾಕಬಾರದು. ತುಟಿ ಪಿಟಿಕ್ ಎನ್ನದೆ ಅದರ ಬಿಲ್ ಕಟ್ಟಬೇಕು.

ಟೀವಿಯಲ್ಲಿ ಇಂಡಿಯಾ – ಪಾಕಿಸ್ತಾನ್ ಮ್ಯಾಚ್ ಬರ್ತಾ ಇದ್ರೂ ಅಥವಾ ಅಪ್ಪಿ ತಪ್ಪಿ ಮನಮೋಹನ ಸಿಂಗ್ ಮಾತಾಡುತ್ತಾ ಇದ್ರೂ (ಎಂಟನೆ ಅದ್ಭುತ) ಅದನ್ನ ನೋಡದೆ, “ಪುಟ್ಟ ಗೌರಿ ಮದುವೆ” ಅಥವಾ ಇನ್ನಾವುದೇ ಹೆಂಡತಿ ನೋಡುವ ಧಾರವಾಹಿ ನೋಡಬೇಕು. ಮುಖ್ಯವಾಗಿ ಆ ಧಾರವಾಹಿ ಸಂಭಾಷಣೆ ಬಗ್ಗೆ, ಪಾತ್ರಗಳ ಬಗ್ಗೆ.. ನಿಮ್ಮ ತರ್ಕಶಾಸ್ತ್ರ ಪ್ರಾವಿಣ್ಯತೆಯನ್ನು ಪ್ರದರ್ಶಿಸಬಾರದು.

ಹೆಂಡತಿ ಕೆಲ್ಸಕ್ಕೆ ಹೋಗುತ್ತಿದ್ದಲ್ಲಿ, ನಿಮ್ಮ ಬೈಕು / ಕಾರಿನಲ್ಲಿ ಉಚಿತ ಸಾರಿಗೆ ವ್ಯವಸ್ತೆ ಕೊಡಬೇಕು. ನಂಗೆ ಅರ್ಥ ಆಗುತ್ತೆ, ಬೈಕು / ಕಾರಿನಲ್ಲಿ ಸ್ವಂತ ಹೆಂಡತಿನ ಕೂರಿಸಿಕೊಂಡು ಹೋಗೋದು ಎಷ್ಟು ಕಷ್ಟದ ವಿಚಾರ ಅಂತ. ಬೇರೆ ಏನಕ್ಕೂ ಅಲ್ಲ, ಜೋರಾಗಿ ಹೋಗು, ಇಲ್ಲಿ ನಿಧಾನಕ್ಕೆ ಹೋಗು, ಈಗ ಕ್ಲಚ್ ಹಿಡಿ ಎಂಬೆಲ್ಲ ಉಪದೇಶ ಕೇಳಬೇಕಲ್ಲ...

ಹೆಂಡತಿಯ ಮಾತಿಗೆ ಯಾವತ್ತೂ, ವ್ಯಾಕರಣ ಬದ್ದವಾದ – ನಿಘಂಟಿನಲ್ಲಿ ವಿವರಿಸಿರುವಂತ ಅರ್ಥವೇ ಇರುತ್ತದೆ ಎಂದು ಭಾವಿಸಬೇಡಿ. ಉದಾ: ಮನೇಲಿ ಕೂತು ಯಾಕೋ ತುಂಬಾ ಬೇಜಾರ್ ಆಗ್ತಾ ಇದೆ ಅಂದ್ರೆ, ಬರುವ ವಾರಾಂತ್ಯ ಎಲ್ಲಾದರು ಹೊರಗೆ ಸುತ್ತಾಡಿಕೊಂಡು ಬರೋಣ ವೆಂತಲೂ! ಊರಿಂದ ಅಮ್ಮ ಫೋನ್ ಮಾಡಿದ್ದಳು ಅಂದ್ರೆ.. ನಿಮ್ಮ ಅತ್ತೆಯವರು ಆಗಮಿಸುತ್ತಾ ಇದ್ದಾರೆ ಅಥವಾ ನಿಮ್ಮ ಮಡದಿಗೆ ತವರಿನ ನೆನಪು ತುಂಬಾ ಆಗುತ್ತಿದೆ ಎಂತಲೂ ಆಗಿರುತ್ತದೆ. ಈ “ಹೆಂಡತಿ ಬಾಷೆ” ಕಲಿಯಲು ಸಮಯ ಹಿಡಿಯುತ್ತದೆ. ಆದಷ್ಟು ಬೇಗ ಕಲಿಯುವುದು ಒಳ್ಳೆಯದು.

ನಿಮ್ಮ ಭಾಷಾ ಜ್ಞಾನ ವೃದ್ದಿಸಿಕೊಂಡಂತೆ, ನೆನಪಿನ ಶಕ್ತಿಯನ್ನು ಕೂಡ ಹೆಚ್ಚಿಸಿಕೊಳ್ಳಬೇಕು. ನಿಮ್ಮ ಮದುವೆಯ ದಿನ, ಹುಟ್ಟಿದ ಹಬ್ಬ ಮುಂತಾದುವು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು. ನಿಮ್ಮದು ಪ್ರೇಮ ವಿವಾಹವಾಗಿದ್ದಾರೆ, ಮೊದಲ ಭೇಟಿ, ಪ್ರೇಮ ನಿವೇದಿಸಿಕೊಂಡ ದಿನ, ಗಳಿಗೆ ಮುಂತಾದುವು ಕೂಡ ನೆನಪಿನ ಕೋಶದಲ್ಲಿ ಭದ್ರವಾಗಿ ಇರಬೇಕು. ನಂತರ “ಒಳ್ಳೆಯ” ಉಡುಗೊರೆಯೊಂದಿಗೆ ನಿಮ್ಮ ನೆನಪಿನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಉಡುಗೊರೆ ಇಲ್ಲದಿದ್ದಲ್ಲಿ, ನೆನಪಿಟ್ಟುಕೊಂಡಿದ್ದು  ಕೂಡ ಪ್ರಯೋಜನಕ್ಕೆ ಬಾರದು.

ಮನೆ ಅಂದ ಮೇಲೆ ಅತ್ತೆ ಸೊಸೆ ಜಗಳ ಇದ್ದಿದ್ದೇ. ಇದೊಂತರ “ಅತ್ತ ದರಿ, ಇತ್ತ ಪುಲಿ” ಸಂಧರ್ಭ. ಈ ಸಮಸ್ಯೆ ಬಂದಾಗೆಲ್ಲ ಅದನ್ನು ಭೇದಿಸುವಲ್ಲಿ ಯಶಸ್ವಿ ಆದಲ್ಲಿ.. ನೀವು ಯಶಸ್ವಿ ಗಂಡ ಏನು.. ಯಶಸ್ವಿ ಮಾನವ ಜೀವಿ ಅಂತ ಗುರುತಿಸಲ್ಪಡುತ್ತಿರಿ.


ಈ ಮೇಲೆ ನಮೂದಿಸಿರುವಂತ ಮಾರ್ಗ ಸೂಚಿಯನ್ನು ಅನುಸರಿಸಿ ಯಶಸ್ವೀ ಗಂಡ ಎಂದು ಬಿರುದು ಪಡೆಯಬೇಕಾಗಿ, ಟೈಮ್ ಪಾಸ್ ಪೀಠವು ಹಾರೈಸುತ್ತದೆ.


(ನಿಮಗೆ ಇದಕ್ಕೂ ಮಿಗಿಲಾದ ಮಾರ್ಗ ಸೂಚಿಗಳು ಗೊತ್ತಿದ್ದಲ್ಲಿ / ಗೊತ್ತಾದಲ್ಲಿ, ಅದನ್ನ ಇಲ್ಲಿ ಹಂಚಿಕೊಂಡು ಪುರುಷ ಜನಾಂಗದ ಏಳಿಗೆಗೆ ಸಹಕರಿಸಬೇಕಾಗಿ ಕೋರಿಕೆ)

Wednesday, November 14, 2012

ಪ್ರೆಮಂ ಮಧುರಂ



ಕಾಗದ ನಗರ 2000

ಸತ್ತಳು ಈಕೆ :
ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?
ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?

ಅರರೆ.. ಬೀರುವಿನಲ್ಲಿ ಏನೋ ಹುಡುಕುತ್ತಿದ್ದಾಗ ಅಕಸ್ಮಾತ್ ಕೈಗೆ ಸಿಕ್ಕ ಕಾಗದದ ಚೂರು. ಅವ್ವ”!!! ವಿಶ್ವ ನ ಮನಸ್ಸು ದಶಕಗಳಷ್ಟು ಹಿಂದಕ್ಕೆ ಹೋಯಿತು.

ಅಂದು ಕಾಲೇಜಿನ ಬೇಲಿ ಹಾರುವಾಗ ವಿಶ್ವ ಮತ್ತೆ ಪಾರಿಯ ಪ್ಯಾಂಟು ಸ್ವಲ್ಪ ಹರಿಯಿತು! ಆದರೇನಂತೆ. ಆಗಲೂ ಹುಡುಗರ ಶೀಲಕ್ಕೆ ಅಷ್ಟು ಬೆಲೆ ಏನೂ ಇರಲಿಲ್ಲವಾದ್ದರಿಂದ ಹಂಗೆ ಕ್ಲಾಸ್ ಗೆ ಸೈನ್ಯ ನುಗ್ಗಿತು. ಬೆಳ್ಳಂ ಬೆಳಗ್ಗೆ ಕನ್ನಡ! ಪಾಪ ದೇವರಾಜ್ ಅವ್ವ ಶುರು ಮಾಡಿದರು. ಆದ್ರೆ ಸ್ವಲ್ಪ ಹೊತ್ತಿನಲ್ಲೇ ಪಾರಿ, ನೀವು ಪದ್ಯದ ಆಶಯ ಹಾಳು ಮಾಡುತ್ತಿದ್ದೀರಿ ಅಂತ ವರಾತ ತೆಗೆದ. ಇದ್ದಕಿದಂತೆ ಹುಡುಗಿಯರ ಗುಂಪಿನಿಂದ  ಅಂಬಿಕೆ ನಿನ್ನ ಆಲೋಚನೆ ಸರಿಯಿಲ್ಲ ಅಂತ ಎದ್ದು ನಿಂತಳು. (ಭಾಗಷ್ಯ ಪೂರ ಹೆಸರು ಅಂಬಿಕ, ಅಂಬಾಲಿಕ ಅಂತ ಏನೋ ಇದ್ದಿರಬಹುದು. ಹುಡುಗರಿಗೆ ಆಂಬಿ, ಅಂಬಿಕೆ ಆಗಿದ್ದಳು.) ಪಾರಿ ಅರ್ಥಾತ್ ಪಾರ್ಥ ಸಾರಥಿ ಹಂಗೆಲ್ಲ ಸೋಲು ಒಪ್ಪಿಕೊಳ್ಳುವವನೇ ಅಲ್ಲ. ಮಾತು ಮುಂದುವರಿಯಿತು, ಗೃಹಭಂಗ ದಿಂದ ಶುರು ಆಗಿ, ಮ್ಯಾಕ್ಸಿಂ ಗಾರ್ಕಿ ಯಾ ಮದರ್ ತನಕ ಹೋಯಿತು. ನೋಟ್ಸ್ ಮಾಡಿಕೊಳ್ಳುವ ನೆಪದಲ್ಲಿ ಚುಕ್ಕಿ ಆಡುತ್ತಿದ್ದ ಹುಡುಗಿಯರೆಲ್ಲ ಕತ್ತು ಎತ್ತಿ ನೋಡಲಾರಂಬಿಸಿದರು. ಮಿಕ್ಕ 8 ಜನ ಹುಡುಗರು ಪಾರಿ ಮಾತಿಗೆ ಡಿ ಟಿ ಎಸ್ ಎಫೆಕ್ಟ್ ಮೂಲಕ ಪಾರಿಗೆ ಬೆಂಬಲ ಸೂಚಿಸಿದರು.  (ಕ್ಲಾಸ್ ನಲ್ಲಿ ಇದ್ದಿದ್ದೆ 9 ಜನ ಹುಡುಗ್ರು) ಗಲಾಟೆ ಜಾಸ್ತಿ ಆಗಿ ಪಕ್ಕದ ಕ್ಲಾಸ್ ಗು ಕೇಳಿಸಿತು, ಪ್ರಿಸಿಪಾಲ್ ರಮೇಶ್ ಕಿವಿಗೂ ಬಡಿಯಿತು. ಯಾವಾಗಲು ಹೊಡೆದಾಟ ಬಡಿದಾಟ ಗಳಿಗೆ ಪ್ರಸಿದ್ದವಾದ ಭದ್ರಾವತಿಯಲ್ಲಿ, ಹುಡುಗರು ಪಾಠದ ಬಗ್ಗೆ ಚರ್ಚಿಸುವುದು ಕಂಡು ಕುಶಿ ಪಟ್ಟರು. ! ಆದ್ರೆ ದೇವರಾಜ್ ಮಾತ್ರ ಏನೂ ಮಾಡಲು ತೋಚದೆ ಗರ ಬಡಿದವರಂತೆ ನಿಂತಿದ್ದರು. ಕೊನೆಗೆ ಕವನ ಏನಾಯಿತೋ, ಪಾರಿ ಅಂಬಿ ಮಾತ್ರ ಒಳ್ಳೆ ದುಶ್ಮನ್ ಗಳು ಆದರು!

ಆದ್ರೆ ನಮ್ಮೂರಿನ ಲಕ್ಷ್ಮೀನರಸಿಂಹನ ದಯೇನೋ ಏನೋ, ಇದ್ದಕಿದ್ದಂತೆ ಒಂದು ದಿನ ಜನಪ್ರಿಯ ಶಾಸಕರು ನಾಪತ್ತೆ ಆಗಿದ್ದಾರೆ, ಕಿಡ್ನಾಪ್ ಆಗಿದ್ದಾರೆ ಅಂತೆಲ್ಲಾ ಗುಲ್ಲೆಬಿತು. ಕೂಡಲೇ ಶಾಲೆ ಕಾಲೇಜು ಮುಚ್ಚಲು ಆದೇಶ ಬಂತು. ನವಗ್ರಹಗಳೆಂದು ಹೆಸರುವಾಸಿಯಾಗಿದ್ದ!  ಹುಡುಗರಿಗೆ ಹುಡುಗಿಯರನ್ನು ಸುರಕ್ಷಿತವಾಗಿ ಮನೆ ತಲುಪಿಸಲು ಪ್ರಿನ್ಸಿಪಾಲ್ ಹೇಳಿದರು. ಬಸ್ಸು, ಆಟೋ ಏನೂ ಇಲ್ಲದ್ದರಿಂದ ನಡೆದೇ ಹೋಗಬೇಕಾಯಿತು. ದುರಂತಕ್ಕೆ ಪಾರಿಗೆ ಅಂಬಿಕಾ ಳನ್ನು ಮನೆಗೆ ತಲುಪಿಸುವ ಜವಾಬ್ದಾರಿ ನೀಡಲಾಯಿತು. (ಅವರಿಬ್ಬರಿಗೂ ಇಷ್ಟವಿರಲಿಲ್ಲ )

ಪ್ರಪಂಚ ಎಷ್ಟು ಬೇಗ ಬದಲಾಗುತ್ತೆ ಅಂತ ಕಾಲೇಜಿಗೆ ಪ್ರಾತ್ಯಕ್ಷಿಕವಾಗಿ ಗೊತ್ತಾಗಿದ್ದು, ಮಾರನೆದಿನ ಪಾರಿ ಆಂಬಿ ನ ಒಟ್ಟಿಗೆ ನೋಡಿದಾಗ. ಅವನಂತ ಬ್ರಹ್ಮಚಾರಿ ಜೊತೆ ಒಂದು ಸುಂದರ ಹುಡುಗಿ ನೋಡಿದಾಗ, ವಿಜ್ಞಾನಿಗಳು ಹೇಳಿದ್ದಕಿಂತ ಜೋರಾಗಿ ಕಾಲಡಿಯ ಭೂಮಿ ತಿರುಗ್ತಾ ಇದೆ ಅಂತ ಎಲ್ಲರಿಗೂ ಭಾಸ ಆಯಿತು. 

ಡಿಗ್ರಿ ಮುಗಿದ ಮೇಲೆ ಅವಳ ಮನೆ ಹತ್ತಿರಾನೆ ಇದ್ದ ಒಂದು ಸಂಜೆ ಪತ್ರಿಕೆ ಗೆ ಇವರನು ಸೇರಿದ. ಒಂದು ವರ್ಷದ ನಂತರ ಅಂಬಿಕಾ ಎಂ ಸಿ ಎ ಮಾಡ್ತೀನಿ ಅಂತ ಬೆಂಗಳೂರ್ ಗೆ ಹೋದಳು. ಇವನ್ನು ಕೂಡ ಗಂಟು ಮೂಟೆ ಕಟ್ಟಿದ. ಇನ್ನೂ ದಿನಗಳು ಹಿಂದಕ್ಕೆ ಹರಿತಿತ್ತೋ ಏನೋ
, ಆದ್ರೆ ಕಾರ್ಖಾನೆ ಸೈರನ್ ಕೇಳಿಸ್ತು! ಕೈಲಿದ್ದ ಕಾಗದನ ಜೋಪಾನವಾಗಿ ಹಾಗೆ ಬೀರುವಿನಲ್ಲಿ ಇಟ್ಟು, ಯುನಿಫಾರ್ಮ್ ಹಾಕಿ, ಹೊರಡಲನುವಾದ.


ಅರ್ಕಾವತಿ 2007  

ಸಾಗರನ ಹೃದಯದಲಿ
ರತ್ನಪರ್ವತ ಮಾಲೆ
ಮಿಂಚಿನಲಿ ಮೀವುದಂತೆ
ತೀರದಲಿ ಬಳುಕುವಲ್ಲೆ
ಕಣ್ಣಚುಂಬಿಸಿ ಮತ್ತೆ
ಸಾಗುವುದು ಕನಸಿನಂತೆ
ನಿನ್ನೋಳಿದೆ ನನ್ನ ಮನಸ್ಸು

ಬೇಡ ಬೇಡ ಅಂದ್ರು, ಕೈ ಎಫ್ ಎಂ ಹಾಕುತ್ತೆ. ಯಾಕೋ ಒಂಟಿತನ ಅಸಹನೀಯ ಆಗುತ್ತಿದೆಯೋ ಏನೋ ಅಂತ ಅನ್ನಿಸುವಷ್ಟರಲ್ಲಿ ಮೈಸೂರು ಮಲ್ಲಿಗೆ ಬರುತ್ತಲಿತ್ತು. ರಮ್ಮಿ ಅಲಿಯಾಸ್ ರಮೇಶ್ಚಂದ್ರ, ತೀರ ಅನ್ಯಮನಸ್ಕನಾಗಿ ಮನಸ್ಸು ಹೊರಳಿಸ ತೊಡಗಿದ. ಬೂತಕಾಲದ ಹಕ್ಕಿಗೆ, ರೆಕ್ಕೆಗಳ ಅಗತ್ಯವೂ ಇದ್ದಂತಿಲ್ಲ.

ಸುಮಾರು 2004-05, ರಮ್ಮಿಯ ಬಾಳಿನಲ್ಲೂ ಸುನಾಮಿ ಎದ್ದಿತ್ತು. ತಾನು ಅಗಾಧವಾಗಿ ಪ್ರೀತಿಸುತ್ತಿದ್ದ, ಆದರೆ ಅದನ್ನು ವ್ಯಕ್ತ ಪಡಿಸಲು ದೈರ್ಯ ಸಾಲದೇ ಇದ್ದ, ರಾಧಾ ಬೇರೊಂದು ಮದುವೆ ಆಗಿದ್ದಳು. ಏಕ ಮುಖ ವಾದ ಯಾವ ಸಂಬಂದವೂ ಶಾಶ್ವತವಲ್ಲ. ಅದು ಹುಟ್ಟುವಾಗಲೇ ಸಾವಿನ ದಿನಾಂಕ ನಮೂದಾಗಿರುತ್ತೆ. ನೀನು ಅವಳಿಲ್ಲದೆ ಬದುಕೊಲ್ಲ ಅಂತ ಹೇಳಬೇಡ, ಯಾಕೆಂದ್ರೆ ಅದು ಸುಳ್ಳು. ಅವಳಿಲ್ಲದೆ ಬದುಕೇ ಶೂನ್ಯ ಎನ್ನಬೇಡ, ಅದು ಆತ್ಮವಂಚನೆ. ಹೀಗೆಲ್ಲ ಹೇಳಿದವನು ಜೊತೆಗೆ ಕೆಲಸ ಮಾಡುತ್ತಿದ್ದ, ಹಳೆಯ ರೂಂ ಮೇಟ್ ಮಿತ್ರ ಪಾರ್ಥ.

ಇಂತಾ ಪಾರ್ಥನಿಗೂ ಒಂದು ಪ್ರೇಮವಿತ್ತು. ಅಂಬಿಕಾ! ಅವಳು ಎಂ ಸಿ ಎ ಓದುತ್ತಿದ್ದರೆ ಈತ ಕೆಲಸ ಮಾಡುತ್ತಿದ್ದ. ಅವಳ ಓದು ಮುಗಿಯುವ ಹೊತ್ತಿಗೆ ಬೀಕರ ರೆಸೆಶನ್! ಇವನು ಅದೆಲಿಂದನೋ ರೆಫೆರೆನ್ಸ್ ತಂದು, ಅಂಬಿಕಾಗೆ ದೊಡ್ಡ MNCನಲ್ಲಿ ಕೆಲಸ ಕೊಡಿಸಿದ! ಆದರೆ ಮಾರುಕಟ್ಟೆ ಏರಿಳಿತ ದಿಂದ ನಮ್ಮ ಕಂಪನಿ ಲಾಸ್ ಆಗತೊಡಗಿತು. ಅದರ ಮೊದಲ ಬಲಿ ಪಾರ್ಥ.

ಎಕನಾಮಿಕ್ಸ್ ಗು ಕನ್ನಡದ ಪ್ರೀತಿ ಪದಗಳಿಗೂ ಇರೋ ಸಂಬಂದ ಅರ್ಥ ಆಗಿದ್ದು, ಅವರಿಬ್ಬರ ಸಂಬಂದದ ಗೋಡೆಯಲ್ಲಿ ಬಿರುಕು ಕಂಡಾಗ.  ಅಂಬಿಕಾ, ಪಾರ್ಥ ನ ಕಾಲ್ ತೆಗೆದು ಕೊಳ್ಳೋದು ಕಡಿಮೆ ಮಾಡತೊಡಗಿದಳು, ಇದ್ದಕ್ಕಿದ್ದಂತೆ ಪ್ರಾಜೆಕ್ಟ್ ಕೆಲಸ ಅಂತ  ಅಮೆರಿಕ ಹೊರಟು ಹೋದಳು. ವಾಪಸ್ ಬಂದ ಎರಡು ತಿಂಗಳೊಳಗೆ, ಒಂದು ಇಳಿ ಸಂಜೆ ಮದುವೆ ಪತ್ರಿಕೆ ರೂಂ ನ ಮುಂದೆ ಬಿದ್ದಿತ್ತು! 

ಪ್ರೀತಿಯೇ ಸುಳ್ಳೇನೋ ಅಥವಾ ಪ್ರೀತಿಸಿದ್ದೆ ಸುಳ್ಳೇನೋ ಅನ್ನುವ ಹಾಗೆ ಪಾರ್ಥ ನಿರಮ್ಮಳನಾಗಿದ್ದ. ಆದರೆ ಅದೆಲ್ಲ ನಾಟಕ ಅಂತ ಗೊತ್ತಾಗಿದ್ದು ರೂಮಿನಲ್ಲಿ ಒಮ್ಮೆ ಕಂಠಪೂರ್ತಿ ಕುಡಿದು ಅಳುತ್ತಿದ್ದಾಗ. ನಾನು ರೂಂ ಗೆ ಈಗ ಬರಬಾರದಿತ್ತು ಎಂದು ಕೊಳ್ಳುವ ಹೊತ್ತಿಗೆ
, ಅವನು ಮಾತನಾಡತೊಡಗಿದ. ಮಾತಿನಲ್ಲಿ ಭದ್ರಾವತಿ ಬಂತು, ಅವನ ವಯಸ್ಸಾದ ಅಪ್ಪ ಇದ್ರು, ಅಮೆರಿಕಾದ ದುಷ್ಟ ನೀತಿಗಳು, ಅವರಿಗಾಗಿ ನಿದ್ದೆ ಬಿಡೋ ನಮ್ಮಂತ ಅಪ್ರಯೋಜಕರು, ಹೀಗೆ ಎಲ್ಲೆಲ್ಲೋ.. ಆದರೆ ಮಾತು ಅಂಬಿಕಾಳಲ್ಲಿ ನಿಂತಿತು.

ಕೆಲಸವಿಲ್ಲದ ಹುಡುಗ ಪ್ರೀತಿಸಲು ನಾಲಾಯಕ್ಕು ಅಂತ ತಿಳೀಲಿಕ್ಕೆ ಅದೆಷ್ಟೋ ಮಳೆಗಾಲ ನನ್ನ ಜೀವನದಲ್ಲಿ ಬರಬೇಕಾಯಿತು ಅಂತ ಕಿರುಚಿದ. ಈ ಒಂಟಿತನ ನನ್ನ ಕೊಲ್ತಾ ಇದೆ ಕಣೋ ರಮ್ಮಿ ಅಂತ ಗೋಳಾಡಿದ. ಅವಳಿಲ್ಲದೆ ಈ ಬದುಕಿಗೆ ಅರ್ಥ ಇರೋಲ್ಲ ಕಣೋ, ಯಾಕೆಂದರೆ ನನ್ನಲ್ಲಿ ಒಬ್ಬ ದೊಡ್ಡ ಪೋಲಿ, ವಂಚಕ, ದ್ರೋಹಿ, ಪುಕ್ಕಲ, ಪಲಾಯನವಾದಿ, ಸೋಂಬೇರಿ ಎಲ್ಲಾ ಇದ್ದಾನೆ. ಆದರೆ ಹೊರಗೆ ಮಾತ್ರ ನಾನೊಬ್ಬ ಸಂಭಾವಿತ. ಆದರೆ ಇವಿಷ್ಟೂ ಗೊತ್ತಿದ್ದೂ, ಗೊತ್ತಿದ್ದೂ ಪ್ರೀತಿಸಿದ್ದು ಆಂಬಿ. ಯಾರನ್ನಾದರು ನಾವು ಸಂಪೂರ್ಣವಾಗಿ ಅರ್ಥ ಮಾಡಿ ಕೊಂಡೂ ಅಲ್ಲಿ, ದ್ವೇಷ, ತಿರಸ್ಕಾರ ಹುಟ್ಟಲಿಲ್ಲ ಅಂದ್ರೆ... ಅಲ್ಲಿ ಇರುವುದು ಪ್ರೀತಿ ಮಾತ್ರ ಅಂತೆಲ್ಲಾ ಹೇಳಿದ. ನನಗೆಷ್ಟು ಅರ್ಥ ಆಯಿತೋ, ಆದರೆ ಸುಮ್ಮನೆ ಅವನ ಹೆಗಲು ಮುಟ್ಟಿ ಸಂತೈಸಿದೆ.
ಕಾಲ ಕಳೆಯಿತು. 2009ರ ಒಂದು ಬಿಸಿಲಿನ ದಿನ, ತನ್ನೆಲ್ಲಾ ವಸ್ತು ಗಳನ್ನು ಮಾರಿ ದುಡ್ಡು ತಂದ. ದುಬೈ ಚೆನ್ನಾಗಿದೆ, ಅಲ್ಲಿ ಹೋಗಿ ಬದುಕ್ತೀನಿ ಅಂತ ಹೊರಟೇ ಹೋದ. ಮದ್ಯ ಪ್ರಾಚ್ಯ ದಲ್ಲಿ ಅರ್ಥಿಕ ಹಿಂಜರಿತದ ಹೊಡೆತ ಬಿದ್ದಿರಲಿಲ್ಲ. ಆಮೇಲೆ ಅವನು ಈಜಿಪ್ಟ್ ಗೆ ಹೋದ ಅಂತ ಫೇಸ್  ಬುಕ್ ನ ಸ್ಟೇಟಸ್ ತೋರಿಸ್ತಾ ಇತ್ತು.


ಈಗ ರಮ್ಮಿ ಫೇಸ್ ಬುಕ್, ಅಡಿಕ್ಟ್ ಆಗಿದ್ದಾನೆ. ಗ್ರೇಟ್ ಮೈಂಡ್ ಅನ್ನೋ ಹೆಸರಲ್ಲಿ, ಅದೆಷ್ಟೋ ರಾಧೆಯರ ಹತ್ತಿರ ಮಾತಾಡ್ತಾನೆ. ತನ್ನ ಕಳೆದು ಹೋದ ರಾಧೇ ಹುಡುಕುತ್ತಾ.



ಭದ್ರಾ:  2011

ಓ ಮನಸೇ, ಒಂದು ಮನಸಲೆರಡು ಮನಸು ಎಲ್ಲ ಮನಸ ನಿಯಮ
ಓ ಮನಸೇ, ಎರಡು ಹಾಲು ಮನಸಲ್ಲೊಂದು ಮನಸು ಇದ್ದರೆ ಪ್ರೇಮ.

ರಜಕ್ಕೆ ಊರಿಗೆ ಬಂದು, ಚಾನೆಲ್ ತಿರುವುತ್ತಿರುವಾಗ ಅಕಸ್ಮಾತ್ ಹಾಡು ಕೇಳಿಸ್ತು. ಅಡುಗೆ ಮನೇಲಿ ಅಮ್ಮ, ಪೂರಿ ಕರಿಯುತ್ತಾ ಇದ್ದರೂ, ಮನ್ಸಸ್ಸು ಸಿಟಿ ಬಸ್ಸು ಹತ್ತಿ ಎಲ್ಲಿಗೂ ಹೊರಟಿತ್ತು. ಕಾರಣ ಪಾರ್ಥ ಸಾರಥಿ. ಆರು ವರುಷಗಳ ಪ್ರೀತಿ. 

ಮೊದ ಮೊದಲಿಗೆ ಅವನ ಪ್ರತಿ ಭೇಟಿಯು ಆಕರ್ಷಣೆ, ಜೊತೆ ಇದ್ದಷ್ಟು ಹೊತ್ತು ಸಾಲದು. ಆ ಅಂಗೈ ಬಿಸಿಗೆ ಹಪಹಪಿತನ. ಆಮೇಲೆ ಕರ್ತವ್ಯ! ಕೊನೆ ಕೊನೆಗೆ, ಬಂಧನ. ಹೌದು ಎನ್ನೊಂದೂ ನಿರೀಕ್ಷೆಗಳು ಇಲ್ಲದೆ ಶುರು ವಾದ ಪ್ರೀತಿ ಅಲ್ಲವ. ಅದೆಷ್ಟು ಸಲ ರಂಗ ಶಂಕರ ದ ಆ ಬೆಂಚಿನ ಮೇಲೆ ಕೂತು, ಈ ದೇಶವೇ ತಲೆ ಮೇಲೆ ಕೂತಿದೆ ಅನ್ನೋ ಹಾಗೆ ಮಾಡಿದ ಚರ್ಚೆ, ಆಡಿದ ಜಗಳ, ಮರೆಯಲು ಸಾದ್ಯವೇ. ಅದು ಪ್ರಕಾಶ್ ಬೆಳವಾಡಿ ಇರಬೇಕು ? ಭಾರತಿ ಪುರ ದ ಬಗ್ಗೆ ಜಗಳ ಮಾಡುವಾಗ "ಸ್ವಲ್ಪ ಸಣ್ಣ ಮಾತಾಡಿ" ಅಂದಿದ್ದು! 

ಕಾಲೇಜಿನ ಮೊದಲ ದಿನಗಳಲ್ಲಿ ಪಾರಿ ಹೆಸರು ಕೇಳಿದರೆ ಅಂದ್ರೆ ಆಗ್ತಿರ್ಲಿಲ್ಲ. ಆಮೇಲೆ ಕಾರಣಾನೆ ಇಲ್ಲದೆ ಇಷ್ಟ ಆದ, ಆಮೇಲೆ ಯಾಕೆ ಇಷ್ಟ ಆಗ್ಲಿಲ್ಲ! ನನಗೋಸ್ಕರ ಜೀವ ಬಿಡಲೂ ಸಿದ್ದ ಇದ್ದ.  ಆದರು ನಾನು ಯಾಕೆ ನಿನ್ನಿಂದ ದೂರ ಆದೆ, ನಾನು ಮಾಡಿದ್ದು ಸರಿ ಹೌದೋ ಅಲ್ವೋ ಅಂತ ಈಗಲೂ ಅನುಮಾನ ಕಾಡುತ್ತೆ.  ಹೌದು ಆ ಲೆಕ್ಕದಲ್ಲಿ ನಾನು ಸ್ವಾರ್ಥಿ. ಅವನಿಂದ ಎಲ್ಲಾ ಉಪಯೋಗ ಪಡೆದೆ.  ಆದರೂ ನಾನು, ಆ ಕೈ ತೋಳಿನಲ್ಲಿ, ನಾನು ನಾನಾಗಿ ಇರಲಿಕ್ಕೆ ಆಗ್ತಾ ಇರಲಿಲ್ಲ.

ಅದೊಂದು ದಿನ ರಂಗ ಶಂಕರ ದಲ್ಲಿ ಫಾದರ್ ಅನ್ನೋ ನಾಟಕ ನಡೆದಿತ್ತು. ಅರ್ದಕ್ಕೆ ಎದ್ದು ಬರಲಾಗದೆ, ಕೂತು ನೋಡಲಾಗದೆ ಕಷ್ಟ ಅನುಭವಿಸಿದ್ದೆವು. ಆ ಇಳಿ ಸಂಜೆ ಚಪ್ಪಲಿ ಹುಡುಕುತ್ತಾ ಜಯನಗರಕ್ಕೆ ನಡೆದು ಸಾಗಿದ್ದೆವು. ಚೆನ್ನಾಗಿ ನೆನಪಿದೆ! ನಂಗೆ ಇಷ್ಟ ಆಗಿದ್ದ ಚಪ್ಪಲಿ ಕೊಳ್ಳಲು  ತೊಗೊಳೋಕು ಬಿಡಲಿಲ್ಲ. ಒಂದು ಪ್ಲೇಟ್ ಪಾನಿ ಪುರಿ ಒಟ್ಟಾಗಿ ತಿನ್ನೋಕು ಎಷ್ಟು RESTRICTIONS! ಅವನು ಹೇಳಿದನ್ನೇ ನಾನು ತಿನ್ನಬೇಕಿತು.ಮೊದಮೊದಲು ಇದನ್ನ ಅಕ್ಕರೆ ಅಂದ್ಕೊಂಡೆ, ಆಮೇಲೆ POSSISSIVENESS ಅನ್ನಿಸಿತು. ಆದ್ರೆ ಹೋಗ್ತಾ ಹೋಗ್ತಾ ಅದು ಹುಚ್ಚು ಅನ್ನಿಸಿತು. ರಿಸೆಶನ್ ಸಮಯದಲ್ಲಿ ಪಾರಿ ಕೆಲಸ ಹೋದಾಗನನ್ನ ಹಂಗಿಸಲು ಶುರು ಮಾಡಿದ.  ಆ ಹುಚ್ಚು ಬಿಡಸೋಕೆ ಹೋಗಿ ನನ್ನ ಮನಸು ಸೊರಗಿತು. ಅಂತದ್ರಲ್ಲಿ ಅದೇ ಕೆಲಸದಲ್ಲೇ ನಾನು ಇದ್ರೆ ನನ್ನ ಸ್ವಂತಿಕೆ ಎಲ್ಲಿ ಸತ್ತು ಹೋಗುವುದೋ ಅಂತ ಭಯ ಆಯಿತು.ನನ್ನ ಆದರ್ಶ ಕಾಲೇಜ್ ದಿನಗಳ ಚರ್ಚಾ ಸ್ಪರ್ದೆಗೆ ಸೀಮಿತವಾಗೋದು ಸಹ್ಯ ಅಂತ ಅನ್ನಿಸಲಿಲ್ಲ. ಹೌದು, ನಾನು ಹೋಗ್ತಾ ಇರೋದಕ್ಕೆ ಕಾರಣ ಹೇಳಿದ್ರೆ ಅವನು ಬದಲಾಗುತ್ತಾನೆ ಅನ್ನೋ ನಂಬಿಕೆ ನಂಗೆ ಇರ್ಲಿಲ್ಲ, ನ್ಯುಯಾರ್ಕ್ ನಲ್ಲಿ ಇರುವಾಗ ಪ್ರತಿ ದಿನ ಅವನದೇ  ನೆನಪು. ಆರ್ಕುಟ್ ನಲ್ಲಿ ನೋಡುತ್ತಲೇ ಇದ್ದೆ. ಆದ್ರೆ ಫೋಟೋ ಕಂಪ್ಯೂಟರ್ ಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಅಂತ ಅನ್ನಿಸಲೇ ಇಲ್ಲ.  ನಂಗೆ ಅವನೇನು ಏನು ಅಂತ ಗೊತ್ತು, ಆದ್ರೆ ನಾನು ಏನು ಅಂತ  ಕೊನೆಗೂ ಅರ್ಥ  ಅವನಿಗೆ ಅರ್ಥ ಆಗಲಿಲ್ಲ.. 

ಈ ಉಸಿರುಗಟ್ಟುವ ಸಂಬಂಧದ ಬಗ್ಗೆ ಅಸಹ್ಯ ಬರೋಕೆ ಮುಂಚೆ ನಾನು ಎಲ್ಲಾ ಬಿಟ್ಟು ಬಂದೆ. ನನ್ನ ಪಾಲಿಗೆ ಕಾಲೇಜಿನಲ್ಲಿ ಜಗಳ ಮಾಡಿದ ಆ ಪಾರಿ ನನಗೆ ಪ್ರಾಣ. ಆ ನೆನಪುಗಳು ನಾನು ಬದುಕಿರೋ ವರೆಗೂ ಇರುತ್ತೆ. ಕೊನೆಗೆ ಊರಿಗೆ ಬಂದು ಅಪ್ಪ ತೋರಿಸಿದ ಹುಡುಗನ್ನ ಮದುವೆ ಆದೆ.  . 
ಅಷ್ಟರಲ್ಲಿ ಅಂಬಿಕಾಳ ತಮ್ಮ, ರಾಘವೇಂದ್ರ ಚಾನೆಲ್ ಬದಲಿಸಲು ಶುರುಮಾಡಿದ. ಒಳಗಿಂದ  ಪೂರಿ ತಯಾರಾಗಿದೆ ತಿಂಡಿಗೆ ಬಾ ಅನ್ನೋ ಕೂಗು  ಇತ್ತು.  "ಈಜಿಪ್ಟ್ ನಲ್ಲಿ ನಡೆಯುತ್ತಿರುವ ಕ್ರಾಂತಿಯಲ್ಲಿ, ಕರ್ನಾಟಕ ಮೂಲದ ಸಾರಥಿ ಎಂಬುವವರಿಗೆ ... "..  ಅಂತ ಟೀವಿ ಹೇಳೋ ಹೊತ್ತಿಗೆ ಕರೆಂಟ್ ಹೋಯಿತು. ಅಂಬಿಕಾ ಯಾವುದನ್ನೂ ಕೇಳಿಸಿಕೊಳ್ಳುವ ಸ್ತಿತಿಯಲ್ಲಿ ಇರಲಿಲ್ಲ.


ಮಾಹಿತಿ: ಸೆಪ್ಟೆಂಬರ್ 8, 2000 ರಿಂದ ಭದ್ರಾವತಿಯ ಅಂದಿನ ಶಾಸಕರಾದ ಅಪ್ಪಾಜಿ ಗೌಡ, ನಾಪತ್ತೆ ಆಗಿದ್ದರೆ ಅಂತ ಸುದ್ದಿ ಹಬ್ಬಿತ್ತು.
           ಅವ್ವ ಕವನವು, ಕುವೆಂಪು ವಿಶ್ವವಿದ್ಯಾಲಯ ದ ಪದವಿಯಾ ಕನ್ನಡ ವಿಷಯದಲ್ಲಿ ಇದ್ದಿತು.   
ಇಬ್ಬರು ಸೇರಿ ಒಂದು ಸಿನಿಮಾ ನಿರ್ದೇಶನ ಮಾಡ್ತಾರೆ. ಸಂಗೀತ ಕೊಡ್ತಾರೆ. ಹಾಗೆ ಇಬ್ಬರು ಸೇರಿ ಕಾದಂಬರಿ ಬರೆಯೋದು ಕೂಡ ಹೊಸತಲ್ಲ. ಹಾಗೆಯೇ ಇದು,  ನಾನು ಮತ್ತೆ ನನ್ನ ಸ್ನೇಹಿತೆ ಒಬ್ಬಳು ಕುಂತು ಬರೆದ ಕಥೆ!